ಮಂತ್ರಾಲಯದಿಂದ ಹಂಪಿಯ ನರಹರಿತೀರ್ಥರ ಆರಾಧನೆಗೆ ತೆರುಳುತ್ತಿದ್ದ ಕ್ರೂಷರ್ ವಾಹನ ಸಿಂಧನೂರು ಬಳಿ ಪಲ್ಟಿಯಾಗಿ ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಗಂಗಾವತಿ ವಿದ್ಯಾರ್ಥಿಯೋರ್ವ ಸೇರಿದಂತೆ ಮೂವರು ವಿದ್ಯಾರ್ಥಿಗಳು, ಚಾಲಕ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
10 ಜನರಿಗೆ ಗಾಯ । ಸಿಂಧನೂರು ಬಳಿ ಘಟನೆ
ಕನ್ನಡಪ್ರಭ ವಾರ್ತೆ ಗಂಗಾವತಿ
ಮಂತ್ರಾಲಯದಿಂದ ಹಂಪಿಯ ನರಹರಿತೀರ್ಥರ ಆರಾಧನೆಗೆ ತೆರುಳುತ್ತಿದ್ದ ಕ್ರೂಷರ್ ವಾಹನ ಸಿಂಧನೂರು ಬಳಿ ಪಲ್ಟಿಯಾಗಿ ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಗಂಗಾವತಿ ವಿದ್ಯಾರ್ಥಿಯೋರ್ವ ಸೇರಿದಂತೆ ಮೂವರು ವಿದ್ಯಾರ್ಥಿಗಳು, ಚಾಲಕ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಗಂಗಾವತಿಯ ಹಯವದನ ಪ್ರಹ್ಲಾದಚಾರ ಕಟ್ಟಿ(18), ಮಂತ್ರಾಲಯದ ಸುಜಯೇಂದ್ರ ಕೃಷ್ಣಮೂರ್ತಿ(22), ಕೊಪ್ಪಳದ ಅಭಿಲಾಷಾ ಅಶ್ವತ್ ಓಲಿ(20) ಹಾಗೂ ಮಂತ್ರಾಲಯದ ಚಾಲಕ ಕಂಸಾಲಿ ಶಿವ ಕೆ.ಸೋಮಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಗಳು ಮಂತ್ರಾಲಯದ ಗುರುಸಾರ್ವ ಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಮಾಡುತ್ತಿದ್ದರು. ವಾಹನದಲ್ಲಿದ್ದ ಇನ್ನು 10 ಜನರು ಗಾಯಗೊಂಡಿದ್ದು, ಗಂಗಾವತಿ, ಸಿಂಧನೂರು ಮತ್ತು ರಾಯಚೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರಾಧನೆಗೆ ....:
ಮಂತ್ರಾಲಯದಿಂದ ಹಂಪಿಯ ತುಂಗಭದ್ರಾ ನದಿ ಮಧ್ಯದಲ್ಲಿರುವ ನರಹರಿತೀರ್ಥರ ಆರಾಧನೆಗೆ ಮೂರು ಕ್ರೂಷರ್ ವಾಹನದಲ್ಲಿ ವಿದ್ಯಾರ್ಥಿಗಳು ತೆರುಳುತ್ತಿದ್ದರು. ಮೊದಲನೇ ಕ್ರೂಷರ್ನಲ್ಲಿದ್ದ 14 ವಿದ್ಯಾರ್ಥಿಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸಿಂಧನೂರು ಸಮೀಪದ ವೈಷ್ಣವಿ ದೇವಸ್ಥಾನದ ಸೇತುವೆ ಬಳಿ ಈ ಘಟನೆ ನಡೆದಿದೆ. ಚಾಲಕನ ನಿರ್ಲಕ್ಷ ಮತ್ತು ಅತಿ ವೇಗ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಸ್ವಾಮೀಜಿ ಭೇಟಿ:
ವಿದ್ಯಾರ್ಥಿಗಳ ವಾಹನ ಪಲ್ಟಿ ಸುದ್ದಿ ತಿಳಿಯುತ್ತಿದ್ದಂತೆಯೇ ಮಂತ್ರಾಲಯ ಮಠಾಧೀಶ ಸುಬುಧೇಂದ್ರತೀರ್ಥ ಶ್ರೀಗಳು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಶೋಕ ವ್ಯಕ್ತಪಡಿಸಿದರು. ಇಂತಹ ಘಟನೆ ನಡೆಯಬಾರದಿತ್ತು. ಕೂಡಲೇ ಪೊಲೀಸ್ ಇಲಾಖೆಯವರು ಮುಂದಿನ ಕ್ರಿಯೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.