ತತ್ವಪದಗಳ ಗೂಢಾರ್ಥಗಳು ಮರೆ: ಅಪ್ಪಗೆರೆ ತಿಮ್ಮರಾಜು ವಿಷಾದ

KannadaprabhaNewsNetwork |  
Published : Jul 21, 2026, 01:30 AM IST
೨೦ಕೆಎಂಎನ್‌ಡಿ-೧ | Kannada Prabha

ಸಾರಾಂಶ

ಹಿಂದೆಲ್ಲಾ ತತ್ವಪದಗಳನ್ನು ಹಾಡುವುದರ ಜೊತೆಗೆ ಅದರ ಗೂಢಾರ್ಥಗಳನ್ನು ಜನರಿಗೆ ತಿಳಿಸಿಕೊಡುತ್ತಿದ್ದರು. ಕಾಲಾನಂತರದಲ್ಲಿ ತತ್ವಪದಕಾರರು ಹಾಡುಗಳನ್ನಷ್ಟೇ ಹಾಡುತ್ತಿದ್ದಾರೆಯೇ ವಿನಃ ಅವುಗಳ ಗೂಢಾರ್ಥಗಳು ಯಾರಿಗೂ ತಿಳಿಯುತ್ತಿಲ್ಲ. ಇವು ತತ್ವಪದಗಳು ಮಹತ್ವ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣವಾಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದನಿ ಇಲ್ಲದವರಿಗೆ ದನಿ ಕೊಡುವ ಏಕರೂಪ ಸೃಷ್ಟಿಯ ಒಂದು ರೂಪವೇ ತತ್ವಪದಗಳು. ತತ್ವಪದಗಳ ಗೂಢಾರ್ಥಗಳು ಗೊತ್ತಿಲ್ಲದೆ ಕಾಣೆಯಾಗುತ್ತಿವೆ. ಅವುಗಳನ್ನು ಜನರಿಗೆ ಗೊತ್ತುಮಾಡಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಗೂಢಾರ್ಥ ತುಂಬಿರುವ ತತ್ವಪದಕಾರರ ಸಮ್ಮೇಳನ ಕರ್ನಾಟಕದಲ್ಲಿ ನಡೆಯಬೇಕು ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಗೊರವಾಲೆ ರುದ್ರಪ್ಪ ಅಭಿನಂದನಾ ಸಮಿತಿ ವತಿಯಿಂದ ಹಿರಿಯ ತತ್ವಪದಕಾರ ಗೊರವಾಲೆ ರುದ್ರಪ್ಪ-80 ಅಭಿನಂದನಾ ಸಮಾರಂಭದ ಅಂಗವಾಗಿ ಜಿಲ್ಲಾ ಮಟ್ಟದ ತತ್ವಪದಕಾರರ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದೆಲ್ಲಾ ತತ್ವಪದಗಳನ್ನು ಹಾಡುವುದರ ಜೊತೆಗೆ ಅದರ ಗೂಢಾರ್ಥಗಳನ್ನು ಜನರಿಗೆ ತಿಳಿಸಿಕೊಡುತ್ತಿದ್ದರು. ಕಾಲಾನಂತರದಲ್ಲಿ ತತ್ವಪದಕಾರರು ಹಾಡುಗಳನ್ನಷ್ಟೇ ಹಾಡುತ್ತಿದ್ದಾರೆಯೇ ವಿನಃ ಅವುಗಳ ಗೂಢಾರ್ಥಗಳು ಯಾರಿಗೂ ತಿಳಿಯುತ್ತಿಲ್ಲ. ಇವು ತತ್ವಪದಗಳು ಮಹತ್ವ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣವಾಗಿವೆ. ಆ ಗೂಢಾರ್ಥಗಳನ್ನು ಜನರಿಗೆ ತಿಳಿಸಿಕೊಡುವುದರ ಮೂಲಕ ತತ್ವಪದಗಳಿಗೆ ಮತ್ತೆ ಜೀವಂತಿಕೆ ತುಂಬಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ತತ್ವಪದ ಗಾಯನ ಮತ್ತೆ ಎಲ್ಲರ ಬಾಯಲ್ಲಿ ನಲಿದಾಡಬೇಕು. ಗೀತೆಗಳು ಎಲ್ಲರ ಮನದಲ್ಲಿ ಉಳಿಯಬೇಕು. ಗೂಢಾರ್ಥಗಳು ಜನರ ಅರಿವಾಗಬೇಕು. ಜನಪದ ಗೀತೆಗಳನ್ನು ಯಾರೂ ಬರೆದಿದ್ದಲ್ಲ. ಅವು ಆಯಾ ಕೆಲಸಕ್ಕೆ ತಕ್ಕಂತೆ ಹುಟ್ಟಿಕೊಂಡಂತಹವು. ಆದರೆ, ತತ್ವಪದಕಾರರು ತತ್ವಪದಗಳನ್ನು ಬರೆದರು. ಜನಪದ ಗೀತೆಗಳು ಬೆಳವಣಿಗೆ ಕಂಡ ಮಾದರಿಯಲ್ಲಿ ತತ್ವಪದಗಳು ಬೆಳವಣಿಗೆಯನ್ನು ಕಾಣಲಿಲ್ಲ. ಜಾನಪದ ಅಕಾಡೆಮಿ ಇಂತಹ ತತ್ವಪದಕಾರರ ಸಮ್ಮೇಳನ, ಸಮಾವೇಶವನ್ನು ಆಯೋಜಿಸಬೇಕು. ಅಲ್ಲಿರುವ ಅಜ್ಞಾನಿಗಳಿಗೆ ತತ್ವಪದಗಳ ಮಹತ್ವ ತಿಳಿದಿಲ್ಲ. ಏಕೆಂದರೆ, ವಯಸ್ಸೆಂಬುದು ನಿಲ್ಲುವುದಿಲ್ಲ. ತತ್ವಪದ ಗಾಯಕರಿಗೆ ವಯಸ್ಸಿರುವಾಗಲೇ ತತ್ವಪದಗಳಿಗೆ ಜೀವಂತಿಕೆ ತುಂಬುವ ಕೆಲಸವಾಗಬೇಕು. ಅದಕ್ಕೆ ರಾಜ್ಯಸರ್ಕಾರವೂ ಬೆಂಬಲವಾಗಿ ನಿಲ್ಲಬೇಕು ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಳವಣಿಗೆ ಕಾಣುತ್ತಿದೆ. ಅಲ್ಲಿ ಜನಪದದ ಕೃಷಿ ಗೀತೆಗಳನ್ನು ಮೂಡಿಸಿ ಬಸ್‌ಸ್ಟ್ಯಾಂಡ್‌ಗಳಲ್ಲಿ ಆ ರಾಗಗಳು ಕೇಳಿಬರುವಂತೆ ಮಾಡಬೇಕು. ದಾನತ್ವಕ್ಕಿಂತ ಭಾವತ್ವ ಹೆಚ್ಚಾಗಬೇಕು. ತತ್ವಪದ ಮೇಳಗಳು ಹೆಚ್ಚಾಗಬೇಕು. ಜನಪದ ಗೀತೆಗಳು ಮತ್ತೆ ಜೀವಂತವಾಗಬೇಕು ಎನ್ನುವುದಕ್ಕಿಂತ ತತ್ವಪದಗಳು ಜೀವಂತವಾಗಬೇಕು. ಮಠಗಳು ತತ್ವಪದಗಳಿಗೆ ಮರುಜೀವ ನೀಡುವ ಕೆಲಸಕ್ಕೆ ಮುಂದಾಗಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಲಯನ್ ಮಾಜಿ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಡಾ.ಕೃಷ್ಣೇಗೌಡ, ಎರಡನೇ ರಾಜ್ಯಪಾಲ ಸಿದ್ದೇಗೌಡ, ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ಕನ್ನಿಕ ಶಿಲ್ಪ ನವೋದಯ ಶಾಲೆ ಮುಖ್ಯಸ್ಥೆ ಎಚ್.ಆರ್.ಕನ್ನಿಕ, ಎಂ.ಆರ್.ಎಂ. ಪ್ರಕಾಶನದ ಮುಖ್ಯಸ್ಥ ಮಂಜು ಮುತ್ತೇಗೆರೆ, ಮೈಸೂರು ವಿವಿ ಮಾಜಿ ಸೆನೆಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ, ಕರ್ನಾಟಕ ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ತೋಟಗಾರಿಕೆ ವಿವಿ ಸಿಂಡಿಕೇಟ್ ಸದಸ್ಯ ಎಚ್.ಜೆ.ಮನೋಹರ್, ಸಂತೋಷ್‌ಗೌಡ, ಶಂಕರ್ ಹೆಮ್ಮಿಗೆ, ಗಾಯಕ ಶ್ರೀಧರ್, ಕನ್ನಡಸೇನೆ ಮಂಜುನಾಥ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ: ಶಾಸಕ ಗಣೇಶ್ ಸಲಹೆ
28ರಂದು ನಗರದಲ್ಲಿ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ