ಕನ್ನಡಪ್ರಭ ವಾರ್ತೆ ಪಾಂಡವಪುರ
ಮಕ್ಕಳ ಮೊದಲ ಕಲಿಕಾ ಕೇಂದ್ರ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೇಕಿರುವ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದು ಆಯಾ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ.
ಅಂಗನವಾಡಿ, ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಇವುಗಳನ್ನು ಒದಗಿಸಿಕೊಡಬೇಕು. ಆದರೆ, ಕನಗನಮರಡಿ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಚಿಕ್ಕಮರಳಿ ಗ್ರಾಮದ ಮೊದಲ ಅಂಗನವಾಡಿಗೆ ಕಳೆದ ಒಂದು ವರ್ಷದಿಂದಲೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸದ ಕಾರಣ ಅಂಗನವಾಡಿ ಸಹಾಯಕಿಯರು, ಮಕ್ಕಳು ಕುಡಿಯುವ ನೀರಿಗಾಗಿ ಬೇರೆಡೆಯಿಂದ ತರುವಂಥ ಪರಿಸ್ಥಿತಿ ಎದುರಾಗಿದೆ.ನೀರಿನ ಕೊರತೆಯಿಂದ ಶೌಚಾಲಯವಿದ್ದರೂ ಮಕ್ಕಳು ಶೌಚಾಲಯಕ್ಕೆ ಹೋಗದ ಪರಿಸ್ಥಿತಿ ಎದುರಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಫ್ಯಾನ್ ವ್ಯವಸ್ಥೆ ಮಾಡಿಲ್ಲ. ಮಕ್ಕಳು ಶೆಕೆಯಲ್ಲಿ ಮಲಗುವ ಸ್ಥಿತಿ ಎದುರಾಗಿದೆ. ಅಂಗನವಾಡಿ ಕೇಂದ್ರಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಗ್ರಾಪಂ ಪಿಡಿಒ ಹಾಗೂ ವಾಟರ್ ಮೆನ್ಗೆ ಕಳೆದ ಒಂದು ವರ್ಷದಿಂದ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ.
ಕಂದಾಯ ವಸೂಲಾತಿ ಮಾಡಲು ಗ್ರಾಮಕ್ಕೆ ಆಗಮಿಸಿದ ಬಿಲ್ ಕಲೆಕ್ಟರ್ ಮಧು ಅವರನ್ನು ಸಾರ್ವಜನಿಕರು ಪ್ರಶ್ನಿಸಿದರೆ ಸಾರ್ವಜನಿಕರ ವಿರುದ್ಧವೇ ದರ್ಪದಿಂದ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ನವೀನ್ಕುಮಾರ್ ಆರೋಪಿಸಿದ್ದಾರೆ.