ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ |
5 ಶತಮಾನಗಳ ಹೋರಾಟ ಫಲಿಸಿದ, ಕನಸು ನನಸಾದ ಸಮಯದಲ್ಲಿ ಉಪ್ಪಿನಂಗಡಿ ಹಾಗೂ ಹಿರೆಬಂಡಾಡಿ ಪರಿಸರದ ಆಟೋ ಚಾಲಕರು ಹತ್ತು ಕಿ ಮೀ ವ್ಯಾಪ್ತಿಯ ಪ್ರಯಾಣವನ್ನು ಉಚಿತವಾಗಿ ಒದಗಿಸುವ ಮೂಲಕ ದಿನದ ಪ್ರಯಾಣಿಕರ ಸೇವೆಯನ್ನು ಶ್ರೀ ರಾಮನಿಗೆ ಸಮರ್ಪಿಸಿದರು. ಉಪ್ಪಿನಂಗಡಿಯ ಕುಲ್ದೀಪ್ ಸಪಲ್ಯ ಹಾಗೂ ಹಿರೆಬಂಡಾಡಿಯ ಹೊನ್ನಪ್ಪ ಗೌಡ ಪಂಚೇರು ಎಂಬಿಬ್ಬರು ಅಟೋ ಚಾಲಕರು ಉಚಿತ ಸೇವೆಯ ಮೂಲಕ ಶ್ರೀ ರಾಮನ ಸೇವೆ ಗೈದರು.
ಪ್ರಾಣ ಪ್ರತಿಷ್ಠೆ ಸಮಯ ಬಾನಂಗಳದಲ್ಲಿ ಹಾರಾಡಿದವು ಬಾವಲಿಗಳು: ಸಾಮಾನ್ಯವಾಗಿ ಬಾವಲಿಗಳು ಹಗಲಿನಲ್ಲಿ ಕಣ್ಣು ಕಾಣಿಸದೆ ಮರಗಳಲ್ಲಿ ಆಶ್ರಯಪಡೆಯುವ ಸಸ್ತನಿ. ಸೋಮವಾರದಂದು ಅಯೋಧ್ಯೆಯಲ್ಲಿ ಶ್ರೀ ರಾಮನಿಗೆ ಪ್ರಾಣ ಪ್ರತಿಷ್ಠೆ ಯಾಗುತ್ತಿದ್ದಂತೆಯೇ ಉಪ್ಪಿನಂಗಡಿಯ ವೀರಾಂಜನೇಯ ದೇವಾಲಯದ ಬಳಿಯಲ್ಲಿ ಬಿರು ಬಿಸಿಲಿನ ಮಧ್ಯಾಹ್ನದ ಸಮಯದಲ್ಲೇ ಬಾವಲಿಗಳು ಏಕಾಏಕಿ ಆಕಾಶದಲ್ಲಿ ಹಾರಾಡಿದವು. ಸಾಮಾನ್ಯವಾಗಿ ಹಗಲಿನಲ್ಲಿ ಹಾರಾಟ ನಡೆಸದ ಬಾವಲಿಗಳು ಅಯೋಧ್ಯಾ ಶ್ರೀ ರಾಮನ ಪ್ರಾಣಪ್ರತಿಷ್ಠೆಗೆ ಸಂತಸಗೊಂಡು ಬಿಸಿಲಿನ ಸಮಯದಲ್ಲಿ ಹಾರಾಡುತ್ತಿರಬಹುದೇ ಎಂದು ಭಾವಿಸಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತಾದಿಯೋರ್ವರು ಬಾವಲಿಗಳ ದೃಶ್ಯವನ್ನು ವಿಡಿಯೋ ಮಾಡಿ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದಾರೆ.