ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ವರುಣನ ಅಬ್ಬರ ಮಂಗಳವಾರವೂ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಣ್ಣಿಹಳ್ಳ- ತುಪರಿಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನತೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಕೃಷಿ ಚಟುವಟಿಕೆಗಳೆಲ್ಲ ಸ್ಥಗಿತವಾಗಿದ್ದು, ಬೆಳೆಹಾನಿ ಪ್ರಮಾಣ ಹೆಚ್ಚಾಗುತ್ತಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಶುರುವಾದ ಮಳೆರಾಯ ಸಂಜೆ ವರೆಗೂ ಬಿಟ್ಟು ಬಿಡದೇ ನಿರಂತರವಾಗಿ ಹನಿಯುತ್ತಲೇ ಇದ್ದ. ಮಳೆಯಿಂದಾಗಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ತರಕಾರಿ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರ ಸಂಖ್ಯೆ ಬೆರಳಿಣಿಕೆಯಷ್ಟಾಗಿದ್ದರೆ, ಮನೆಯಿಂದ ಹೊರಬರಲು ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ. ಶೀತ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆ ಜನರನ್ನು ಹೈರಾಣು ಮಾಡಿದೆ.ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿತ್ತು. ಮೊದಲೇ ತೆಗ್ಗು ಗುಂಡಿಗಳಿಂದ ಕೂಡಿರುವ ಹುಬ್ಬಳ್ಳಿ ನಗರದ ರಸ್ತೆಗಳಲ್ಲಿ ಮಳೆ ನೀರು ತುಂಬಿದ್ದರಿಂದ ವಾಹನ ಚಲಾಯಿಸಲು ಸವಾರರು ಹರಸಾಹಸ ಪಡುತ್ತಿದ್ದರು. ಚರಂಡಿಗಳೆಲ್ಲ ತುಂಬಿ ರಸ್ತೆ ಮೇಲೆ ಕೆಸರೆಲ್ಲ ಹರಿಯುತ್ತಿದ್ದರಿಂದ ಪಾಲಿಕೆಗೆ ಹಿಡಿಶಾಪ ಹಾಕುತ್ತಾ ನಾಗರಿಕರು ಮುಂದೆ ಸಾಗುತ್ತಿದ್ದರು.
ಮನೆಗಳಿಗೆ ನುಗ್ಗಿದ ನೀರು: ನಗರದಲ್ಲಿನ ಆನಂದನಗರ, ನೇಕಾರನಗರ, ಮಂಟೂರು ರಸ್ತೆ, ಗಣೇಶನಗರ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು ಕಂಡು ಬಂತು. ಮನೆಗೆ ನುಗ್ಗುತ್ತಿದ್ದ ನೀರನ್ನು ಹೊರಹಾಕಲು ಜನತೆ ಹರಸಾಹಸ ಪಡುತ್ತಿತ್ತು. ಕೆಲವೊಂದು ವಾಣಿಜ್ಯ ಸಂಕೀರ್ಣಗಳಲ್ಲೂ ನೀರು ನುಗ್ಗಿದೆ. ಜಿಲ್ಲೆಯಲ್ಲಿ 24 ಗಂಟೆಯಲ್ಲಿ 47ಮನೆಗಳು ಕುಸಿದಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಮಣ್ಣಿನ ಮನೆಗಳಲ್ಲಿ ವಾಸವಾಗಿರುವವರು ಜಾಗ್ರತರಾಗಿರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.ಹಳ್ಳಗಳು ಭರ್ತಿ: ಇನ್ನು ನವಲಗುಂದ ಹಾಗೂ ಕುಂದಗೋಳ ತಾಲೂಕುಗಳಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆ ಹನಿಯುತ್ತಿದ್ದರಿಂದ ತುಪರಿಹಳ್ಳ- ಬೆಣ್ಣಿಹಳ್ಳಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹಳ್ಳದ ಅಕ್ಕಪಕ್ಕದ ಗ್ರಾಮಗಳಲ್ಲಿ ಮತ್ತೆ ನೆರೆ ಭೀತಿ ಎದುರಾಗುತ್ತಿದೆ.
ಕೃಷಿ ಚಟುವಟಿಕೆ ಬಂದ್: ಹೊಲಗಳೆಲ್ಲ ಹೊಳೆಯಂತಾಗಿದ್ದು, ಬೆಳೆಯೆಲ್ಲ ನೀರಲ್ಲೇ ನಿಂತಿವೆ. ಕಳೆದ 10 ದಿನಗಳಿಂದಲೇ ಕೃಷಿ ಚಟುವಟಿಕೆಗಳೆಲ್ಲ ಸ್ಥಗಿತವಾಗಿವೆ. ರೈತರು ಸುರಿಯುತ್ತಿರುವ ಮಳೆ ನೋಡಿ ಕಣ್ಣೀರು ಸುರಿಸುವಂತಾಗಿವೆ. ಹೆಸರು, ಅಲಸಂದಿ, ಸೋಯಾಬಿನ್ ಸೇರಿದಂತೆ ಹಲವು ಬೆಳೆಗಳು ಇದೀಗ ಕಟಾವಿಗೆ ಬಂದಿವೆ. ಆದರೆ, ನಿರಂತರ ಮಳೆ ಸುರಿಯುತ್ತಿರುವುದು ಕಟಾವ್ ಮಾಡಲು ಆಗುತ್ತಿಲ್ಲ. ಇದರಿಂದ ಬೆಳೆಹಾನಿ ಅನುಭವಿಸುವಂತಾಗಿದೆ. ಮುಂಗಾರಿನ ಆರಂಭದಲ್ಲಿ ಸ್ವಲ್ಪ ಮಳೆಯಾಗಿತ್ತು. ಬಿತ್ತಿನೆ ಮಾಡಿದ್ದರು. ಆದರೆ, ನಂತರ ಸುರಿದ ಮಳೆಯಿಂದ ಬೆಳೆಹಾನಿಯಾಗಿತ್ತು. ಹೀಗಾಗಿ ಮತ್ತೊಮ್ಮೆ ಹರಗಿ ಮರುಬಿತ್ತನೆ ಮಾಡಿದ್ದ ರೈತರು, ಇದೀಗ ಆ ಬೆಳೆ ಕೂಡ ಕೈಗೆ ಸಿಗುವುದು ಡೌಟು ಎಂಬಂತಾಗಿದೆ. ಹೀಗಾಗಿ ರೈತರ ಪರಿಸ್ಥಿತಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ಬೆಳೆಹಾನಿ ಲೆಕ್ಕ ಹಾಕಬೇಕು. ತಕ್ಷಣವೇ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.