ಬಿಜೆಪಿ ಪಕ್ಷದಿಂದ ವರಸಿದ್ದಿ ವೇಣುಗೋಪಾಲ್‌ ಅಮಾನತು

KannadaprabhaNewsNetwork | Published : Oct 21, 2023 12:30 AM

ಬಿಜೆಪಿ ಪಕ್ಷದಿಂದ ವರಸಿದ್ದಿ ವೇಣುಗೋಪಾಲ್‌ ಅಮಾನತು

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಮರುಡಪ್ಪ, ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಪಕ್ಷದ ತೀರ್ಮಾನ ಪದೇ ಪದೇ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ ಹಾಗೂ ಪಕ್ಷದ ಘನತೆಗೆ ಕುಂದುಂಟು ಮಾಡಿರುವ ಕಾರಣಕ್ಕಾಗಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಮರುಡಪ್ಪ, ಅವರಿಂದ ಪಕ್ಷಕ್ಕೆ ಮುಜುಗರವಾಗಿದೆ. ಖುದ್ದಾಗಿ ಹಾಜರಾಗುವಂತೆ ಹಲವು ಬಾರಿ ತಿಳಿಸಿದರೂ ಈವರೆಗೆ ಸಮಜಾಯಿಸಿ ನೀಡಿಲ್ಲ ಎಂದು ಹೇಳಿದರು. ಪಕ್ಷದ ಆಂತರಿಕ ತೀರ್ಮಾನದಂತೆ ಹಾಗೂ ಪಕ್ಷದ ಆದೇಶದಂತೆ ನಗರಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಪಕ್ಷ ಸೂಚಿಸಿತ್ತು. ಆದರೆ, ಅವರು ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಪಕ್ಷದಿಂದ ಅಮಾನತು ಗೊಳಿಸಲಾಗಿದೆ. ಬಿಜೆಪಿಗೂ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ಗೂ ಯಾವುದೇ ಸಂಬಂಧ ಇಲ್ಲ ಎಂದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಬಗ್ಗೆ ಪಕ್ಷ ಅಪಾರ ಗೌರವ ಹೊಂದಿದೆ. ಆದರೆ, ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿರುವ ಜಿಮ್‌ಗೆ ಹೆಸರಿಡುವ ವಿಷಯದಲ್ಲಿ ವರಸಿದ್ದಿ ವೇಣುಗೋಪಾಲ್‌ ಅವರು ವಿವಾದ ಹುಟ್ಟು ಹಾಕಿದ್ದರು. ಸಂಘ, ಸಂಸ್ಥೆಯವರು ನಗರಸಭೆಗೆ ಬಂದ ಸಂದರ್ಭದಲ್ಲಿ ಅಗೌರವದಿಂದ ನಡೆದುಕೊಳ್ಳುತ್ತಿದ್ದರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್‌, ಬಿಜೆಪಿ ಜಿಲ್ಲಾ ವಕ್ತಾರ ಟಿ. ರಾಜಶೇಖರ್‌, ಸದಸ್ಯರಾದ ಕವಿತಾ ಶೇಖರ್‌, ರಾಜು, ಮುಖಂಡರಾದ ವೆಂಕಟೇಶ್‌, ಪುಷ್ಪರಾಜ್‌ ಉಪಸ್ಥಿತರಿದ್ದರು.