ಎರಡು ದಿನಗಳ ಸಂಕ್ರಾಂತಿ ರಂಗೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Jan 19, 2026, 12:45 AM IST
ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗಜಂಗಮ ಸಂಸ್ಥೆ ಡಿ.ಕಗ್ಗಲ್ ಹಾಗೂ ಆಲಾಪ್ ಸಂಗೀತ ಕಲಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸಂಕ್ರಾಂತಿ ರಂಗೋತ್ಸವ-2026 ಕ್ಕೆ ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗಜಂಗಮ ಸಂಸ್ಥೆ ಡಿ.ಕಗ್ಗಲ್ ಹಾಗೂ ಆಲಾಪ್ ಸಂಗೀತ ಕಲಾಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸಂಕ್ರಾಂತಿ ರಂಗೋತ್ಸವ-2026 ಕ್ಕೆ ಚಾಲನೆ ದೊರೆಯಿತು

ಬಳ್ಳಾರಿ: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗಜಂಗಮ ಸಂಸ್ಥೆ ಡಿ.ಕಗ್ಗಲ್ ಹಾಗೂ ಆಲಾಪ್ ಸಂಗೀತ ಕಲಾಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸಂಕ್ರಾಂತಿ ರಂಗೋತ್ಸವ-2026 ಕ್ಕೆ ಚಾಲನೆ ದೊರೆಯಿತು.

ಉದ್ಘಾಟಿಸಿ ಮಾತನಾಡಿದ ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್, ಅಹಿಂಸೆ ಮೂಲಕ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಿದೆ ಎಂಬುದು ಗಾಂಧೀಜಿಯವರ ಆದರ್ಶ ಜೀವನ ದರ್ಶನದಿಂದ ನಮಗೆ ವೇದ್ಯವಾಗುತ್ತದೆ. ಗಾಂಧಿ ಎಲ್ಲ ಕಾಲಕ್ಕೂ ಪ್ರಸ್ತುತ. ಸಾತ್ವಿಕ ರೂಪದಲ್ಲಿ ಸ್ವಾತಂತ್ರ್ಯ ಹೋರಾಟ ರೂಪಿಸಿದ ಅವರು ಸತ್ಯಾಗ್ರಹ ಎಂದು ಕರೆದುಕೊಂಡರು. ನಿರಂತರ ಸತ್ಯ ಶೋಧದಲ್ಲಿ ತೊಡಗಿದ ಬಾಪು, ಆ ಶೋಧದ ಬೆಳಗಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳುತ್ತಾ ಸಾಗಿದರು. ಪ್ರತಿಯೊಬ್ಬರಲ್ಲೂ ಗಾಂಧಿ ಇದ್ದಾರೆ. ಆದರೆ, ನಮ್ಮೊಳಗಿನ ಗಾಂಧಿಯನ್ನು ಶೋಧಿಸಿಕೊಳ್ಳಬೇಕು. ಗಾಂಧೀಜಿಯವರ ಚಿಂತನೆ ಹಾಗೂ ಆದರ್ಶನೀಯ ಬದುಕನನ್ನು ನಮ್ಮದಾಗಿಸಿಕೊಳ್ಳುವ ಪ್ರಮಾಣಿಕ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರಲ್ಲದೆ, "ನಮ್ಮೊಳಗೊಬ್ಬ ಗಾಂಧಿ ನಾಟಕ "ವು ವರ್ತಮಾನದಲ್ಲೂ ಅಂಥ ಮಹಾತ್ಮನನ್ನು ಅರಿಯಲು ಯತ್ನಿಸುವ ಪ್ರಾಮಾಣಿಕ ಪ್ರಯತ್ನವೂ ಆಗಿದೆ ಎಂದು ತಿಳಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ ಹಂದಿಹಾಳು ಮಾತನಾಡಿ, ಅಹಿಂಸೆ, ಸಹಿಷ್ಣುತೆ, ಸೌಹಾರ್ದತೆ, ಸಹಬಾಳ್ವೆ, ಸಮಾನತೆ ಹಾಗೂ ಶೋಷಣೆ ರಹಿತ ಸಮಾಜದ ನಿರ್ಮಾಣದ ಆಶಯ ಹೊಂದಿದ್ದ ಗಾಂಧೀಜಿಯವರ ಚಿಂತನೆಗಳು ಪ್ರತಿಯೊಬ್ಬರ ಮನದಲ್ಲಿ ಸದಾ ಪ್ರತಿಧ್ವನಿಸುತ್ತಿರಬೇಕು. ಅದರಲ್ಲೂ ಯುವ ಸಮುದಾಯಕ್ಕೆ ಗಾಂಧೀಜಿಯ ಹೋರಾಟ ಬದುಕು ಪರಿಚಯವಾಗಬೇಕು ಎಂದರು.

ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಎಂದು ಪ್ರಬಲವಾಗಿ ನಂಬಿಕೆಯಿಟ್ಟುಕೊಂಡಿದ್ದರು. ಸ್ವದೇಶಿ ಅವಲಂಬನೆಯಿಂದ ಮಾತ್ರ ಭಾರತ ಬೆಳಗಲು ಸಾಧ್ಯ ಎಂದು ಭಾವಿಸಿದ್ದರು. ಈ ಕಾರಣಕ್ಕಾಗಿಯೇ ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದರು. ಖಾದಿ ಮತ್ತು ಗ್ರಾಮೋದ್ಯಗಕ್ಕೆ ಉತ್ತೇಜನ ನೀಡಿದರು ಎಂದು ತಿಳಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ವಿ.ರಾಮಚಂದ್ರಪ್ಪ, ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಎನ್‌.ಪ್ರಕಾಶ್, ರಂಗಜಂಗಮ ಸಂಸ್ಥೆಯ ಮುಖ್ಯಸ್ಥ ಅಣ್ಣಾಜಿ ಕೃಷ್ಣಾರೆಡ್ಡಿ ಡಿ.ಕಗ್ಗಲ್, ಎಸ್.ದೊಡ್ಡನಗೌಡ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಮುದ್ದಟನೂರು ಉಪಸ್ಥಿತರಿದ್ದರು. ಆಲಾಪ್ ಸಂಗೀತ ಕಲಾ ಟ್ರಸ್ಟ್‌ನ ಅಧ್ಯಕ್ಷ ರಮಣಪ್ಪ ಭಜಂತ್ರಿ, ಆಲಂಬಾಷಾ ಹಾಗೂ ಗೋವರ್ಧನ ರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ಇದೇವೇಳೆ

ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಂಪ್ಲಿ ಈರಣ್ಣ ಅವರನ್ನು ಸನ್ಮಾನಿಸಲಾಯಿತು . ವಿನೋದ್ ಮತ್ತು ತಂಡದವರು ಜಾನಪದ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಕೊನೆಯಲ್ಲಿ ಶಿವಮೊಗ್ಗ ರಂಗಾಯಣ ತಂಡವು ಡಿ.ಎಸ್‌.ಚೌಗಲೆ ರಚನೆಯ ನಮ್ಮೊಳಗೊಬ್ಬ ಗಾಂಧಿ ನಾಟಕ ಪ್ರದರ್ಶನ ನೀಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಡ್ಡಾಯ ಪ್ರವೇಶಕ್ಕೆ ಆಗ್ರಹ
ಹೇಳಿಕೆ ಮಾತು ಬಿಟ್ಟು ಜನಪರ ಅಭಿವೃದ್ಧಿ ಕೆಲಸ ಮಾಡಲಿ: ಸಂಸದ ಬಿ.ವೈ ರಾಘವೇಂದ್ರ