ಅಭಿವೃದ್ಧಿಯತ್ತ ಸಾಗಲು ಒಗ್ಗಟ್ಟು ಮುಖ್ಯ : ಬಿ.ಆರ್. ಗುರುದೇವ್

KannadaprabhaNewsNetwork | Published : Apr 28, 2025 12:47 AM

ನಗರದ ಸಾಲಗಾಮೆ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಸಭಾದ ಮಹಿಳಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಾಲಗಾಮೆ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಸಭಾದ ಮಹಿಳಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಶಾಸಕ ಬಿ.ಆರ್. ಗುರುದೇವ್ ಮಾತನಾಡಿ, ಯಾವುದೇ ಸಮುದಾಯ ಅಭಿವೃದ್ಧಿ ಪಥದತ್ತ ಸಾಗಲು ಒಗ್ಗಟ್ಟು ಬಹಳ ಮುಖ್ಯ, ಈ ನಿಟ್ಟಿನಲ್ಲಿ ವೀರಶೈವ ಸಮುದಾಯದ ಅಭಿವೃದ್ಧಿ ಹಾಗೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಬಹಳ ಮುಖ್ಯ ಎಂದರು. ಪ್ರತಿಯೊಬ್ಬರು ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡುವುದು ಅಗತ್ಯ. ತಮ್ಮ ಮಕ್ಕಳು ಎಷ್ಟೇ ದೊಡ್ಡ ಮಟ್ಟದ ಹುದ್ದೆಯಲ್ಲಿದ್ದರೂ ಕುಟುಂಬ ಸಮುದಾಯದ ವಿಚಾರ ಬಂದಾಗ ಸಂಸ್ಕಾರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆಯಾಗಿ ೧೦೪ ವರ್ಷಗಳು ಕಳೆದಿವೆ ಆದರೆ ಇನ್ನು ಹೆಚ್ಚಿನ ಸಂಘಟನೆಗೆ ಒತ್ತು ನೀಡಬೇಕು, ಇದರ ಜೊತೆಗೆ ಹಿರಿಯರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಕೆಲಸಗಳಾಗಬೇಕು ಎಂದರು.

ಹಾಸನ ತಾಲೂಕು ವೀರಶೈವ ಲಿಂಗಾಯತ ಮಹಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾ ಶತಮಾನೋತ್ಸವ ಪೂರೈಸಿದ ಮಹಾಸಭೆಗೆ ನಾಡಿನ ಪ್ರಮುಖ ಗಣ್ಯರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಸಂಘಟನೆಗೆ ಒತ್ತು ನೀಡುವ ಸಮುದಾಯದ ಮೇಲೆ ಕೆಲ ಪಟ್ಟಭದ್ರರು ದುರುದ್ದೇಶದಿಂದ ಜಾತಿಗಣತಿಯಲ್ಲಿ ಜನಾಂಗದ ಸಂಖ್ಯೆಯನ್ನು ಇಳಿಮುಖ ಮಾಡುವ ಮೂಲಕ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈಗಾಗಲೇ ಮಹಾಸಭಾ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯಲ್ಲಿ ಕೂಡ ಮಹಾಸಭಾ ಸಕ್ರಿಯವಾಗಿದ್ದು, ಮಹಿಳಾ ಘಟಕ ಕೂಡ ಉತ್ತಮವಾಗಿ ಮುಂದಿನ ಕೆಲಸ ಮಾಡಲಿ ಎಂದು ನೂತನ ಪದಾಧಿಕಾರಿಗಳಿಗೆ ಹಾರೈಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷೆ ಬಿ.ಮುಕ್ತಾಂಬಾ ಮಾತನಾಡಿ, ಹೆಣ್ಣು ಮನೆಯ ಕಣ್ಣು ಹಾಗೆಯೇ ಸಮಾಜಕ್ಕೆ ದೊಡ್ಡ ಶಕ್ತಿಯಾಗಿದೆ. ಬಸವಣ್ಣನವರು ಮಹಿಳೆಗೆ ಮೊದಲು ಸಮಾನತೆ ನೀಡಿದ ಮಾಹನ್ ವ್ಯಕ್ತಿಯಾಗಿದ್ದಾರೆ. ಇತ್ತೀಚಿನ ದಿನದಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾಳೆ. ಅದರೂ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನಿಜಕ್ಕೂ ಶೋಚನೀಯ ಎಂದು ವಿಷಾಧಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ ಅಬ್ಬಿಗೆರೆ ಮಾತನಾಡಿ, ಹಾನಗಲ್ ಶ್ರೀಗಳು ಸ್ಥಾಪಿಸಿದ ವೀರಶೈವ ಲಿಂಗಾಯತ ಮಹಾಸಭಾ ಇನ್ನೂ ಹೆಚ್ಚಿನ ಸಂಘಟನೆಗೆ ಒತ್ತು ನೀಡಲು ಯುವಕರು ಇಂತಹ ಕಾರ್ಯಕ್ರಮಕ್ಕೆ ಆಗಮಿಸಬೇಕಿದೆ ಅಗ ಮಾತ್ರ ಸಂಘಟನೆ ಸಾದ್ಯ, ಸಿದ್ದಗಂಗಾ ಶ್ರೀಗಳ ರೀತಿಯಲ್ಲಿ ಸೌಹಾರ್ದತೆ ಬಾಳು ನಮ್ಮದಾಗಲಿ ಎಂದರು.

ಹಾಸನ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಘಟಕದ ನೂತನ ಅಧ್ಯಕ್ಷೆ ಮಮತಾ ಪಾಟೀಲ್ ಮಾತನಾಡಿ, ಮಹಿಳಾ ಘಟಕದಿಂದ ಮೊದಲಿಗೆ ಮಹಾಸಭಾ ಸದಸ್ಯತ್ವ ಅಭಿಯಾನ ನಡೆಸಲಾಗುತ್ತದೆ. ಆರೋಗ್ಯ, ಶಿಕ್ಷಣ, ಪರಿಸರ, ಧಾರ್ಮಿಕ ಸೇವೆ ಮಾಡುವ ಭರವಸೆ ನೀಡಲಾಗುತ್ತದೆ. ನಮ್ಮನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದ ಕಟ್ಟಾಯ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಮಹಿಳಾ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಸದಸ್ಯರಾದ ಗುರುನಾಥ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು. ಇದೇ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಉಪಾಧ್ಯಕ್ಷರಾದ ಆಶಾದೇವಿ, ಶೀಲಾ ವಿಶ್ವನಾಥ್, ಎಂ.ಬಿ. ಗಿರಿಜಾಂಬಿಕ, ಧನಲಕ್ಷ್ಮಿ, ಶೊಭ ಚಂದ್ರಶೇಖರ್, ಹೆಚ್,ಎಂ. ಇಂದಿರಾ ಇತರರು ಉಪಸ್ಥಿತರಿದ್ದರು.