ಸೋಮವಾರಪೇಟೆ: ತಾಲೂಕಿನ ಯಡವನಾಡು ಗ್ರಾಮದ ಶಿವಬಸವೇಶ್ವರ ದೇವಾಲಯದ ಆವರಣದಲ್ಲಿ ಗ್ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಗ್ರಾಮಾಭಿವೃದ್ಧಿ ಸಮಿತಿ ಸಭೆ ಇತ್ತೀಚೆಗೆ ನಡೆಯಿತು.ಯಡವನಾಡು ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಸೇರ್ಪಡೆ ಮಾಡದಿರುವ ಬಗ್ಗೆ ಚರ್ಚಿಸಲಾಯಿತು. ಪುನರ್ವಸತಿ ಪ್ರದೇಶ ಯಡವನಾಡು ಗ್ರಾಮಸ್ಥರಿಗೆ ಸರ್ಕಾರದಿಂದ ಆಗಿರುವ ಘೋರ ಅನ್ಯಾಯಗಳನ್ನು ಖಂಡಿಸಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಎಲ್ಲರೂ ಮುಂದಾಗಬೇಕೆಂದು ಸಭೆ ತೀರ್ಮಾನಿಸಿ, ಮುಂದಿನ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು.ಹಾರಂಗಿ ಜಲಾಶಯ ನಿರ್ಮಾಣಕ್ಕೆ ೧೯೭೮ ರ ಅವಧಿಯಲ್ಲಿ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ, ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಹಾರಂಗಿ ಜಲಾಶಯದ ಎಡಬದಿಯಲ್ಲಿ ೧೦೫೭ ಎಕರೆ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ಯೋಜಿಸಿ, ಕಂದಾಯ ಗ್ರಾಮವಾಗಿ ಈ ಹಿಂದಿನ ಸರ್ಕಾರ ೨೦೧೭ರಲ್ಲಿ ಘೋಷಣೆ ಮಾಡಿತ್ತು. ಆದರೆ ಸರ್ಕಾರ ಮಾಡಿದ ಡಿನೋಟಿಫಿಕೇಷನ್ ಪ್ರಶ್ನಿಸಿ ಕೆಲವು ಪರಿಸರವಾದಿಗಳು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಪರಿಣಾಮ ನ್ಯಾಯಾಲಯ ೨೦೨೧ರಂದು ಡಿನೋಟಿಫಿಕೇಷನ್ ರದ್ದು ಮಾಡಿ ಆದೇಶಿಸಿತ್ತು.ಕಂದಾಯ ಗ್ರಾಮದಿಂದ ಯಡವನಾಡು ಗ್ರಾಮವನ್ನು ಮುಕ್ತ ಗೊಳಿಸಿದ ಸರ್ಕಾರದ ಕ್ರಮದ ಬಳಿಕ ಈ ಮಧ್ಯೆ ಸೋಮವಾರಪೇಟೆ ತಹಸೀಲ್ದಾರ್ ಅವರಿಗೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾರಂಗಿ ಜಲಾಶಯದ ಎಡ ಹಾಗೂ ಬಲ ಬದಿಯ ಯಡವನಾಡು ಹಾಗೂ ಅತ್ತೂರು ಗ್ರಾಮಗಳ ಮೀಸಲು ಅರಣ್ಯದ ಅಧಿಸೂಚಿತ ವಿಸ್ತೀರ್ಣ ೬೮೭೦.೯೨ ಎಕರೆ ಇದ್ದು, ಸದರಿ ಜಾಗವೂ ಮೀಸಲು ಅರಣ್ಯವಾಗಿದೆ. ಈ ಪ್ರದೇಶದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಗೆ ಮತ್ತು ಇತರ ಮಂಜೂರಾತಿ ಕೋರುವ ಅರ್ಜಿದಾರರಿಗೆ ಯಾವುದೇ ಭೂ ಮಂಜೂರಾತಿಗೆ ಅವಕಾಶ ಇರುವುದಿಲ್ಲ. ಈ ಎರಡೂ ಗ್ರಾಮಗಳ ಖಾಸಗಿ ಜಾಗವನ್ನು ಭೂ ಪರಿವರ್ತನೆ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ.
ಜಿಲ್ಲೆಯ ಜನರಿಗೆ ಮಾರಕವಾಗಿರುವ ನೆರೆ ಜಿಲ್ಲೆಯ ಲಕ್ಷಾಂತರ ರೈತರಿಗೆ ಸಂಜೀವಿನಿಯಾಗಿರುವ ಹಾರಂಗಿ ಅಣೆಕಟ್ಟೆಯ ನೀರು ಸಂಗ್ರಹಕ್ಕೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಕಳೆದುಕೊಂಡ ನಮಗೆ ಸರ್ಕಾರ ಮಾಡುತ್ತಿರುವ ಅನ್ಯಾಯ ಖಂಡಿಸಿ ರಸ್ತೆಗಿಳಿದು ಉಗ್ರ ಹೋರಾಟ ರೂಪಿಸಲೇ ಬೇಕೆಂದು ಗ್ರಾಮಸ್ಥರು ಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಂಡರು.