ರೋಣ: ವೀರರಾಣಿ ಕಿತ್ತೂರು ಚೆನ್ನಮ್ಮನ ದತ್ತು ಪುತ್ರ ಸವಾಯಿ ಮಲ್ಲಸರ್ಜಾ ವಂಶಸ್ಥರಾದ (ಮರಿ ಮೊಮ್ಮಗ) ವಿಜಯಕುಮಾರಸರ್ಜಾ ದೇಸಾಯಿ (78) ಭಾನುವಾರ ನಿಧನರಾದರು.
ವೈದ್ಯಕೀಯ ಅಧ್ಯಯನಕ್ಕೆ ಅನುಕೂಲವಾಗಲೆಂದು ವಿಜಯಕುಮಾರಸರ್ಜಾ ಬದುಕಿದ್ದಾಗಲೇ ದೇಹದಾನ ವಾಗ್ದಾನ ಮಾಡಿದ್ದರು. ಅದರಂತೆ ಕುಟುಂಬಸ್ಥರು ಹುಬ್ಬಳ್ಳಿ ಕೆಎಂಸಿಆರ್ಐಗೆ ಮೃತರ ದೇಹದಾನ ಮಾಡಿದರು. ಈ ಮೂಲಕ ಸಾವಿನಲ್ಲೂ ವಿಜಯಕುಮಾರಸರ್ಜಾ ದೇಸಾಯಿ ಸಾರ್ಥಕತೆ ಮೆರೆದಿದ್ದಾರೆ.
ವಿಜಯಕುಮಾರಸರ್ಜಾ ದೇಸಾಯಿ ಅವರು ದಲಿತ, ರೈತ, ಶೋಷಿತ ಸಮಾಜದ ಪರ ಬದುಕಿನುದ್ದಕ್ಕೂ ಹೋರಾಟ ಮಾಡಿ ನ್ಯಾಯ ಒದಗಿಸುವಲ್ಲಿ ಅಪಾರ ಶ್ರಮಿಸಿದ್ದಾರೆ.ರೈತರ ನೀರಾವರಿ ಪಂಪ್ಸೆಟ್ ವಿದ್ಯುತ್ ಬಿಲ್ ಬಾಕಿ ಮನ್ನಾ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆ, ಪಶು ಆಸ್ಪತ್ರೆಗಳ ಸ್ಥಾಪನೆಗಾಗಿ ಹಾಗೂ ಚುನಾವಣೆಯಲ್ಲಿರುವ ಲೋಪ-ದೋಷಗಳನ್ನು ಸರಿಪಡಿಸುವುದು, ಅಂಚೆ ಕಚೇರಿಯಲ್ಲಿ ವಿತರಿಸಲಾಗುತ್ತಿದ್ದ ಒಂದು ರುಪಾಯಿ ರೆವಿನ್ಯೂ ಸ್ಟಾಂಪ್ ಸ್ಥಗಿತ ಮಾಡಿರುವುದನ್ನು ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಚಳವಳಿ ಹೋರಾಟ ನಡೆಸಿ ದೇಶದ ಗಮನ ಸೆಳೆದಿದ್ದರು. ಕಿತ್ತೂರು ರಾಣಿ ಚೆನ್ನಮ್ಮನ ದತ್ತು ಪುತ್ರ ಮಲ್ಲಸರ್ಜಾ ಅವರ ಜೀವನ ಚರಿತ್ರೆ ಕುರಿತು "ಸವಾಯಿ ಮಲ್ಲಸರ್ಜಾ " ಕೃತಿ ರಚಿಸಿದ್ದಾರೆ.