ಸಗರನಾಡಿನ ವೇಣುಗೋಪಾಲಸ್ವಾಮಿ ಜಾತ್ರೆ ಸ್ತಂಭಾರೋಹಣ

KannadaprabhaNewsNetwork |  
Published : Sep 06, 2026, 01:15 AM IST
 ಸುರಪುರದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೆಯ ಅಂಗವಾಗಿ ಶನಿವಾರ ಸಂಜೆ ನಡೆದ ಸ್ತಂಭಾರೋಹಣದ ರೋಮಾಂಚನಕಾರಿ ದೃಶ್ಯ. (ಚಿತ್ರ : ಮಂಜುನಾಥ್‌ ಎಸ್‌. ಬಿರಾದರ್, ಸಗರ) | Kannada Prabha

ಸಾರಾಂಶ

ಸಗರನಾಡಿನ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ಜಾತ್ರೆ ಎರಡನೇ ದಿನವಾದ ಶನಿವಾರ ಸಂಜೆ (ಸೆ.5) ನಡೆದ ದೇವರಗಂಬ ಸ್ತಂಭಾರೋಹಣದ ವೈಭವ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಜನಸಾಗರವೇ ಹರಿದುಬಂದಿತ್ತು. ಸಂಜೆ 6ಕ್ಕೆ ಆರಂಭವಾದ ಸಾಂಪ್ರದಾಯಿಕ ಕಂಬಾರೋಹಣ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಸುರಪುರ

ಸಗರನಾಡಿನ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ಜಾತ್ರೆ ಎರಡನೇ ದಿನವಾದ ಶನಿವಾರ ಸಂಜೆ (ಸೆ.5) ನಡೆದ ದೇವರಗಂಬ ಸ್ತಂಭಾರೋಹಣದ ವೈಭವ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಜನಸಾಗರವೇ ಹರಿದುಬಂದಿತ್ತು. ಸಂಜೆ 6ಕ್ಕೆ ಆರಂಭವಾದ ಸಾಂಪ್ರದಾಯಿಕ ಕಂಬಾರೋಹಣ ವಿಜೃಂಭಣೆಯಿಂದ ಜರುಗಿತು.

ಜಾತ್ರೆಯ ಅಂಗವಾಗಿ ಬೆಳಗ್ಗಿನಿಂದಲೇ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಭಕ್ತರ ದಂಡೇ ಆಗಮಿಸಿತ್ತು. ಗರ್ಭಗುಡಿಯಲ್ಲಿ ರುಕ್ಮಣಿ, ಸತ್ಯೆಭಾಮೆ ಸಹಿತ ವೇಣುಗೋಪಾಲ ಸ್ವಾಮಿಯ ಭವ್ಯ ಮೂರ್ತಿಗೆ ತುಳಸಿ ಹಾಗೂ ನಾನಾ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ಸ್ವಾಮಿಯ ದರ್ಶನ ಪಡೆದ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥಗಳನ್ನು ಈಡೇರಲಿ ಎಂದು ಪ್ರಾರ್ಥಿಸಿದರು.

ಮನೆಮನೆಯಲ್ಲೂ ನೈವೇದ್ಯದ ಸಂಭ್ರಮ: ಜಾತ್ರೆಯ ಹಿನ್ನೆಲೆಯಲ್ಲಿ ನಗರದ ಮನೆಮನೆಗಳಲ್ಲೂ ಬೆಳಗ್ಗಿನಿಂದಲೇ ಹಬ್ಬದ ವಾತಾವರಣ ಕಂಡುಬಂತು. ದೇವರಿಗೆ ನೈವೇದ್ಯ ಅರ್ಪಿಸಲು ಹೋಳಿಗೆ, ಕರಿಚಿಕಾಯಿ(ಕಡಬು) ಸೇರಿದಂತೆ ವಿವಿಧ ಸಾಂಪ್ರದಾಯಿಕ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು. ಕುಟುಂಬ ಸಮೇತರಾಗಿ ದೇವಾಲಕ್ಕೆ ತೆರಳಿ ಭಕ್ತರು ಸ್ವಾಮಿಯ ದರ್ಶನ ಪಡೆದು ಕಾಯಿ, ಕರ್ಪೂರ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿದರು.

ನೈವೇದ್ಯವನ್ನು ದಾಸರ ಗೋಪಾಳ ಬುಟ್ಟಿಯಲ್ಲಿ ತುಂಬಿಸಿ ಸ್ವಾಮಿಗೆ ಅರ್ಪಿಸುವ ಸಂಪ್ರದಾಯವೂ ನಡೆಯಿತು.

ಸ್ತಂಭಾರೋಹಣದ ಕಣ್ತುಂಬಿಕೊಳ್ಳಲು ಜನಸಾಗರ: ಸಂಜೆ ಸ್ತಂಭಾರೋಹಣದ ಸಮಯ ಸಮೀಪಿಸುತ್ತಿದ್ದಂತೆಯೇ, ದೇವಾಲಯದ ಸುತ್ತಮುತ್ತ ಹಾಗೂ ಪ್ರಮುಖ ಬೀದಿಗಳಲ್ಲಿ ಜನದಟ್ಟಣೆ ಹೆಚ್ಚಾಯಿತು. ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ವೀಕ್ಷಿಸಲು ಕಾತರದಿಂದ ಕಾದಿದ್ದರು.

ದೇವಾಲಯದ ಆವರಣದಲ್ಲಿ ಸುಮಾರು 50 ಅಡಿ ಎತ್ತರದ ಐದು ಕಂಬಗಳನ್ನು ನಿಲ್ಲಿಸಲಾಗಿತ್ತು. ಕಂಬಗಳಿಗೆ ಎಣ್ಣೆ, ರಾಳ ಸೇರಿದಂತೆ ಅನೇಕ ಪದಾರ್ಥಗಳನ್ನು ಹಚ್ಚಿ ಜಾರುವಂತೆ ಮಾಡಲಾಗಿತ್ತು. ವತನ್ದಾರರು ಪೂಜೆ ಸಲ್ಲಿಸಿದ ಬಳಿಕ ದೇವಾಸ್ಥಾನದ ಮೇಲಿಂದ ನಾಣ್ಯಗಳನ್ನು ಚಿಮ್ಮುವ ಮೂಲಕ ಕಂಬಾರೋಹಣಕ್ಕೆ ಚಾಲನೆ ನೀಡಲಾಗಿತ್ತು. ಕಂಬ ಏರುವ ಆರೋಹಿಗಳಿಗೆ ಕೆಳಗಿನಿಂದ ಹಾಲೋಕಳಿ ಸಂಪ್ರದಾಯದಂತೆ ಚರ್ಮದ ಚೀಲಗಳಲ್ಲಿದ್ದ ನೀರನ್ನು ಪಿಚಕಾರಿಯಿಂದ (ತಿತ್ಯಾ) ಮೂಲಕ ಸಿಂಪಡಿಸುತ್ತಿದ್ದರು. ಕಂಬದ ತುದಿಯ ಕುಳಿತಿದ್ದ ವ್ಯಕ್ತಿಯು ಕೂಡಾ ಮಡಿಕೆಯಲ್ಲಿದ್ದ ಹಣ್ಣು ಮಿಶ್ರಿತ ನೀರನ್ನು ಆರೋಹಿಗಳ ಮೇಲೆ ಸುರಿಯುತ್ತಿದ್ದರಿಂದ ಕಂಬ ಮತ್ತಷ್ಟು ಜಾರುವಂತಾಗಿತ್ತು. ಪರಿಣಾಮ ಕಂಬ ಏರಲು ಯತ್ನಿಸುತ್ತಿದ್ದವರು ಪದೇಪದೇ ಜಾರಿ ಕೆಳಗೆ ಬೀಳುತ್ತಿದ್ದ ದೃಶ್ಯ ನೋಡುಗರಲ್ಲಿ ಕುತೂಹಲ ಮೂಡಿಸಿತು.

ಆದರೂ ಛಲ ಬಿಡದ ಆರೋಹಿಗಳು ಪರಸ್ಪರ ನೆರವಿನಿಂದ ಕಂಬದ ತುದಿಯತ್ತ ಸಾಗಿದರು. ಕೊನೆಗೆ ಕಂಬದ ತುದಿಗೆ ತಲುಪಿ ಕಟ್ಟಲಾಗಿದ್ದ ಹಣ್ಣಿನ ಹೋಳುಗಳನ್ನು ಕಿತ್ತು ಭಕ್ತರ ಮೇಲೆ ಎಸೆದು ನೆರದಿದ್ದ ಭಕ್ತರ ಚಪ್ಪಾಳೆ, ಸಿಳ್ಳೆ ಹಾಗೂ ಜಯಕಾರ ಹಾಕುವ ಮೂಲಕ ಸಂಭ್ರಮಿಸಿದರು. ಭಕ್ತರು ದೇವಾಲಯದ ಮೆಟ್ಟಿಲ ಮೇಲೆ ಸುತ್ತಮುತ್ತಲಿನ ಅಂಗಡಿ ಮನೆಗಳ ಮೇಲೆ ನಿಂತು ಕಂಬಾರೋಹಣ ವೀಕ್ಷಿಸಿದರು. ಜಾತ್ರೆ ಸಂಪನ್ನಗೊಂಡಿತು. ಬಳಿಕ ಗರುಡ ವಾಹನದಲ್ಲಿ ವೇಣುಗೋಪಾಲ ಸ್ವಾಮಿ ಪಲ್ಲಕ್ಕಿಯ ಮೂಲಕ ಉತ್ಸವ ಅದ್ಧೂರಿಯಾಗಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಘನತೆ ಗಾಳಿಗೆ ಬಿಟ್ಟು, ಭಾಷಣದಲ್ಲಿ ಗೌರವ ಕೊಟ್ಟು ಹೊರಟರು!
ದೇವದುರ್ಗದಲ್ಲಿ ಪ್ರಜಾ ಸೇವೆ ಅಂದೋಲನಕ್ಕೆ ಶಾಸಕಿ ಚಾಲನೆ