ಕನ್ನಡಪ್ರಭ ವಾರ್ತೆ ಚಿಂತಾಮಣಿ
ಸೊಸೈಟಿಗೆ ಲಭಿಸಿದ ಈ ಗೆಲುವು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಿದ್ದು, ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮಾರ್ಗದರ್ಶನದಲ್ಲಿ ಸೊಸೈಟಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಸಂತೇಕಲ್ಲಹಳ್ಳಿ ಮಹೇಶ್ ತಿಳಿಸಿದರು.
ತಾಲೂಕಿನ ವೈಜಕೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಶ್ರೀನಿವಾಸಮೂರ್ತಿ 253, ಎ.ಎನ್. ನಾಗರಾಜಪ್ಪ 235, ಮಂಜುನಾಥ್ 233, ವಿ ರಾಧಾಕೃಷ್ಣ 211 ಮತಗಳನ್ನು ಪಡೆದರೆ, ಹಿಂದುಳಿದ ವರ್ಗ ಎ ನಿಂದ ಟಿ.ಮುನಿನಾರಾಯಣಪ್ಪ 238, ಹಿಂದುಳಿದ ವರ್ಗ ಬಿ ನಿಂದ ಎಂ.ಸುರೇಶ್ 243 ಮತ್ತು ಮಹಿಳಾ ಮೀಸಲು ಕ್ಷೇತ್ರದ ಸ್ಥಾನದಿಂದ ಎಚ್.ಸಿ ಆಶಾ 234, ಎನ್. ಭಾಗ್ಯಮ್ಮ 233 ಮತ್ತು ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ವಿ.ಶ್ರೀನಿವಾಸ್ 250 ಮತ್ತು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಎಂ.ವಿನೋದ್ 254 ಮತ್ತು ಠೇವಣಿದಾರರ ಕ್ಷೇತ್ರದಿಂದ ಬಿ.ಪಿ.ಹರೀಶ್ 103, ಸಾಲಗಾರರಲ್ಲದ ಕ್ಷೇತ್ರದಿಂದ ಡಿ. ನರಸಿಂಹಮೂರ್ತಿ 685 ಮತಗಳು ಪಡೆದು ಗೆಲುವಿನ ನಗೆಯನ್ನು ಬೀರಿದರು. ಎಚ್.ನಾರಾಯಣಸ್ವಾಮಿ, ಸಂತೇಕಲ್ಲಹಳ್ಳಿ ಮಹೇಶ್ ಮಾತನಾಡಿದರು.ಕೆಲಕಾಲ ಉದ್ವಿಗ್ನ ವಾತಾವರಣ:
ಒಬ್ಬರ ಮತವನ್ನು ಮತ್ತೊಬ್ಬರು ಚಲಾಯಿಸಿದ್ದರೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಕೆಲಕಾಲ ಏರುಧ್ವನಿಯ ಹಾಗೂ ಮಾತಿಗೆ ಮಾತು ಬೆಳೆದು ಉದ್ವಿಗ್ನ ವಾತಾವರಣ ನಿರ್ಮಾಣಗೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬಳಿಕ ಪೊಲೀಸರು ಎರಡು ಪಕ್ಷದವರು ಸಮಾಧಾನ ಪಡಿಸಿದರು.ಚುನಾವಣಾಧಿಕಾರಿಯಾಗಿ ವನಿತ ಕಾರ್ಯನಿರ್ವಹಿಸಿದರು. ಸಿಇಒ ಮಹೇಶ್ ಇದ್ದರು. ಈ ಸಂದರ್ಭದಲ್ಲಿ ಕೈವಾರ ಸಾಮ್ರಾಟ್, ಮೂರ್ತಿ, ಅಟ್ಟೂರು ಅಚ್ಚಪ್ಪ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.