ಕಂಪ್ಲಿ: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಬಡಾವಣೆಯೊಂದರಲ್ಲಿ ಒಳಚರಂಡಿ ಕಾಮಗಾರಿ ವೇಳೆ ಕಲ್ಲುಬಂಡೆಯನ್ನು ಅನಧಿಕೃತ ಸ್ಫೋಟಕ ಬಳಸಿ ಸಿಡಿಸಿದ ಹಿನ್ನೆಲೆ ಶನಿವಾರ ಬಾಂಬ್ ನಿಷ್ಕ್ರಿಯ ತಂಡ ಹಾಗೂ ಅಪರಾಧ ಪರಿಶೀಲನಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಘಟನೆ ಕುರಿತು ಪರಿಶೀಲನೆ ನಡೆಸಿದ ಪೊಲೀಸರು ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಸ್ಫೋಟಕ ಬಳಕೆ ಮಾಡಲಾಗಿದೆ ಎಂದು ಕಂಡುಹಿಡಿದು, ಗುರುವಾರ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಹಿನ್ನೆಲೆ ಕಲಬುರಗಿಯಿಂದ ಬಾಂಬ್ ನಿಷ್ಕ್ರಿಯ ತಂಡ ಹಾಗೂ ಬಳ್ಳಾರಿಯ ಅಪರಾಧ ಪರಿಶೀಲನಾ ತಂಡವನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು.
ತಂಡದ ಅಧಿಕಾರಿಗಳು ಸ್ಫೋಟ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಬಳಸಲಾದ ಸ್ಫೋಟಕದ ಅವಶೇಷಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಿದರು. ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಸ್ಫೋಟಕ ಬಳಕೆ ಮಾಡಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.ಈ ಸಂಬಂಧ ನಿವೇಶನ ಮಾಲೀಕ ಹಾಗೂ ಕಾಮಗಾರಿ ನಡೆಸುತ್ತಿದ್ದ ಕೆಲಸಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸ್ಫೋಟಕವನ್ನು ಯಾವ ಮೂಲದಿಂದ ಪಡೆದುಕೊಂಡರು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಗತ್ಯ ಪರವಾನಗಿ ಇಲ್ಲದೇ ಸ್ಫೋಟಕ ಬಳಕೆ ಮಾಡಿರುವ ಕುರಿತು ಸಂಬಂಧಿತ ಕಾನೂನು ವಿಧಿಗಳಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.