ಅನುದಾನ ಸದ್ಬಳಕೆ ಮಾಡಿ ನಿಗದಿತ ಅವಧಿಯಲ್ಲಿ ಶೇ.100 ಪ್ರಗತಿ ಸಾಧಿಸಿ: ಬಿ.ಬಿ.ಕಾವೇರಿ

KannadaprabhaNewsNetwork |  
Published : Sep 22, 2024, 01:52 AM IST
ಪೊಟೊ: 21ಎಸ್‌ಎಂಜಿಕೆಪಿ04ಶಿವಮೊಗ್ಗ ಜಿಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಜಿಪಂ ಸಭಾಂಗಣದಲ್ಲಿ ಶನಿವಾರ ಮಾಸಿಕ ಕೆಡಿಪಿ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಮಾತನಾಡಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಲಾಖೆಗಳಲ್ಲಿ ಯಾವುದೇ ಅನುದಾನ ತಪ್ಪಿ ಹೋಗದಂತೆ ನಿಗದಿತ ಅವಧಿಯೊಳಗೆ ಶೇ.100 ಪ್ರಗತಿ ಸಾಧಿಸುವ ಮೂಲಕ ಅಧಿಕಾರಿಗಳು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಬಿ.ಬಿ.ಕಾವೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಫಲಾನುಭವಿ ಪ್ರಧಾನವಾದ ಕಾರ್ಯಕ್ರಮಗಳನ್ನು ಬದ್ದತೆಯಿಂದ ಮಾಡಬೇಕು, ಎಲ್ಲ ಇಲಾಖೆಯ ಅಧಿಕಾರಿಗಳು ಕ್ರಿಯಾತ್ಮಕವಾಗಿ, ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಯಾವುದೇ ಕಾರ್ಯಕ್ರಮಗಳ ಅನುದಾನ ತಪ್ಪಿ ಹೋಗದಂತೆ, ವಿಳಂಬರಹಿತವಾಗಿ ನಿಗದಿತ ಅವಧಿಯೊಳಗೆ ಅನುದಾನದ ಸದ್ಬಳಕೆ ಆಗಬೇಕು. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಶೇ.100 ಬಳಕೆ ಆಗಬೇಕು. ಜಿಲ್ಲಾಡಳಿತ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳು ಸಮರ್ಪಕವಾಗಿ ಅನುದಾನ ಬಳಕೆ, ಫಲಾನುಭವಿಗಳ ಆಯ್ಕೆ ಮಾಡಬೇಕು. ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಬೇಕು. ಸಿವಿಲ್ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆಗಳು ವಿವಿಧ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕೆಲಸಗಳನ್ನು ಇನ್ನೂ ಪರಿಣಾಮಗೊಳಿಸಬೇಕು. ಎಲ್ಲ ಇಲಾಖೆಗಳು ಸಮಸ್ಯೆಗಳನ್ನು ಕಂಡು ಹಿಡಿಸು ಸುಧಾರಣೆ ಕಡೆ ಗಮನ ಹರಿಸಿ, ನಿಯಮಾನುಸಾರ ಕ್ರಮ ವಹಿಸಬೇಕು. ಶೇ.100 ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ಮಾತನಾಡಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಳೆರೋಗ ಕಂಡು ಬಂದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಳೆ ರೋಗ ಪತ್ತೆಯಾಗಿದೆ. ಈ ಕುರಿತು ಪರಿಹಾರ ಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು, ಅವರು ಸರ್ಕಾರದ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದರು.

ಡಿಡಿಪಿಐ ಮಂಜುನಾಥ್ ಮಾತನಾಡಿ, ಸೊರಬ, ಶಿಕಾರಿಪುರ ಮತ್ತು ತೀರ್ಥಹಳ್ಳಿಯಲ್ಲಿ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ಬೇಡಿಕೆ ಇದೆ. ನಿಯೋಜನೆ ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆಗಳು ಇವೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶಾಲೆ ಬಿಟ್ಟ ಮಕ್ಕಳ ಸರ್ವೇ ಆಗಬೇಕು. ತಾಲ್ಲೂಕು ಹಂತದಲ್ಲಿ ಸರ್ವೇ ನಡೆಸಿ ಮಕ್ಕಳನ್ನು ಶಾಲೆಗೆ ಕರೆ ತರಲು ಉಸ್ತುವಾರಿ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಡಿಎಚ್‌ಒ ಡಾ.ನಟರಾಜ್ ಮಾತನಾಡಿ, ಒಟ್ಟು 600 ಡೆಂಘೀ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಜುಲೈ ಮಾಹೆಯಲ್ಲಿ 167, ಆಗಸ್ಟ್ 115 ಮತ್ತು ಸೆಪ್ಟೆಂಬರ್‌ಲ್ಲಿ 35 ಪ್ರಕರಣ ದಾಖಲಾಗಿದ್ದು, ಇದೀಗ ಪ್ರಕರಣ ಕಡಿಮೆಯಾಗಿದೆ. ಬೆಳಗಿನ ಜಾವ ಸರ್ವೇಕ್ಷಣೆ, ಇತರೆ ನಿಯಂತ್ರಣ ಕ್ರಮಗಳಿಂದ ಡೆಂಘೀ ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಇಲ್ಲ. ಆದರೆ ಸೊರಬ ಮತ್ತು ಹೊಸನಗರದಲ್ಲಿ ತಜ್ಞ ವೈದ್ಯರ ಕೊರತೆ ಇದೆ ಎಂದರು.

ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಆಗುತ್ತಿದ್ದು, ಜುಲೈವರೆಗೆ ಮೊಟ್ಟೆ ಹಣಪಾವತಿ ಆಗಿದೆ. 2.05 ಕೋಟಿ ರು.ಹಾಲಿನ ಪೌಡರ್ ಹಣ ಬಾಕಿ ಇದೆ ಎಂದು ಅಕ್ಷರ ದಾಸೋಹ ಅಧಿಕಾರಿಗಳು ತಿಳಿಸಿದರು.

ಕ್ಷೀರ ಭಾಗ್ಯ ಯೋಜನೆಯಡಿ ಸಕ್ಕರೆ ಸರಬರಾಜು ಆಗಿಲ್ಲ. 40 ರು. ಕೆ.ಜಿ ಗೆ ನಿಗದಿಯಾಗಿದ್ದು, ಈ ನಿಗದಿತ ಹಣಕ್ಕೆ ಸಕ್ಕರೆ ಲಭ್ಯವಾಗದ ಕಾರಣ ಸರಬರಾಜು ಸಾಧ್ಯವಾಗಿಲ್ಲ. 50 ರು. ನಿಗದಿ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಜಿ.ಪಂ ಸಿಇಓ ಎನ್.ಹೇಮಂತ್ ತಿಳಿಸಿದರು.

ಆಹಾರ ಇಲಾಖೆ ಉಪನಿರ್ದೇಶಕ ಅವಿನ್ ಮಾತನಾಡಿ, 3.80 ಲಕ್ಷ ಬಿಪಿಲ್ ಕಾರ್ಡುದಾರರು ಇದ್ದು, ಈ ಪೈಕಿ 6 ತಿಂಗಳು ಸತತವಾಗಿ ಪಡಿತರ ಪಡೆಯದ 8000 ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಇ-ಜನ್ಮ್ ಪೋರ್ಟಲ್ ಮಾಹಿತಿ ಮೇರೆಗೆ ಮರಣ ಹೊಂದಿದ 5000 ಕಾರ್ಡುದಾರರ ಹೆಸರನ್ನು ತೆಗೆದುಹಾಕಲಾಗಿದೆ. ಇನ್ನೂ ರದ್ದುಪಡಿಸುವ 1500 ಜನರ ಪಟ್ಟಿ ಇದೆ. 58 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಪಡಿಸಿ ದಂಡ ವಿಧಿಸಲಾಗಿದೆ. 2395 ಐಟಿ ಪಾವತಿದಾರರ ಬಿಪಿಎಲ್ ನ್ನು ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ. ಕುಟುಂಬದ ವಾರ್ಷಿಕ ವರಮಾನ 1.20 ಲಕ್ಷ ಇರುವ 53,342 ಕಾರ್ಡುಗಳು ಇವೆ. ಇವನ್ನು ರದ್ದುಗೊಳಿಸಲು ಕ್ರಮ ವಹಿಸಬೇಕಿದೆ. ಹೊಸದಾಗಿ ಪಡಿತರ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದ 4963ರಲ್ಲಿ 2489 ನೀಡಲಾಗಿದೆ. 980 ತಿರಸ್ಕರಿಸಲಾಗಿದ್ದು, ಉಳಿದವನ್ನು ಮುಂದೆ ಪೋರ್ಟಲ್ ಓಪನ್ ಆದಾಗ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮಾತನಾಡಿ, ಕಳೆದ ವರ್ಷದ ಅನುದಾನ ಶೇ.50 ಮಾತ್ರ ಬಿಡುಗಡೆಯಾಗಿದೆ. ಶಿಕಾರಿಪುರ ಮತ್ತು ಆನವಟ್ಟಿ ಯಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಜಾಗದ ಸಮಸ್ಯೆ ಇದೆ. ಆನವಟ್ಟಿಯಲ್ಲಿ ಸಮಸ್ಯೆ ಪರಿಹಾರ ಹಂತದಲ್ಲಿದ್ದು, ಶಿಕಾರಿಪುರದಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಅಮೃತ್ ಯೋಜನೆ ಫೇಸ್ 1 ಮುಗಿದಿದ್ದು, ಫೇಸ್ 2 ಆರಂಭವಾಗಬೇಕಿದೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್ ಮಾತನಾಡಿ, ಶೇ. 42.8 ಆದಾಯ ಶಕ್ತಿ ಯೋಜನೆಯಿಂದ ಬರುತ್ತಿದ್ದು, ಶೇ.60.5 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಯೋಜನೆ ಜಾರಿಯಾದಾಗಿನಿಂದ ಹೆಚ್ಚುವರಿ ಬಸ್‌ಗಳು ಮತ್ತು ರೂಟ್‌ಗಳ ಬೇಡಿಕೆ ಹೆಚ್ಚಿದೆ. 365 ಬಸ್‌ಗಳು ಓಡಾಡುತ್ತಿದ್ದು, 215 ರೂಟ್ ಬೇಡಿಕೆ ಇದೆ ಎಂದರು.

ಗೃಹಜ್ಯೋತಿ ಯೋಜನೆಯಡಿ 19 ಕೋಟಿ ಸಬ್ಸಿಡಿ ಮೆಸ್ಕಾಂಗೆ ಬರುತ್ತಿದೆ. ಸರ್ಕಾರಿ ಇಲಾಖೆಗಳಿಂದ ಸಾಕಷ್ಟು ಪ್ರಮಾಣದ ಬಿಲ್ ಬಾಕಿ ಇದೆ. ಗ್ರಾ.ಪಂ ಮತ್ತು ಬೀದಿದೀಪ, ನೀರಿನ ಸರಬರಾಜಿನಿಂದ 52 ಕೋಟಿ ರು. ಬಿಲ್ ಬಾಕಿ ಇದೆ. ಎಂಪಿಎಂ ನಿಂದ 300 ಕೋಟಿ ರು. ಬಾಕಿ ಇದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಸಣ್ಣ ನೀರಾವರಿ ಇಲಾಖೆಗೆ ಪದೇ ಪದೇ ಕರೆಂಟ್ ಸರಬರಾಜು ನಿಲ್ಲಿಸಬಾರದು. ರೈತರಿಗೆ ಅನಾನುಕೂಲವಾಗು ತ್ತದೆ. ವಿವಿಧ ಇಲಾಖೆಗಳು ಮತ್ತು ಮೆಸ್ಕಾಂ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಸಬೇಕು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ ಮಾಹೆವರೆಗೆ 2836 ಫಲಾನುಭವಿಗಳಿಗೆ 84,72,000 ಹಣ ರು. ಪಾವತಿಯಾಗಿದೆ ಎಂದು ಉದ್ಯೋಗಾಧಿಕಾರಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಅಧ್ಯಕ್ಷರು, ಎಲ್ಲ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ನಿಗದಿತ ಅವಧಿಯೊಳಗೆ ಅನುದಾನ ಬಳಕೆಯಾಗಬೇಕು. ಗುಣಮಟ್ಟದ ಕಾಮಗಾರಿಗಳು ಆಗಬೇಕು. ಸ್ಥಳೀಯ ಸಂಸ್ಥೆಗಳು, ಪಂಚಾಯತ್ ರಾಜ್ ವಿಭಾಗ ಸೇರಿದಂತೆ ಎಲ್ಲ ಇಲಾಖೆಗಳು ನಿಗದಿತ ವೇಳೆಯೊಳಗೆ ಗುರಿ ಸಾಧಿಸಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ ಸಿಇಓ ಎನ್.ಹೇಮಂತ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ