ಭೀಮಣ್ಣ ಗಜಾಪುರ
ತಾಲೂಕಿನ ಗಜಾಪುರ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ಯುಗಾದಿ ಆಚರಿಸುವುದಿಲ್ಲ. ಯುಗಾದಿ ಅಮವಾಸ್ಯೆ ಬಂತೆಂದರೆ ಅಂದಿನಿಂದ ಮೂರು ದಿನ ಈ ಕುಟುಂಬಸ್ಥರು ಸ್ನಾನ ಮಾಡುವುದಿಲ್ಲ, ಹೊಸ ಬಟ್ಟೆ ಉಡುವಂತಿಲ್ಲ. ಸಿಹಿ ಅಡುಗೆ ಮಾಡುವುದಿಲ್ಲ. ತಮ್ಮ ಪೂರ್ವಜರ ಆಚರಣೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ನಮಗೆ ಕೇಡು ಆಗುತ್ತದೆ. ಮನೆಯಲ್ಲಿ ಮತ್ತಷ್ಟು ಕೆಟ್ಟ ಘಟನೆಗಳು ನಡೆಯುತ್ತವೆ ಎಂದು ನಂಬಿಕೊಂಡಿದ್ದಾರೆ.ವಿದ್ಯಾವಂತರು, ನೌಕರಿ ಮಾಡುವವರೂ ಇದಕ್ಕೆ ಹೊರತಾಗಿಲ್ಲ.
ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಯುಗಾದಿಗೂ ಮುಂಚೆ ಮಾಡುವುದಿಲ್ಲ. ಯುಗಾದಿ ನಂತರವೇ ಸ್ನಾನ ಮಾಡುವ ಮೂಲಕ ಸೂತಕದಿಂದ ಹೊರ ಬರುತ್ತಾರೆ. ಬಳಿಕ ಶುಭ ಕಾರ್ಯ ಹಮ್ಮಿಕೊಳ್ಳುತ್ತಾರೆ. ಇಂತಹ ಆಚರಣೆಗಳು ಪ್ರಜ್ಞಾವಂತರ ಕಾಲದಲ್ಲಿಯೂ ನಡೆಯುತ್ತಿರುವುದು ಸೋಜಿಗದ ಸಂಗತಿ.ನಮ್ಮ ಹಿರಿಯರು ಯುಗಾದಿಯಲ್ಲಿ ಬೇವು-ಮಾವು ಎಲೆ ತರಲು ಹೋದವರು ವಾಪಸಾಗಿಲ್ಲ. ಹಾಗಾಗಿ ನಾವು ಹಬ್ಬ ಆಚರಿಸಲ್ಲ. ಹಿರಿಯರ ಮಾತು ಮೀರಲ್ಲ ಎನ್ನುತ್ತಾರೆ ಗಜಾಪುರ ನಿವಾಸಿ ಬಾರಿಕರ ಮಂಜುನಾಥ