ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಅಭಿವೃದ್ಧಿ ಇಲ್ಲದ ಬಡಾವಣೆ ಬಣಬಣ, ನಿಯಮ ಮೀರಿ ಫಾರಂ.3 ಅನುಮತಿ

KannadaprabhaNewsNetwork | Published : Jun 12, 2025 4:46 AM

ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ನಿರಂತರವಾಗಿ ನೂತನ ಬಡಾವಣೆಗಳು ತಲೆ ಎತ್ತುತ್ತಿವೆ, ಮೂಲಭೂತ ಸೌಲಭ್ಯಗಳೇ ಇಲ್ಲದ ಬಡಾವಣೆಗಳಿಗೆ, ಈ ಹಿಂದಿನ ಪುರಸಭೆ ಮುಖ್ಯಾಧಿಕಾರಿಗಳು ಫಾರಂ.3 ನೀಡಿದ್ದಾರೆ. ಈ ಕುರಿತು ಕ್ರಮಕ್ಕೆ ಮುಂದಾಗಬೇಕೆಂದು ಸದಸ್ಯರು ಆಗ್ರಹಿಸಿದರು.

ಪುರಸಭೆ ಸಾಮಾನ್ಯ ಸಭೆ

ಸರ್ಕಾರಿ ಆದೇಶ ಉಲ್ಲಂಘನೆ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಸಮಗ್ರ ಮಾಹಿತಿ ಸಂಗ್ರಹ, 3 ತಿಂಗಳೊಳಗೆ ಶಿಸ್ತು ಕ್ರಮ ಶಾಸಕ ಕೃಷ್ಣನಾಯ್ಕ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ನಿರಂತರವಾಗಿ ನೂತನ ಬಡಾವಣೆಗಳು ತಲೆ ಎತ್ತುತ್ತಿವೆ, ಮೂಲಭೂತ ಸೌಲಭ್ಯಗಳೇ ಇಲ್ಲದ ಬಡಾವಣೆಗಳಿಗೆ, ಈ ಹಿಂದಿನ ಪುರಸಭೆ ಮುಖ್ಯಾಧಿಕಾರಿಗಳು ಫಾರಂ.3 ನೀಡಿದ್ದಾರೆ. ಈ ಕುರಿತು ಕ್ರಮಕ್ಕೆ ಮುಂದಾಗಬೇಕೆಂದು ಸದಸ್ಯರು ಆಗ್ರಹಿಸಿದರು.

ಇಲ್ಲಿನ ಪುರಸಭೆಯ ಎಂ.ಪಿ. ಪ್ರಕಾಶ ಸಭಾಂಗಣದಲ್ಲಿ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು, ಕಾನೂನು ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು, ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಹೊಸ ಹೊಸ ಬಡಾವಣೆಗಳನ್ನು ಈ ಹಿಂದಿನಿಂದ ಮಾಡುತ್ತಿದ್ದಾರೆ. ಆದರೆ ಅಲ್ಲಿ ರಸ್ತೆ, ಒಳಚರಂಡಿ, ಕುಡಿವ ನೀರು, ವಿದ್ಯುತ್‌ ದೀಪಗಳ ಸೇರಿದಂತೆ ಯಾವೊಂದು ಮೂಲಭೂತ ಸೌಲಭ್ಯ ಕಲ್ಪಿಸದ ಬಡಾವಣೆಗಳ ಮಾಲೀಕರಿಗೆ, ಪುರಸಭೆಯಿಂದ ಕಾನೂನು ಬಾಹಿರವಾಗಿ ಫಾರಂ.3 ನೀಡಿದ್ದಾರೆ. ಆ ಬಡಾವಣೆಗಳಲ್ಲಿ ನಿವೇಶನ ಖರೀದಿ ಮಾಡಿ ಮನೆ ಕಟ್ಟಿರುವ ಕುಟುಂಬಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರಿಂದ ಪಟ್ಟಣದ ವ್ಯಾಪ್ತಿಯಲ್ಲಿ ಆಗಿರುವ ಅಕ್ರಮಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕ ಕೃಷ್ಣನಾಯ್ಕ ಮಾತನಾಡಿ, ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿದ್ದೇನೆ, ಪಟ್ಟಣದ ವ್ಯಾಪ್ತಿಯ ಬಡಾವಣೆಗಳಲ್ಲಿ ಅಭಿವೃದ್ಧಿ ಮಾಡದೇ, ಎಲ್ಲ ನಿವೇಶನಗಳನ್ನು ಮಾರಾಟಕ್ಕೆ ಅವಕಾಶ ನೀಡಿರುವ ಮಾಹಿತಿ ಇದೆ. ಈ ಕುರಿತು ಸಮಿತಿಯೊಂದನ್ನು ರಚಿಸಿ ಮಾಹಿತಿ ಸಂಗ್ರಹಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವ ಜತೆಗೆ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇನೆಂದು ಹೇಳಿದರು.

ಪಟ್ಟಣದ ಮದಲಗಟ್ಟಿ ವೃತ್ತದಲ್ಲಿ ರಸ್ತೆ ಅಭಿವೃದ್ಧಿ ಟೆಂಡರ್‌ ಕರೆದು, ಭೂಮಿ ಪೂಜೆ ಮಾಡಿದ್ದರೂ ಕಾಮಗಾರಿ ಆರಂಭವಾಗಿಲ್ಲ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಮರು ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕೆಂದು ಸದಸ್ಯ ಯು.ಹನುಮಂತಪ್ಪ, ಎಸ್‌.ತಿಮ್ಮಣ್ಣ ಸೇರಿದಂತೆ ಇತರರು ಒತ್ತಾಯಿಸಿದರು.

ಈಗಾಗಲೇ ಗುತ್ತಿಗೆದಾರರ ಇಎಂಡಿ ಮೊತ್ತ ಮುಟ್ಟುಗೋಲು ಹಾಕಿಕೊಂಡು, ಮರು ಟೆಂಡರ್‌ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಇಮಾಮ್‌ ಸಾಹೇಬ್‌ ಮಾಹಿತಿ ನೀಡಿದಾಗ, ಪಟ್ಟಣದಲ್ಲಿ ಕಳೆದ 4 ವರ್ಷಗಳಿಂದ ಟೆಂಡರ್‌ ಆಗಿರುವ ಕಾಮಗಾರಿಗಳು ಎಷ್ಟು? ಗುತ್ತಿಗೆದಾರರು ಯಾರು? ಕಾಮಗಾರಿ ಸ್ಥಿತಿಗತಿ ಏನಾಗಿದೆ ಈ ಕುರಿತು ಸಭೆಗೆ ಸಮಗ್ರ ಮಾಹಿತಿ ಕೊಡಿ ಎಂದು ಸದಸ್ಯ ವಾರದ ಗೌಸ್‌ ಮೋಹಿದ್ದೀನ್‌, ಎಸ್‌.ಶೆಫಿ, ಮಹಮದ್‌ ರಫಿ ಸೇರಿದಂತೆ ಇತರರು ಒತ್ತಾಯಿಸಿದರು.

ಜನ ರಾತ್ರಿ ಕುಡಿದು ಬಂದು ನಮಗೆ ಬಾಯಿಗೆ ಬಂದಂತೆ ಛೀ ಥೂ ಎನ್ನುತ್ತಿದ್ದಾರೆ. ಮೊದಲು ಬಡಾವಣೆಗಳಲ್ಲಿ ವಿದ್ಯುತ್‌ ದೀಪ ಹಾಕಿಸಿ, ಜನ ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆಂದು ಸದಸ್ಯ ಮಹಮದ್‌ ರಫಿ ಸಭೆಯಲ್ಲಿ ಅಕ್ರೋಶ ವ್ಯಕ್ತಪಡಿಸಿದರು.

ಬಂಗಾರೆಪ್ಪ ನಗರ, ಸಾಯಿ ಬಾಬಾ ದೇಗುಲ, ರಾಜಬಾಗ್‌ ಸವಾರ್‌, ಜಾಮೀಯಾ ಮಸೀದಿ, ಕೋಟೆ ಪ್ರದೇಶದಲ್ಲಿ ಕಮಾನುಗಳ ನಿರ್ಮಾಣ ಮಾಡಲು ಟೆಂಡರ್‌ ಕರೆಯಬೇಕೆಂದು ಗೌಸ್‌ ಮೋಹಿದ್ದೀನ್‌ ಒತ್ತಾಯಿಸಿದರು. ಕೂಡಲೇ ಈ ಕುರಿತು ಕ್ರಮಕ್ಕೆ ಮುಂದಾಗುತ್ತೇವೆಂದು ಮುಖ್ಯಾಧಿಕಾರಿ ಹೇಳಿದರು.

ಪುರಸಭೆಯ ಮಾಣಿಜ್ಯ ಮಳಿಗೆಗಳನ್ನು ಕೂಡಲೇ ಮರು ಟೆಂಡರ್‌ ಮಾಡಬೇಕೆಂದು ಸದಸ್ಯ ಒತ್ತಾಯದಿಂದ, ವಾರದೊಳಗೆ ಕ್ರಮ ಕೈಗೊಳ್ಳುತ್ತೇವೆಂದು ಅಧಿಕಾರಿಗಳು ಹೇಳಿದರು.

ಶಾಸಕ ಕೃಷ್ಣನಾಯ್ಕ ಮಾತನಾಡಿ, ಎಲ್ಲ ವಾರ್ಡ್‌ಗಳ ಸದಸ್ಯ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಅನುದಾನ ನೀಡಲಾಗಿದೆ. ಜೀವನದಲ್ಲಿ ಅಧಿಕಾರ ಶಾಶ್ವತವಲ್ಲ, ಬದಲವಣೆ ಸಹಜ ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು, ನಿಮ್ಮ ಸಮಸ್ಯೆಗಳಿಗೆ ಸ್ಪಂದನೆ ನೀಡಿದ್ದೇನೆ. ವಾರದೊಳಗೆ ಎಲ್ಲ ಕಡೆಗೂ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುವುದು ಎಂದರು.

ಇದೇ ವೇಳೆ ನೂತನ ಸ್ಥಾಯಿ ಸಮಿತಿ ರಚಿಸಿದ್ದು ಮಂಜುನಾಥ ಜೈನ್‌, ಚಂದ್ರಾನಾಯ್ಕ, ಎಸ್‌.ತಿಮ್ಮಣ್ಣ, ಐಗೋಳ್‌ ಸುರೇಶ, ಯು.ಹನುಮಂತಪ್ಪ ಸದಸ್ಯರಾಗಿದ್ದಾರೆ. ಮಂಜುನಾಥರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್‌ ಬೀ, ಉಪಾಧ್ಯಕ್ಷ ಮಂಜುನಾಥ ಸೊಪ್ಪಿನ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೈನ್‌, ಮುಖ್ಯಾಧಿಕಾರಿ ಇಮಾಮ್‌ ಸಾಹೇಬ್‌ ಉಪಸ್ಥಿತರಿದ್ದರು.