ಕನ್ನಡಪ್ರಭ ವಾರ್ತೆ ವಿಜಯಪುರ
ಈ ಕುರಿತು ಪ್ರಕಟಣೆ ಹೊರಡಿಸಿ ಸರ್ಕಾರಕ್ಕೆ ಸವಾಲು ಹಾಕಿದ ಅವರು, ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸುವ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗೆ ರಾಜ್ಯ ಸರ್ಕಾರ ದ್ರೋಹ ಬಗೆಯುತ್ತಿದೆ. ಸುಮಾರು ₹ 36,000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರಪಯೋಗ ಮಾಡಿ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಒಂದೆಡೆ ಅಹಿಂದ ವರ್ಗದ ಬಗ್ಗೆ ಸುಳ್ಳು ಕಾಳಜಿ ತೋರುವ ಸಿದ್ಧರಾಮಯ್ಯ ಅಹಿಂದ ವರ್ಗದ ಆಶೀರ್ವಾದಿಂದ ಅಧಿಕಾರಕ್ಕೆ ಬಂದು, ಈಗ ದಲಿತರ ಊಟ ಕಸಿಯುತ್ತಿದ್ದಾರೆ ಎಂದು ಉಮೇಶ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ಯಾವ ಯೋಜನೆಯಡಿ ಎಷ್ಟು ಅನುದಾನವನ್ನು ದಲಿತರ ಶ್ರೇಯೋಭಿವೃದ್ಧಿಗೆ ಬಳಸಿದ್ದೀರಿ?. ಈ ಹಿಂದೆ ನಮ್ಮ ಸರ್ಕಾರದಲ್ಲಿ 4 ಸಾವಿರ ಎಕೆರೆಯಷ್ಟು ಭೂ ಒಡೆತನ ಯೋಜನೆಯಡಿ ದಲಿತರಿಗೆ ಮಂಜೂರು ಮಾಡಿದ್ದೇವೆ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂ ಒಡೆತನ ಯೋಜನೆಯಡಿ, ಗಂಗಾ ಕಲ್ಯಾಣ ಯೋಜನೆಯಡಿ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ, ಸ್ವಯಂ ಉದ್ಯೋಗ, ನೇರ ಸಾಲ ಯೋಜನೆಗಳು ಮೈಕ್ರೋಕ್ರೆಡಿಟ್ (ಪ್ರೇರಣಾ ಯೋಜನೆ) ಯಾವ ದಲಿತರಿಗೆಲ್ಲಾ ಈ ಯೋಜನೆಗಳಲ್ಲಿ ಅನುದಾನ ನೀಡಿದ್ದೀರಿ ಎಂಬುದರ ಬಗ್ಗೆ ಬಹಿರಂಗ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಿಗೆ ಗೌರವಧನವನ್ನು ಯಾವ ಯೋಜನೆಯ ಹಣ ಎಂದು ಸಹ ಬಹಿರಂಗೊಳಿಸುವಂತೆ ಪ್ರಶ್ನಿಸಿದ್ದಾರೆ.