ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಜನಸಂಖ್ಯೆವಾರು ಒಳ ಮೀಸಲಾತಿ ಜಾರಿಗಳಿಸುವ ಉದ್ದೇಶದಿಂದ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕ ನಿರ್ದಿಷ್ಟ ವರದಿ ಬರುವವರೆಗೂ ಈ ವರದಿ ತಡೆ ಹಿಡಿಯಬೇಕು ಎಂದು ಬಲಗೈಜಾತಿಗಳ ಒಕ್ಕೂಟದ ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಡಾ.ಟಿ.ಶ್ರೀನಿವಾಸಪ್ಪ ಆಗ್ರಹಿಸಿದರು.ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಹೊಲಯ ಜಾತಿಗಳಿಗೆ ಸಂಬಂಧಿಸಿದ ಛಲವಾದಿ, ಚನ್ನದಾನ, ದಾನ, ಅದಿ ಕರ್ನಾಟಕ, ಅದಿ ದ್ರಾವಿಡ ಇತರ ಹೊಲಯ ಜಾತಿಗಳಿಗೆ ಸಂಬಂಧಿಸಿ ವರ್ಗಗಳನ್ನು ಒಟ್ಟುಗೂಡಿಸಿ ಜನಸಂಖ್ಯೆಯನ್ನು ನಮೂದಿಸುವ ಬದಲು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಈ ಮುಖಾಂತರ ಹೊಲಯ ಬಲಗೈ ಜಾತಿಗೆ ಘೋರ ಅನ್ಯಾಯ ಮಾಡುವಂತಹ ಅವೈಜ್ಞಾನಿಕ ವರದಿ ನೀಡಿದೆ. ಮತ್ತು ಪರಿಶಿಷ್ಟ ಜಾತಿಯ ನಿಖರ ಜಾತಿ ನಮೂದಿಸದಿದ್ದರೂ ಅನುಬಂಧ ವರದಿಯನ್ನು ನೀಡಿ ಎ.ಬಿ.ಸಿ. ಗುಂಪುಗಳಾಗಿ ಮಾರ್ಪಡಿಸಿರುವ ಈ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಆಹಾರ ಸರಬರಾಜಿನ ಬಿಲ್ಲುಗಳನ್ನು ಮತ್ತು ಆಹಾರ ಧಾನ್ಯ, ತರಕಾರಿ, ಹಾಲು, ಮೊಟ್ಟೆ, ಬಾಳೆಹಣ್ಣು, ಚಿಕನ್ ನಂತಹ ಖರೀದಿ ನಕಲಿ ಬಿಲ್ ನೀಡಿ ವಂಚಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಮುಂದೆ ಮಾರ್ಚ್ 24 ರಂದು ಬಲಗೈಜಾತಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವೈಜ್ಞಾನಿಕ ಒಳ ಮೀಸಲಾತಿ ವರದಿಯನ್ನು ತಿರಸ್ಕರಿಸಿ ವೈಜ್ಞಾನಿಕ ಗಣತಿ ಮಾಡಿಸಿ ಒಳ ಮೀಸಲಾತಿ ನೀಡಬೇಕು. ಜಿಲ್ಲೆಯ ಹಾಸ್ಟೆಲ್ಗಳಲ್ಲಿ ನಡೆಸಿರುವ ಆಹಾರ ಧಾನ್ಯ, ತರಕಾರಿ, ಹಾಲು, ಮೊಸರು, ಮೊಟ್ಟೆ, ಬಾಳೆಹಣ್ಣು ಸರಬರಾಜಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಗೌರವಾಧ್ಯಕ್ಷ ತ್ಯಾಗರಾಜು ಮಾತನಾಡಿ, ಟೆಂಡರ್ ಪಡೆದ ಮೂಲ ಗುತ್ತಿಗೆದಾರ ಮಕ್ಕಳ ಅನ್ನದ ಹಗರಣದಲ್ಲಿ ಭಾಗಿದಾರನಾಗಿರುವ ಕಾರಣ ಇವರ ಇ.ಎಂ.ಡಿ. ಹಣವನ್ನು ಮುಟ್ಟುಗೋಲು ಹಾಕಿ ಕಪ್ಪುಪಟ್ಟಿಗೆ ಸೇರಿಸಬೇಕು. ಹಗರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಮತ್ತು ಸುಮಾರು ವರ್ಷಗಳಿಂದ ಇಲಾಖೆಗಳಲ್ಲಿ ಬೀಡುಬಿಟ್ಟರುವ ನೌಕರರನ್ನು ವರ್ಗಾವಣೆಗೊಳಿಸಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರಬರಾಜು ಸಮಿತಿ ರಚಿಸಿ ಆ ಮುಖಾಂತರ ಗುಣಮಟ್ಟದ ಅಪಾರ ಧಾನ್ಯ, ತರಕಾರಿ ಇತರ ಪದಾರ್ಥಗಳನ್ನು ಸರಬರಾಜು ಮಾಡಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಲಹಾ ಸಮಿತಿ ಅಧ್ಯಕ್ಷ ವೆಂಕಟರೆಡ್ಡಿ, ನಾರಾಯಣ ಸ್ವಾಮಿ, ಖಜಾಂಚಿ ನರಸಿಂಹ ಮೂರ್ತಿ ಮತ್ತಿತರರು ಇದ್ದರು.