ಜಿಲ್ಲೆಯ ರೈಲ್ವೆ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ವಿ,ಸೋಮಣ್ಣ

KannadaprabhaNewsNetwork |  
Published : Feb 27, 2026, 01:30 AM IST
26ಕೆಡಿವಿಜಿ1-ದಾವಣಗೆರೆ ತಾ. ಆನಗೋಡು ಗ್ರಾಮದಲ್ಲಿ ರೈಲ್ವೇ ಮಾರ್ಗ ಪರಿಶೀಲನೆ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ-ಚಿತ್ರದುರ್ಗ-ತುಮಕೂರು ನೂತನ ರೈಲ್ವೆ ಮಾರ್ಗ ಯೋಜನೆಯ ಪರಿಶೀಲನೆಯನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಜತೆಗೆ ಮೋಟಾರ್ ಟ್ರ್ಯಾಲಿ ಮೂಲಕ ಸಾಗಿ ಮಾರ್ಗ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ-ಚಿತ್ರದುರ್ಗ-ತುಮಕೂರು ನೂತನ ರೈಲ್ವೆ ಮಾರ್ಗ ಯೋಜನೆಯ ಪರಿಶೀಲನೆಯನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಜತೆಗೆ ಮೋಟಾರ್ ಟ್ರ್ಯಾಲಿ ಮೂಲಕ ಸಾಗಿ ಮಾರ್ಗ ಪರಿಶೀಲನೆ ನಡೆಸಿದರು.

ನಂತರ ತಾಲೂಕಿನ ಆನಗೋಡು ಗ್ರಾಮದ ನೂತನ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮಾರ್ಗದ ಪರಿಶೀಲನೆ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ರೈಲ್ವೆ, ನೀರಿನ ವಿಚಾರದ ಕುರಿತಂತೆ ಅಭಿವೃದ್ಧಿ ಕಾರ್ಯ, ಸುರಕ್ಷತಾ ಕ್ರಮಗಳ ಜತೆಗೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಮನವಿ ಅರ್ಪಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ಜೆ.ಎಚ್.ಪಟೇಲ್ ಬಡಾವಣೆ ಬಾಲಭವನದಲ್ಲಿ ಮಕ್ಕಳಿಗಾಗಿ ಟಾಯ್ ಟ್ರೇನ್ ಸೇವೆ ಆರಂಭಿಸಬೇಕು. ದಾವಣಗೆರೆ–ಹರಿಹರ–ಬಳ್ಳಾರಿ ಮಾರ್ಗದಲ್ಲಿ ಸಂಚರಿಸುವ ಡಿಇಎಂಯು ರೈಲು ಸಂಖ್ಯೆ 07395/07396ರಲ್ಲಿ ಮಹಿಳಾ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಒದಗಿಸಬೇಕು. ಹರಿಹರ–ಚಿತ್ರದುರ್ಗ ಪ್ರಯಾಣಿಕರ ರೈಲನ್ನು ಮರು ಪ್ರಾರಂಭಿಸಬೇಕು. ರೈಲು ಸಂಖ್ಯೆ 12725-26 ಮತ್ತು 17325-26ಗಳಿಗೆ ಮಾಯಕೊಂಡ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ಹೇಳಿದರು.

ಹನುಮನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರು, ನಿರೀಕ್ಷಣಾ ಸ್ಥಳಕ್ಕೆ ಮೇಲ್ಛಾವಣಿ, ಕುರ್ಚಿ, ಶೌಚಾಲಯ ವ್ಯವಸ್ಥೆ, ಫ್ಲಾಟ್ ಫಾರಂ ಸಂಖ್ಯೆ 02ನ್ನು ವಿಸ್ತರಿಸಬೇಕು. ಹುಬ್ಬಳ್ಳಿ–ವಿಜಯವಾಡ ರೈಲನ್ನು ಯಶವಂತಪುರ ಜಂಕ್ಷನ್ ವರೆಗೆ ವಿಸ್ತರಿಸಬೇಕು. ರೈಲ್ವೇಗಾಗಿ ಭೂ ಸ್ವಾಧೀನಗೊಂಡ ಹಿನ್ನೆಲೆ ಮನವಿದಾರರ ಸಂಬಂಧಿ ರೇಣುಕಾ ಎಂಬುವರಿಗೆ ದಯಾಪಾಲನಾ ಆಧಾರದ ಮೇಲೆ ರೈಲ್ವೆಯಲ್ಲಿ ಉದ್ಯೋಗ ನೀಡಬೇಕು. ದಾವಣಗೆರೆ ಲಿಂಗೇಶ್ವರ ದೇವಸ್ಥಾನ ಎದುರಿನ ಕೆಳ ಸೇತುವೆ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಜಲಶಕ್ತಿ ಇಲಾಖೆ ಸಂಬಂಧಿಸಿದಂತೆ ಭದ್ರಾ ಅಣೆಕಟ್ಟು ದಾವಣಗೆರೆ-ಮಲೇಬೆನ್ನೂರು ಭಾಗಗಳ ರೈತರಿಗೆ ನೀರಾವರಿ ಒದಗಿಸುವ ಪ್ರಮುಖ ಮೂಲವಾಗಿದ್ದು, ದಾವಣಗೆರೆಯ 4, ಮಲೆಬೆನ್ನೂರಿನ 3 ಉಪ ವಿಭಾಗ ಸೇರಿ ಒಟ್ಟು 7 ಉಪ ವಿಭಾಗಗಳ ಕಾಲುವೆಗಳ ಮೂಲಕ 69,400 ಹೆಕ್ಟೇರ್(1,71,490 ಎಕರೆ) ಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಿದೆ. ಆದರೆ ಕಾಲುವೆಗಳಲ್ಲಿ ಹೂಳು ಜಮಾವಣೆಯಾಗಿದ್ದು, ಹೂಳು ತೆರವುಗೊಳಿಸಲು ಅನುದಾನ ಒದಗಿಸಬೇಕು ಎಂದರು.

ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ಸುಮಾರು 5,700 ಹೆಕ್ಟೇರ್ (14,086 ಎಕರೆ) ಭೂಮಿಗೆ ನೀರು ತಲುಪುತ್ತಿಲ್ಲ. ವಿಶೇಷವಾಗಿ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯಿಂದ ರೈತರು ವರ್ಷಕ್ಕೆ ಒಂದೇ ಬೆಳೆ ಬೆಳೆಯುವ ಪರಿಸ್ಥಿತಿ ಎದುರಿಸುತ್ತಿದ್ದು, ಗಂಭೀರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕಾಲುವೆಗಳಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಸ್ಪಂದಿಸಬೇಕು ಎಂದರು.

ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶೇಖರ್ ಎಚ್.ಟೇಕರಣ್ಣನವರ್, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಇತರ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
ಸರ್ಕಾರಕ್ಕೆ ಯುವಕರ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ