ಕಾರವಾರ: ಉತ್ತರ ಕನ್ನಡ ಜಿಲ್ಲೆ ಜಾನಪದ ಕಣಜವಾಗಿದೆ. ಜಾನಪದಕ್ಕೆ ಇತಿಮಿತಿ, ಚೌಕಟ್ಟಿಲ್ಲ. ಇದು ಅವಿನಾಶಿ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ, ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಎಸ್. ಬಾಲಾಜಿ ಅಭಿಪ್ರಾಯಿಸಿದರು.
ಇಲ್ಲಿನ ನಗರದ ದಿವೇಕರ ಪದವಿ ಕಾಲೇಜಿನ ಸಭಾಂಗಣದಲ್ಲಿ ದಿವೇಕರ ಕಾಲೇಜು ಹಾಗೂ ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ ಏರ್ಪಡಿಸಿದ ಕನ್ನಡ ಜಾನಪದ ಪರಿಷತ್ ಉತ್ತರ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಪತ್ರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮೂಲ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಜಾನಪದ ಪರಿಷತ್ ಸ್ಥಾಪನೆಯಾಗಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಏರ್ಪಡಿಸಲಾಗುವುದು. ಮೂಲ ಕಲಾವಿದರ ಸಮೀಕ್ಷೆಯನ್ನು ಸಹ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕೆನರಾ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷ ಎಸ್.ಪಿ. ಕಾಮತ್ ಮಾತನಾಡಿ, ಜಾನಪದದಲ್ಲಿ ಸಂಸ್ಕಾರವಿದೆ. ಮನುಷ್ಯರ ಭಾವನೆಗಳನ್ನು ಹೊಂದಾಣಿಕೆ ಮಾಡುವ ಗುಣವಿದೆ. ಇದನ್ನು ಉಳಿಸಿ ಬೆಳೆಸುವುದು ಎಲ್ಲ ಯುವಜನರ ಕರ್ತವ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಪ್ರಕಾಶ ನಾಯಕ, ಉತ್ತರ ಕನ್ನಡ ಜಿಲ್ಲೆಯ ಮೂಲ ಜನಪದ ಕಲಾವಿದರ ಕೈಪಿಡಿಯನ್ನು ತರಲಾಗುತ್ತದೆ. ದಾಖಲೀಕರಣ ಹಾಗೂ ತರಬೇತಿಯನ್ನು ಜಿಲ್ಲಾದ್ಯಂತ ಏರ್ಪಡಿಸುವ ಮೂಲಕ ಯುವಜನರಲ್ಲಿ ಜಾನಪದ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನಾಟಿ ವೈದ್ಯ ಹನುಮಂತ ಗೌಡ ಅವರನ್ನು ಗೌರವಿಸಲಾಯಿತು. ಪರಿಷತ್ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಬಾಲಾಜಿ ಪದ ಪತ್ರ ಪ್ರದಾನ ಮಾಡಿದರು.
ಕುಮಟಾ ತಾಲೂಕಿನ ಗೊಮಟೆ ಪಾಂಗ್ ತಂಡ, ಶಿರವಾಡದ ಕೆಪಿಎಸ್ ಪ್ರಾಥಮಿಕ ಶಾಲಾ ಮಕ್ಕಳಿಂದ, ದಿವೇಕರ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಿರಿಯ ನ್ಯಾಯವಾದಿ ನಾಗರಾಜ ನಾಯಕ, ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ವ್ಯವಸ್ಥಾಪ ನಿರ್ದೇಶಕ ಜಾರ್ಜ್ ಫರ್ನಾಂಡಿಸ್, ದಿವೇಕರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಕೇಶವ ಕೆ.ಜಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಮರಾಠೆ ಇದ್ದರು.