ಜಡೇಕುಂಟೆ ಮಂಜುನಾಥ್
ಮಾರ್ಚ್ 22 ವಿಶ್ವ ಜಲದಿನ, 1992ರಲ್ಲಿ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ರಾಷ್ಟ್ರಗಳು 1993 ರಿಂದ ಅಧಿಕೃತವಾಗಿ ಮಾರ್ಚ್ 22 ವಿಶ್ವ ಜಲದಿನವನ್ನಾಗಿ ಆಚರಿಸಲಾಗುತ್ತಿದೆ.
ಕುಡಿಯುವ ನೀರಿನ ಪೂರೈಕೆ, ನೈರ್ಮಲ್ಯ, ನೀರು ಪೋಲಾಗದಂತೆ ಸಂರಕ್ಷಣೆ ಮಾಡುವುದು ಸೇರಿದಂತೆ ಜಲಸಂಪನ್ಮೂಲಗಳನ್ನು ನಿರ್ವಹಣೆ ಮಾಡುವುದೂ ಸೇರಿದಂತೆ ಅನೇಕ ಉದ್ದೇಶಗಳನ್ನು ಇಟ್ಟುಕೊಂಡು ಈ ವಿಶ್ವಜಲ ದಿನವನ್ನು ಆಚರಿಸಲಾಗುತ್ತದೆ. ಚಳ್ಳಕೆರೆಯಂತಹ ಬರಡು ನೆಲದಲ್ಲಿ ಯಾವುದೇ ನೀರಾವರಿ ಯೋಜನೆಗಳು ಇಲ್ಲದೇ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ. ತಾಲೂಕಿನಲ್ಲಿ ಹರಿಯುತ್ತಿದ್ದ ಏಕೈಕ ಜೀವನದಿ ವೇದಾವತಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ನಿಜವಾದ ನೀರಿನ ರಕ್ಷಣೆ, ಅಂತರ್ಜಲ ಮಟ್ಟ ಸುಧಾರಣೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವ ಕಡೆಗೆ ಮಹತ್ವದ ಕಾರ್ಯ ಆಗಿರುವ ದೃಶ್ಯಗಳು ಜನಪ್ರತಿನಿಧಿಗಳ ಕಾಳಜಿಗಳ ಸಾಕ್ಷೀಕರಿಸಿವೆ.ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಎಂದೇ ಚಳ್ಳಕೆರೆ ಹೆಸರಾಗಿದೆ. ಕಾಲಕ್ಕೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ಇಲ್ಲಿನ ರೈತ ಬಿತ್ತಿದ ಬೀಜ ಮೊಳಕೆಯೊಡೆದು ಫಲ ಕೊಡುವ ಹೊತ್ತಿಗೆ ಹೈರಾಣಗೊಂಡಿರುತ್ತಾನೆ. ಇಂತಹ ಸಂಕಷ್ಟಗಳನ್ನೇ ಉಂಡು ಬದುಕುವ ಈ ಭಾಗದ ರೈತನಿಗೆ ಕುಡಿಯುವ ನೀರಿಗೂ ತತ್ವಾರ ಪಡಬೇಕಾದಂತಹ ದುಸ್ಥಿತಿ ಇತ್ತು.
ಇಂತಹ ಸಂದರ್ಭದಲ್ಲಿ 2008 ರಿಂದ 2013ರ ಅವಧಿಗೆ ಶಾಸಕರಾಗಿದ್ದ ದಿವಂಗತ ತಿಪ್ಪೇಸ್ವಾಮಿ ಅವರು ಜಾಜೂರು ಹತ್ತಿರದ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ಸಣ್ಣ ನೀರಾವರಿ ಇಲಾಖೆಯಿಂದ ವೇದಾವತಿ ನದಿ ವ್ಯಾಪ್ತಿಯ ಬೊಂಬೇರಹಳ್ಳಿ, ಗೊರ್ಲತ್ತು, ಮೋದೂರು ಗ್ರಾಮಗಳ ಸಮೀಪ ಬ್ಯಾರೇಜ್ ನಿರ್ಮಾಣ ಮಾಡಿದ್ದಾರೆ. ಇದಲ್ಲದೇ ತಾಲ್ಲೂಕಿನ ಗೋಸಿಕೆರೆ ಮತ್ತು ತೋರೆಬೀರನಹಳ್ಳಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಆಗಲೇ ಸರ್ಕಾರ ಹಸಿರು ನಿಶಾನೆ ತೋರಿರುವುದು ಈ ಭಾಗದ ಜನರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.