ಸಂಭ್ರಮದ ವೇಣುಗೋಪಾಲಸ್ವಾಮಿ ಹಾಲೋಕುಳಿ ಜಾತ್ರೆ

KannadaprabhaNewsNetwork | Published : Aug 30, 2024 1:00 AM

ಸಾರಾಂಶ

Venugopalaswamy Halokuli fair of celebration

- ಸುರಪುರದ ಸ್ವಾಮಿಗೆ ವಿಶೇಷ ಪೂಜೆ, ಸಾವಿರಾರು ಭಕ್ತರಿಂದ ದೇವರ ದರ್ಶನ

------

ಕನ್ನಡಪ್ರಭ ವಾರ್ತೆ ಸುರಪುರ

ಸಗರ ನಾಡಿನ, ಸುಪ್ರಸಿದ್ಧ ಐತಿಹಾಸಿಕ ವೇಣುಗೋಪಾಲ ಸ್ವಾಮಿಯ ಹಾಲೋಕುಳಿ ಜಾತ್ರೆ ಅದ್ಧೂರಿಯಾಗಿ ಆಚರಿಸಲಾಯಿತು.

ಧಾರ್ಮಿಕ ವಿಧಿ-ವಿಧಾನದಂತೆ ಮಂಗಳವಾರ ಬೆಳಿಗ್ಗೆ 5:30ಕ್ಕೆ ವೇಣುಗೋಪಾಲ ಸ್ವಾಮಿಗೆ ಸುಪ್ರಭಾತ ಪೂಜೆ ಬಳಿಕ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಸ್ವಾಮಿಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಅದೇ ರೀತಿ ಸುರಪುರ ಸಂಸ್ಥಾನದ ದರಬಾರಿನಲ್ಲಿಯೂ ಬೆಳಗಿನಿಂದಲೂ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.

ಸುರಪುರ ನಗರ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹರಕೆ ತೀರಿಸಿದರು. ಸಂಜೆ ಸುರಪುರ ಸಂಸ್ಥಾನದಿಂದ ಹಣ್ಣುಕಾಯಿ, ಹೂವನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ಬಳಿಕ ಗೋಪಾಲಸ್ವಾಮಿ ಪಲ್ಲಕ್ಕಿ ಸೇವೆ ನೆರವೇರಿಸಲಾಯಿತು. ಗರುಡ ಸೇವೆಯೂ ಅಪಾರ ಭಕ್ತರ ಮಧ್ಯೆ ಜರುಗಿತು.

ಸಂಜೆ ಅರಮನೆಯಿಂದ ರಾಜ ಗುರುಗಳೊಂದಿಗೆ ರಾಜ ಮನೆತನದ ಮತನದಾರರು ಮೈಮೂರರೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು.

ಸುರಪುರ ಸಂಸ್ಥಾನದ ಪ್ರತಿನಿಧಿಯಾಗಿ ಗಣಪತಿರಾವ್ ಜಾಗೀರ್‌ದಾರ್ ಅವರು ನಾಣ್ಯ ಚಿಮ್ಮುವ ಮೂಲಕ ದೇವರ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು. ದೇವರ ಗಂಬ ಏರುವ ಪ್ರತಿನಿಧಿಗಳು ದೇವರಸ್ತಂಭವೇರಿ ಬಾಳೆಹಣ್ಣು ಹರಿದರು. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಆಚರಣೆಯನ್ನು ಸರಳವಾಗಿ ನೆರವೇರಿಸಲಾಯಿತು. ಸಿಪಿಐ ಆನಂದ ವಾಗ್ಮೋಡೆ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಅರಸು ಮನೆತನದ ಪ್ರತಿನಿಧಿಗಳಾದ ದಿನೇಶ್ ಮಂತ್ರಿ, ಸುನೀಲ್ ಸರ್ ಪಟ್ಟಣಶೆಟ್ಟಿ, ವೀರೇಶ್ ದೇಶಮುಖ್, ಉಸ್ತಾದ್ ವಜಾಹತ್ ಹುಸೇನ್, ಅಜೀಮ್ ಬೆಳ್ಳಿಬತ್ತ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪನವರಮಠ, ಶರಣು ಕಳ್ಳಿಮನಿ ಸೇರಿದಂತೆ 14 ಕೇರಿಯ ವತನದಾರರು, ಅರ್ಚಕ ಆಂಜನೇಯಚಾರಲು ಇತರರಿದ್ದರು.

----

.....ಕೋಟ್ -1.....

ಭಕ್ತರ ಸಹಕಾರದಿಂದ ವೇಣುಗೋಪಾಲಸ್ವಾಮಿ ಜಾತ್ರೆ ಆಚರಿಸಲಾಗಿದೆ. ಭಕ್ತರು ಅಪಾರ ಪ್ರಮಾಣದಲ್ಲಿ ಆಗಮಿಸಿದ್ದಾರೆ. ಸಂತೋಷವಾಗಿದೆ. ಅರಸರು ನಡೆಸಿಕೊಂಡಿರುವ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ. ಗುರುವಾರ ಕುಸ್ತಿ ಪಂದ್ಯಾವಳಿ ನಡೆಯಲಿದೆ. ರಮಣಪ್ಪ ನಾಯಕ ವೃತ್ತದಲ್ಲಿ ರಣಗಂಭಾರೋಹಣ ನಡೆಯಲಿದೆ.

- ರಾಜಾ ಕೃಷ್ಣಪ್ಪನಾಯಕ, ಸುರಪುರ ಸಂಸ್ಥಾನದ ಅರಸ.

-----------

29ವೈಡಿಆರ್2: ಸುರಪುರ ನಗರದ ವೇಣುಗೋಪಾಲಸ್ವಾಮಿ ಜಾತ್ರೆ ನಿಮಿತ್ತ ಆಗಮಿಸಿದ್ದ ಭಕ್ತಗಣ.

---------

29ವೈಡಿಆರ್3: ದೇವರಗಂಬ ಏರುತ್ತಿರುವ ಪ್ರತಿನಿಧಿಗಳು.

Share this article