ಉಡುಪಿ: ಇಲ್ಲಿನ ಗೀತಾ ಮಂದಿರದ ಶ್ರೀ ನೃಸಿಂಹ ಆಡಿಟೋರಿಯಂನಲ್ಲಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬರೆದು, ಡಾ. ಶ್ರೀಪಾದ ಭಟ್ ನಿರ್ದೇಶಿಸಿದ, ಅಯನಾ ವಿ. ರಮಣ್ ಅವರ ಅಭಿನಯದ ‘ಊರ್ಮಿಳಾ’ ನಾಟಕದ ಪ್ರದರ್ಶನ ನಡೆಯಿತು.ನಾಟಕವನ್ನು ಸಂಪೂರ್ಣ ವೀಕ್ಷಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ‘ಊರ್ಮಿಳಾ’ ಏಕವ್ಯಕ್ತಿ ನಾಟಕವು ಎಲ್ಲ ದೃಷ್ಟಿಯಿಂದಲೂ ಅತ್ಯುನ್ನತ ದರ್ಜೆಯದಾಗಿದ್ದು, ಸಾಹಿತ್ಯ, ನಿರ್ದೇಶನ, ಪ್ರಸ್ತುತಿ, ಸಂಗೀತ, ರಂಗಸಜ್ಜಿಕೆ, ಧ್ವನಿ, ಬೆಳಕು ಮುಂತಾದ ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟವನ್ನು ನೆನಪಿಸುವಂತೆ ಮಾಡಿದೆ. ಅಯನಾ ವಿ. ರಮಣ್ ಅವರ ಅಭಿನಯವಂತೂ ಪರಾಕಾಷ್ಠೆಯಲ್ಲಿದ್ದು, ನಿರಂತರ ಒಂದು ಗಂಟೆ ಅವಧಿಯಲ್ಲಿ ಬಹು ಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಈ ಕಲಾವಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಎಲ್ಲ ಪ್ರತಿಭಾ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಶ್ರೀಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಅಧ್ಯಕ್ಷತೆ ವಹಿಸಿ, ಶ್ರೀಮಠದ ಶಿಷ್ಯರೂ, ದಾನಿಗಳೂ ಆಗಿರುವ ‘ಗೀತಾಮಾತೆ’ ಪ್ರಭಾ ಶೆಣೈ- ಉಡುಪಿ ವಿಶ್ವನಾಥ ಶೆಣೈ ದಂಪತಿಯನ್ನು ಸನ್ಮಾನಿಸಿದರು.