ಕನ್ನಡಪ್ರಭ ವಾರ್ತೆ ಮಂಡ್ಯ
ನಾಲಾ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಹಾಗೂ ಹೈಟೆನ್ಷನ್ ಲೈನ್ಗೆ ಸೂಕ್ತ ಬಫರ್ ಜಾಗವನ್ನು ಬಿಡದೆ ಖಾಸಗಿ ವ್ಯಕ್ತಿಯೊಬ್ಬರು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ನಗರದ ವಿವಿ ನಗರದ 7ನೇ ಕ್ರಾಸ್ ನ ಕಿರಂಗೂರು ಗ್ರಾಮದ ಸರ್ವೇ ನಂ.194/1ರಲ್ಲಿ ವೈ.ಎಲ್.ರವಿ ಅವರು ಕಟ್ಟಡ ನಿರ್ಮಿಸುತ್ತಿರುವ ಜಾಗದ ಪಕ್ಕದಲ್ಲೇ ಕಾವೇರಿ ನೀರಾವರಿ ನಿಗಮದ ನಾಲೆ ಮತ್ತು ನಾಲೆ ರಸ್ತೆ ಹಾಗೂ ಕೆಪಿಟಿಸಿಎಲ್ ನ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದು ಹೋಗಿದೆ. ಆದರೂ ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣ ಮುಂದುವರೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರವಾಗಿ ನಗರಸಭೆ ಆಯುಕ್ತರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ದೂರು ನೀಡಲಾಗಿದೆ.ಈ ದೂರನ್ನು ಆಧರಿಸಿ ನಗರಸಭೆ ಅಧಿಕಾರಿಗಳು, ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ರನ್ನು ವಿಚಾರಿಸಿದಾಗ ಕಟ್ಟಡಕ್ಕೆ ವಿನ್ಯಾಸ ನಕ್ಷೆ ಅನುಮೋದನೆ ಪಡೆಯದಿರುವುದು ಕಂಡು ಬಂದಿದೆ. ಕಟ್ಟಡ ನಿರ್ಮಾಣದ ಲೈಸೆನ್ಸ್ ಪಡೆಯದೆ ನೀರಾವರಿ ಇಲಾಖೆಯ ನಿರಾಪೇಕ್ಷಣಾ ಪತ್ರವನ್ನು ಪಡೆಯದೆ ಕಟ್ಟಡವನ್ನು ನಿರ್ಮಿಸುತ್ತಿರುವುದು ಕಂಡು ಬಂದಿರುವುದಾಗಿ ಆರೋಪಿಸಿದ್ದಾರೆ.
ಈಗಾಗಲೇ ನಗರಸಭೆ ಅಧಿಕಾರಿಗಳು ಮೌಖಿಖವಾಗಿ ಕಟ್ಟಡ ನಿರ್ಮಾಣವನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ.ಆದಾಗ್ಯೂ ಕಟ್ಟಡ ನಿರ್ಮಾಣ ಮುಂದುವರೆಸಿದ್ದಾಗ ಕಟ್ಟಡ ನಿರ್ಮಾಣ ಸಂಬಂಧ ಪರಿಕರಗಳನ್ನು ಹೊತ್ತೊಯ್ದಿದ್ದಾರೆ. ಆದರೂ ಕಟ್ಟಡ ಮಾಲೀಕ ವೈ.ಎಲ್.ರವಿ ರಜಾ ದಿನಗಳಲ್ಲಿ 15ಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನು ಸೇರಿಸಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಿಸುವುದನ್ನು ಮುಂದುವರೆಸಿದ್ದಾರೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರೂ ಲೆಕ್ಕಿಸುತ್ತಿಲ್ಲಂದು ದೂರಿದ್ದಾರೆ.
ಅಕ್ಕ- ಪಕ್ಕದಲ್ಲಿರುವ ಇತರೆ ಒತ್ತುವರಿದಾರರ ಕುಮ್ಮಕ್ಕಿನೊಂದಿಗೆ ದುಂಡಾವರ್ತನೆ ತೋರುತ್ತಾ ಮುಂದುವರೆಸಿರುವ ಅನಧಿಕೃತ ಕಟ್ಟಡ ನಿರ್ಮಾಣವನ್ನು ನಿಲ್ಲಿಸಲು ಸಂಬಂಧಪಟ್ಟಣ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿದ್ದಾರೆ.ಅನಧಿಕೃತ ಕಟ್ಟಡ ನಿರ್ಮಾಣ ಕುರಿತಂತೆ ಸ್ಥಳೀಯರಾದ ಮಂಜುನಾಥ್ , ಶಿವಕುಮಾರ, ಪ್ರತಾಪ್ , ಪುಟ್ಟಸ್ವಾಮಿ, ಲಿಂಗರಾಜು, ರಾಜೇಶ್ , ಪುಷ್ಪ, ಹೆಚ್.ಜಿ.ಸುಲೋಚನಾ, ಜಯಮ್ಮ ಇತರರು ದೂರು ನೀಡಿದ್ದಾರೆ.