ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. 2026 ಕ್ಕೆ ಮಂಗನ ಕಾಯಿಲೆಗೆ ವ್ಯಾಕ್ಸಿನ್ ಕಂಡು ಹಿಡಿಯಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಾಗರ: ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. 2026ಕ್ಕೆ ಮಂಗನ ಕಾಯಿಲೆಗೆ ವ್ಯಾಕ್ಸಿನ್ ಕಂಡು ಹಿಡಿಯಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಎಫ್ಡಿ ಸಂತ್ರಸ್ತ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳು ಮತ್ತು ಸ್ಥಳೀಯರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಕಾಯಿಲೆ ಹರಡದಂತೆ ತಡೆದರೆ ಯಾರಿಗೂ ತೊಂದರೆ ಆಗುವುದಿಲ್ಲ ಎಂದರು.ಮಂಗನ ಕಾಯಿಲೆಗೆ ಈತನಕ ಚುಚ್ಚುಮದ್ದು ಕಂಡು ಹಿಡಿದಿಲ್ಲ. ವ್ಯಾಕ್ಸಿನ್ ಕಂಡು ಹಿಡಿಯುವುದು ನಮ್ಮ ಮುಂದಿರುವ ಪ್ರಮುಖ ಗುರಿಯಾಗಿದೆ. ಈ ಸಂಬಂಧ ದೆಹಲಿಗೆ ಹೋಗಿ ಪ್ರಯತ್ನ ನಡೆಸಲಾಗಿತ್ತು. ಹಳೆಯ ವ್ಯಾಕ್ಸಿನ್ನಿಂದ ಯಾವುದೇ ಪ್ರಯೋಜನವಿಲ್ಲದೆ ಇರುವುದರಿಂದ ಅದನ್ನು ಉಪಯೋಗಿಸದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹೊಸ ವ್ಯಾಕ್ಸಿನ್ ಕಂಡು ಹಿಡಿಯಲು ಹೈದರಾಬಾದ್ನ ಸಂಸ್ಥೆಯೊಂದಕ್ಕೆ ಸಿ.ಎಸ್.ಆರ್. ಫಂಡ್ನಿಂದ ಹತ್ತು ಕೋಟಿ ರು. ಕೊಡಲು ಸಿದ್ಧತೆ ನಡೆದಿದೆ. ವ್ಯಾಕ್ಸಿನ್ ತಯಾರಿಕೆ ಪ್ರಾರಂಭವಾಗಿದ್ದು, 2026 ಕ್ಕೆ ಕೊಡುವುದಾಗಿ ಸಂಸ್ಥೆ ತಿಳಿಸಿದೆ ಎಂದು ಹೇಳಿದರು.
ಕೆಎಫ್ಡಿ ಸಂಶೋಧನಾ ಘಟಕ ವೈಜ್ಞಾನಿಕವಾಗಿ ಜನರಿಗೆ ಅನುಕೂಲವಾಗುವಂತೆ ಸ್ಥಾಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಹಂದಿಗೋಡು ಕಾಯಿಲೆ ಕುರಿತು ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಹಂದಿಗೋಡು ಕಾಯಿಲೆ ಕುರಿತು ಸಹ ಚರ್ಚೆ ನಡೆಸಲಾಗುತ್ತದೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಪ್ರಮುಖರಾದ ಪಲ್ಲವಿ, ಸುಂದರೇಶ್, ರವಿಕುಮಾರ್, ಲಕ್ಷ್ಮಿ, ಡಾ.ಹರ್ಷವರ್ಧನ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕೋವಿಡ್ ಅಕ್ರಮಕ್ಕೆ ಎಸ್ಐಟಿ ರಚನೆ
ಕೋವಿಡ್ ಕಾಲದ ಅಕ್ರಮ ಕುರಿತು ಎಸ್ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಎಸ್.ಐ.ಟಿ ವರದಿ ಬಂದ ಬಳಿಕ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಯಾರ ಮೇಲೂ ದ್ವೇಷ ಸಾಧಿಸಬೇಕು ಎಂಬುದು ತನಿಖೆಯ ಉದ್ದೇಶವಲ್ಲ. ಜಸ್ಟಿಸ್ ಕುನ್ನಾ ಅವರ ವರದಿಯಲ್ಲಿ ಕೆಲವು ಅಂಶಗಳು ಬಹಿರಂಗವಾಗಿವೆ. ಇದಕ್ಕೆ ಸಂಬಂಧಪಟ್ಟಂತೆ ಕ್ರಮದ ಜೊತೆಗೆ ಎಸ್.ಐ.ಟಿ. ತನಿಖೆ ಸಹ ಸರ್ಕಾರದ ಹಂತದಲ್ಲಿ ನಡೆಯುತ್ತದೆ ಎಂದರು.