ಹೆಬ್ರಿ: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೆಬ್ರಿ, ಕುಚ್ಚೂರು ಮತ್ತು ಮಾಂಡಿಮೂರ್ ಕೈ ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ಈಗ ವಿವಾದಕ್ಕೆ ಕಾರಣವಾಗಿದೆ. ರಸ್ತೆ ಅಗಲೀಕರಣ ಮಾಡದೆ, ಪ್ರಸ್ತುತ ಇರುವ ರಸ್ತೆಯ ಮೇಲೆಯೇ ಅಸಮರ್ಪಕವಾಗಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಹೆಬ್ರಿ ಕುಚ್ಚೂರು ಭಾಗದ ಗ್ರಾಮಸ್ಥರು ಕಾಮಗಾರಿ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಸ್ತೆಯ ಇಕ್ಕೆಲಗಳಲ್ಲಿನ ಸಂಚಾರ ದಟ್ಟಣೆಯಿಂದಾಗಿ ಪ್ರಯಾಣಿಕರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೊದಲೇ ನಿರ್ಧರಿಸಿದಂತೆ ರಸ್ತೆ ಅಗಲೀಕರಣ ಮಾಡಿಯೇ ಡಾಂಬರೀಕರಣ ಮಾಡಬೇಕು, ಇಲ್ಲದಿದ್ದರೆ ಕಾಮಗಾರಿ ಬೇಡ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಕಾಮಗಾರಿ ನಿಲ್ಲಿಸಲು ಸೂಚನೆ: ಮತ್ತೊಂದೆಡೆ, ಸ್ಥಳೀಯರ ದೂರಿನ ಮೇರೆಗೆ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಅವರು, ಕೇವಲ ಫೈಲ್ ಕ್ಲೋಸ್ ಮಾಡಲು ಚೆನ್ನಾಗಿರುವ ರಸ್ತೆಗೆ ಪುನಃ ಡಾಂಬರು ಹಾಕುವ ಅಗತ್ಯವೇನಿದೆ? ಈಗ ಕಾಮಗಾರಿ ಮುಗಿಸಿ ಹೋದರೆ ಮುಂದೆ ರಸ್ತೆ ಅಗಲೀಕರಣವಾಗುವುದಿಲ್ಲ. ಈಗ ಮಳೆಗಾಲವೂ ಆರಂಭವಾಗಿರುವುದರಿಂದ ತಕ್ಷಣ ಕೆಲಸ ನಿಲ್ಲಿಸಿ. ಇನ್ನು ಮೂರು-ನಾಲ್ಕು ತಿಂಗಳು ಕಾಯ್ದು, ಅರಣ್ಯ ಇಲಾಖೆಯ ಅನುಮತಿ ಸಿಕ್ಕ ನಂತರವೇ ವ್ಯವಸ್ಥಿತವಾಗಿ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಮಾಡಿ ಎಂದು ಖಡಕ್ ಸೂಚನೆ ನೀಡಿದರು.ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ, ಚಾರ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ ಮತ್ತಿತರರಿದ್ದರು.