ಉಳ್ಳಾಲ: ಹೆಚ್ಚಿದ ಕಡಲು ಕೊರೆತ, ತೊಕ್ಕೊಟ್ಟು ಜಂಕ್ಷನ್‌ ಕೃತಕ ನೆರೆ

KannadaprabhaNewsNetwork |  
Published : May 27, 2025, 12:57 AM IST
ಉಳ್ಳಾಲ ಸಮೀಪದ ಉಚ್ಚಿಲದಲ್ಲಿ ಕಡಲು ಕೊರೆತ | Kannada Prabha

ಸಾರಾಂಶ

ಹಲವು ವರ್ಷಗಳಿಂದ ಕಡಲ್ಕೊರೆತ ಸಮಸ್ಯೆ ಉಳ್ಳಾಲದಲ್ಲಿ ವ್ಯಾಪಕವಾಗಿದ್ದರೂ ಬ್ರೇಕ್ ವಾಟರ್ ಅಳವಡಿಕೆಯಿಂದಾಗಿ ಕಡಲ್ಕೊರೆತ ಸ್ಥಳಾಂತರಗೊಳ್ಳುತ್ತಾ ಇದೀಗ ಉಚ್ಚಿಲ ಸೋಮೇಶ್ವರ ಸಮುದ್ರ ತೀರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವ್ಯಾಪಕ ಹಾನಿಯುನ್ನುಂಟು ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಇಲ್ಲಿನ ಸೋಮೇಶ್ವರ ಉಚ್ಚಿಲ ಸಮುದ್ರ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಡಲ್ಕೊರೆತ ಆರಂಭಗೊಂಡಿದ್ದು ಉಚ್ಚಿಲ ನಿವಾಸಿ ಯೋಗೀಶ್ ಎಂಬವರ ಮನೆಗೆ ಹಾನಿಯಾಗಿದೆ.ಹಲವು ವರ್ಷಗಳಿಂದ ಕಡಲ್ಕೊರೆತ ಸಮಸ್ಯೆ ಉಳ್ಳಾಲದಲ್ಲಿ ವ್ಯಾಪಕವಾಗಿದ್ದರೂ ಬ್ರೇಕ್ ವಾಟರ್ ಅಳವಡಿಕೆಯಿಂದಾಗಿ ಕಡಲ್ಕೊರೆತ ಸ್ಥಳಾಂತರಗೊಳ್ಳುತ್ತಾ ಇದೀಗ ಉಚ್ಚಿಲ ಸೋಮೇಶ್ವರ ಸಮುದ್ರ ತೀರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವ್ಯಾಪಕ ಹಾನಿಯುನ್ನುಂಟು ಮಾಡುತ್ತಿದೆ. ಉಚ್ಚಿಲದಿಂದ ಉಚ್ಚಿಲ ಎಂಡ್ ಪಾಯಿಂಟ್ ರಸ್ತೆಯನ್ನೇ ಕೆಡವಿರುವ ಕಡಲ್ಕೊರೆತ ಸಂಪರ್ಕವನ್ನು ಕಡಿತಗೊಳಿಸಿ ಮೂರು ವರ್ಷಗಳಾದರೂ ಈವರೆಗೆ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ.

ಉಳ್ಳಾಲದಿಂದ ಉಚ್ಚಿಲದವರೆಗೂ ಸಮುದ್ರ ಪ್ರಕ್ಷುಬ್ಧವಾಗಿದ್ದು, ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಕಡಲಬ್ಬರ ಹೆಚ್ಚಾಗಿದೆ. ತೊಕ್ಕೊಟ್ಟು ಜಲಾವೃತ : ಭಾರೀ ಮಳೆಗೆ ತೊಕ್ಕೊಟ್ಟು ಜಂಕ್ಷನ್ ಸೋಮವಾರ ಮತ್ತೊಮ್ಮೆ ಜಲಾವೃತಗೊಂಡಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಎರಡನೇ ಬಾರಿಗೆ ಜಂಕ್ಷನ್ ಮುಳುಗಡೆಯಾಗಿದೆ. ರಸ್ತೆ ಪೂರ್ತಿ ನೀರು ತುಂಬಿದ ಪರಿಣಾಮ ವಾಹನ ಸವಾರರು, ಬಸ್ ಚಾಲಕರು ಪರದಾಡಬೇಕಾಯಿತು. ಇನ್ನೊಂದೆಡೆ ಮೇಲಿನ ಫ್ಲೈಓವರ್ ನಿಂದ ಜಲಪಾತದಂತೆ ಸುರಿಯುವ ನೀರಿನಿಂದಾಗಿ ಜಂಕ್ಷನ್ ಜಲಾವೃತಗೊಂಡಿದೆ. ಮೆಸ್ಕಾಂ ಸಿಬ್ಬಂದಿಗಳು: ಮಾಡೂರು ನೀಲಿಪಾಲು ಬಳಿ ಕೃತಕ ನೆರೆಯಲ್ಲಿ ಮೆಸ್ಕಾಂ ಸಿಬ್ಬಂದಿಗಳು ತೆರಳಿ ಕಾರ್ಯನಿರ್ವಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ್ ಮಾರ್ಗದರ್ಶನದಲ್ಲಿ ಕಿರಿಯ ಅಭಿಯಂತರ ನಿತೇಶ್ ಹೊಸಗದ್ದೆ, ಲೈನ್‌ಮೆನ್‌ಗಳಾದ ಚೇತನ್ ಗಟ್ಟಿ ಮತ್ತು ಹರೀಶ್ ನೀಲಿಪಾಲು ಬಳಿ ಕೃತಕ ನೆರೆಯಲ್ಲಿ ತೆರಳಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು. ಚೇತನ್ ಗಟ್ಟಿ ಆವರ ಸಹೋದರ ಮನೋಜ್ ಗಟ್ಟಿ ಎರಡು ದಿನದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ದುಃಖದ ನಡುವೆಯೂ ಮರುದಿನವೇ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.ಕಾಯರ್‌ಗೋಳಿ ಲೋಕೇಶ್ ಅವರ ವಾಸ್ತವ್ಯದ ಮನೆಯೆ ಪೌಂಡೇಷನ್ ಕುಸಿತಗೊಂಡಿದೆ, ಹರೇಕಳ ನ್ಯೂಪಡ್ಪು ಕೈರುನ್ನೀಸಾ ಮನೆ, ಮಂಜನಾಡಿ ಆರಂಗಡಿ ನಕ್ಷಿಸ್ ಮನೆ, ಮುನ್ನೂರು ಗ್ರಾಮದ ಸಂತೋಷ್ ನಗರದಲ್ಲಿ ನೇತ್ರ ಅವರ ಮನೆ, ಸೋಮನಾಥ ಬಡಾವಣೆ ಬಳಿ ವಿದ್ಯುತ್ ಕಂಬ ಬಿದ್ದು ಟ್ಯಾಂಕ್‌ಗೆ ಹಾನಿಯುಂಟಾಗಿದೆ. ಪಾವೂರು ನದಿ ತೀರದ ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿದೆ.ಅಪಾಯದಲ್ಲಿ ನಾಲ್ಕು ಮನೆಗಳು:

ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಎತ್ತರ ಪ್ರದೇಶದಲ್ಲಿ ನಾಲ್ಕು ಮನೆಗಳು ಅಪಾಯದಂಚಿನಲ್ಲಿದೆ. ಖಾಸಗಿ ವ್ಯಕ್ತಿಯೊಬ್ಬರು ಮಣ್ಣು ಅಗೆದ ಪರಿಣಾಮವಾಗಿ ಇದೀಗ ಹಲವು ವರ್ಷಗಳಿಂದ ಸ್ಥಳದಲ್ಲಿದ್ದ ನಾಲ್ಕು ಮನೆಮಂದಿ ಅಪಾಯದಂಚಿನಲ್ಲಿದ್ದಾರೆ. ಮನೆಗಳು ಕುಸಿಯುವ ಹಂತಕ್ಕೆ ತಲುಪಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸ್ಥಳೀಯಾಡಳಿತಕ್ಕೆ ದೂರು ನೀಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!