ಕನ್ನಡಪ್ರಭ ವಾರ್ತೆ ಮಡಿಕೇರಿ
ಆಯುಷ್ ಇಲಾಖೆಯ ಮತ್ತೋರ್ವ ವೈದ್ಯಾಧಿಕಾರಿ ಡಾ.ಪಲ್ಲವಿ ಮಾತನಾಡಿ ಬಾಯಾರಿಕೆ, ಸುಸ್ತು, ದಣಿವು ನಿವಾರಣೆಗಾಗಿ ಚಿಂಚಾ ಪಾನಕ ಸಹಕಾರಿಯಾಗಿದೆ. ಚಿಂಚಾ ಪಾನಕಕ್ಕೆ ಇನ್ನೊಂದು ಹೆಸರು ಹುಣಸೆ ಹಣ್ಣಿನ ಪಾನಕ ಎನ್ನಬಹುದು. 100 ಗ್ರಾಂ ಹುಣಸೆ ಹಣ್ಣು, 400 ಮಿಲಿ ಬೆಲ್ಲದ ಪುಡಿ, 10 ಗ್ರಾಂ ಜೀರಿಗೆ ಪುಡಿ, 5 ಗ್ರಾಂ ಕಾಳುಮೆಣಸಿನ ಪುಡಿ, 5 ಗ್ರಾಂ ಸೈಂದವ ಲವಣ ಬಳಕೆ ಮಾಡುವ ಮೂಲಕ ಚಿಂಚಾ ಪಾನಕ ತಯಾರಿಸಬಹುದಾಗಿದೆ.ಚಿಂಚಾ ಪಾನಕವನ್ನು ತಯಾರಿಸುವ ವಿಧಾನ :ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ಇಡೀ ರಾತ್ರಿ ನೆನೆಸಬೇಕು. ಮರುದಿನ ಬೆಳಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸುಕಿ ಸೋಸಿಕೊಳ್ಳಬೇಕು. ಅಗತ್ಯ ಪ್ರಮಾಣದಷ್ಟು ನೀರನ್ನು ಪಾತ್ರೆಯಲ್ಲಿ ಹಾಕಿಕೊಂಡು ಹುಣಸೆ ಹಣ್ಣಿನ ಮಿಶ್ರಣವನ್ನು ನೀರಿನ ಪಾತ್ರೆಗೆ ಬೆರೆಸಬೇಕು. ಬೆಲ್ಲದ ಪುಡಿ ಹಾಗೂ ಜೀರಿಗೆ ಪುಡಿ, ಕಾಳುಮೆಣಸು, ಸೈಂದವ ಲವಣವನ್ನು ಬೆರೆಸುವ ಮೂಲಕ ಚಿಂಚಾ ಪಾನಕ ಸಿದ್ಧಪಡಿಸಿಕೊಳ್ಳಬೇಕು. ಪ್ರತೀ ದಿನ ಪ್ರತಿಯೊಬ್ಬರೂ 50 ರಿಂದ 100 ಮಿಲಿ ಚಿಂಚಾ ಪಾನಕ ಸೇವಿಸುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ. ಮಲಬದ್ಧತೆ ನಿವಾರಣೆಯಾಗುವುದು. ಶರೀರದ ದಾಹ ಹಾಗೂ ಬಾಯಾರಿಕೆಯನ್ನು ಈ ಚಿಂಚಾ ಪಾನಕ ನೀಗಿಸಲಿದೆ ಎಂದು ಮಾಹಿತಿ ನೀಡಿದರು.ಆರೋಗ್ಯಕರ ಆಯುಷ್ ಪಾನಕ ಪರಿಚಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಡಾ.ಸರಸ್ವತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಆಯುಷ್ ಇಲಾಖೆ ಸಿಬ್ಬಂದಿ ಹಾಜರಿದ್ದರು.