ಮಂಗಳೂರಿನ ಟಿಎಂಎ ಪೈ ಹಾಲ್ನಲ್ಲಿ ಭಾರತ್ ಫೌಂಡೇಷನ್ ಮತ್ತು ಬೆಂಗಳೂರಿನ ಮಿಥಿಕ್ ಸೊಸೈಟಿ ಹಮ್ಮಿಕೊಂಡ ಮೂರು ದಿನಗಳ ಲಿಟ್ ಫೆಸ್ಟ್-2024ರ ಕೊನೆಯ ದಿನ ಭಾನುವಾರ ‘ಏಕರೂಪ ನಾಗರಿಕ ಸಂಹಿತೆ: ವಾದ-ಸಂವಾದ’ದಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಸೋಸಿಯೇಟ್ ಪ್ರೊಫೆಸರ್ ಎಂ.ಎಸ್.ಚೈತ್ರ ಅನಿಸಿಕೆ ಹಂಚಿಕೊಂಡರು.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತದಲ್ಲಿ ಎಲ್ಲ ನಾಗರಿಕರಿಗೆ ಒಂದೇ ಕಾನೂನು ಜಾರಿಗೊಳ್ಳಬೇಕು. ಯಾರೇ ವ್ಯಾಜ್ಯ ತಂದರೂ ಅದಕ್ಕೆ ಒಂದೇ ಕಾನೂನಿನಲ್ಲಿ ಪರಿಹಾರ ಸಿಗುವಂತಾಗಬೇಕು ಎಂದು ಚಾಣಕ್ಯ ವಿಶ್ವವಿದ್ಯಾಲಯ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಸೋಸಿಯೇಟ್ ಪ್ರೊಫೆಸರ್ ಎಂ.ಎಸ್.ಚೈತ್ರ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ಟಿಎಂಎ ಪೈ ಹಾಲ್ನಲ್ಲಿ ಭಾರತ್ ಫೌಂಡೇಷನ್ ಮತ್ತು ಬೆಂಗಳೂರಿನ ಮಿಥಿಕ್ ಸೊಸೈಟಿ ಹಮ್ಮಿಕೊಂಡ ಮೂರು ದಿನಗಳ ಲಿಟ್ ಫೆಸ್ಟ್-2024ರ ಕೊನೆಯ ದಿನ ಭಾನುವಾರ ‘ಏಕರೂಪ ನಾಗರಿಕ ಸಂಹಿತೆ: ವಾದ-ಸಂವಾದ’ದಲ್ಲಿ ಅವರು ಮಾತನಾಡಿದರು.
ಧರ್ಮದ ಸ್ವತಂತ್ರ ಆಯ್ಕೆ ವ್ಯಕ್ತಿಗೆ ಇದೆ, ಹಾಗೆಯೇ ಕಾನೂನಿನ ಆಯ್ಕೆಗೂ ಅವಕಾಶ ಇರಬೇಕು. ಕುಟುಂಬಕ್ಕೆ ಸರ್ಕಾರ ಹಸ್ತಕ್ಷೇಪ ಮಾಡಬಾರದು, ಹಾಗಾದರೆ ಸಮುದಾಯಕ್ಕೆ ನ್ಯಾಯ ನೀಡಲು ಸಾಧ್ಯವಾಗದು. ಹಿಂದು ಸಮುದಾಯ ಕೂಡ ಈ ಬಗ್ಗೆ ಸ್ವವಿಮರ್ಶೆ ಮಾಡುತ್ತಿಲ್ಲ. ಇಲ್ಲದಿದ್ದರೆ ಉತ್ತಮ ಕುಟುಂಬ ಬದುಕು ಅಸಾಧ್ಯ. ಕಳೆದ ಅಕ್ಟೋಬರ್ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಚರ್ಚೆ ಆರಂಭಗೊಂಡಿತು. ಅದು ಸಂವಿಧಾನ ರೀತ್ಯಾ ಜಾರಿಗೊಳ್ಳಬೇಕು ಎಂದು ಅವರು ಆಶಿಸಿದರು. ನ್ಯಾಯವಾದಿ ಕ್ಷಮಾ ನರಗುಂದ ಸಂವಾದಿಯಾಗಿದ್ದರು. ಉಪನ್ಯಾಸಕ ಗುರುಪ್ರಸಾದ್ ನಿರೂಪಿಸಿದರು.
----------
ಶಾರದೆ ಅಸ್ತಿತ್ವ ಮರುಸ್ಥಾಪನೆ: ಆನಂದ್ ಮ್ಯಾಥ್ಯೂರವರು ಬರೆದ ಇನ್ಕ್ವೆಸ್ಟ್ ಆಫ್ ಗುರು ಎಂಬ ಪುಸ್ತಕ ಬಿಡುಗಡೆಯಿಂದ ಪ್ರಾರಂಭವಾದ ‘ಕಾಶ್ಮೀರ, ಶಾರದಾ ಮತ್ತು ಪಿಒಕೆ’ ಕುರಿತ ವಿಚಾರಗೋಷ್ಠಿಯಲ್ಲಿ ಕಾಶ್ಮೀರಿ ಪಂಡಿತ ರವೀಂದ್ರ ಪಂಡಿತ ಮತ್ತು ದ ಕಾಶ್ಮೀರ ಫೈಲ್ಸ್ ಖ್ಯಾತಿಯ ಭಾಷಾ ಸುಂಬ್ಲಿ ಭಾಗವಹಿಸಿದರು. ಭಾಷಾ ಸುಂಬ್ಲಿ ಮಾತನಾಡಿ, ಶಾರದಾ ದೇಶ ಕಾಶ್ಮೀರವನ್ನು ಜ್ಞಾನ ಗಂಗೋತ್ರಿ ಎಂದು ಎಂದಿನಿಂದಲೂ ಹೇಳಲಾಗುತ್ತದೆ. ಅದಕ್ಕೇ ದೇವಿ ಶಾರದೆಯನ್ನು ಕಾಶ್ಮೀರ ಪುರವಾಸಿನಿ ಎನ್ನುತ್ತಾರೆ. ಕಾಶ್ಮೀರ ವೀರಶೈವ ಪರಂಪರೆಯ ನಾಡಾಗಿದೆ. ಶ್ರೀರಾಮನ ಪರೀಕ್ಷೆ ನಡೆಸಿ ತಮ್ಮೆಲ್ಲಾ ಶಕ್ತಿಯನ್ನು ಕಳೆದುಕೊಂಡ ನಂತರ ಪರಶುರಾಮ ರಾಮ್ರಾಧನ್ ಪರ್ವತಕ್ಕೆ ಹೋಗಿದ್ದರು, ಅದು ಈಗಲೂ ಕಾಶ್ಮೀರದಲ್ಲಿದೆ. ಆದಿ ಶಂಕರಾಚಾರ್ಯರಿಗೂ ಶೃಂಗೇರಿ ಕ್ಷೇತ್ರಕ್ಕೂ, ಕಾಶ್ಮೀರಕ್ಕೂ ಅವಿನಾಭಾವ ಸಂಬಂಧವಿದೆ. ಇಂಥ ಪುಣ್ಯಭೂಮಿಯಲ್ಲಿಯೇ ದೇವಿ ಶಾರದೆಗೆ ಅಸ್ತಿತ್ವವಿಲ್ಲದಂತಾಗಿದೆ. ರಾಮಲಲ್ಲಾ ವಿಚಾರದಲ್ಲಿಯೂ ಬೇಸರ ದೂರವಾದಂತೆ, ಕಾಶ್ಮೀರದ ನಿಜವಾದ ಅಸ್ಮಿತೆಯನ್ನು, ಶಾರದೆಯ ಅಸ್ತಿತ್ವವನ್ನು ಮರು ಸ್ಥಾಪಿಸಬೇಕಾಗಿದೆ ಎಂದರು.ಕಾಶ್ಮೀರ ಮತ್ತು ದಕ್ಷಿಣ ಭಾರತದೊಂದಿಗೆ ಬಹಳ ಐತಿಹಾಸಿಕ ಸಂಬಂಧವಿದೆ. ೧೩ನೇ ಶತಮಾನದಲ್ಲಿ ಹಲವಾರು ಮುಸ್ಲಿಂ ರಾಜರುಗಳ ಆಕ್ರಮಣದಿಂದಾಗಿ ಈ ಸಂಬಂಧ ಬೆಳೆಯಿತು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.