ಜಂಟಿ ಸುದ್ದಿ ಗೋಷ್ಠಿ ನಡೆಸಿದ ಗ್ರಾಮಸ್ಥರು
ಮುತ್ತಿನಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಮದ್ಯೆ ಹಾದು ಹೋಗಿರುವ ರಸ್ತೆ ಮುಚ್ಚುವುದಕ್ಕೆ ಆ ಭಾಗದ ಗ್ರಾಮಸ್ಥರ ವಿರೋಧವಿದೆ ಎಂದು ಭದ್ರಾ ಕಾಲೋನಿ ಹಾಗೂ ಜನತಾ ಕಾಲೋನಿ ಗ್ರಾಮದ ಮುಖಂಡರು ಜಂಟಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಮಂಗಳವಾರ ಪತ್ರಿಕಾ ಭವನದಲ್ಲಿ ಮುತ್ತಿನಕೊಪ್ಪ ಗ್ರಾಮದ ಭದ್ರಾ ಕಾಲೋನಿ ಎಸ್.ಗೋಪಾಲ್ ಹಾಗೂ ಎಚ್.ಎಂ. ನಾಗರಾಜ್ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮುತ್ತಿನಕೊಪ್ಪದ ಮುಖ್ಯ ರಸ್ತೆಯಿಂದ ಭದ್ರಾ ಕಾಲೋನಿ, ಜನತಾ ಕಾಲೋನಿ, ಹೊಸ ಪೇಟೆ, ಶಾಂತಿ ಕಾಲೋನಿಗೆ ಹೋಗಲು 150 ಮೀಟರ್ ಉದ್ದದ ರಸ್ತೆ ಇದ್ದು ಈ ರಸ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಮಧ್ಯೆ ಹಾದು ಹೋಗಿದೆ. ಈ ರಸ್ತೆ ಪುರಾತನ ರಸ್ತೆಯಾಗಿದ್ದು ಈ ರಸ್ತೆ ಮೂಲಕವೇ ಭದ್ರಾ ಕಾಲೋನಿ, ಜನತಾ ಕಾಲೋನಿ,ಹೊಸ ಪೇಟೆ, ಶಾಂತಿ ಕಾಲೋನಿಗೆ ಸೇರಿದ 250- 300 ಮನೆಯ ಜನರು ಮುತ್ತಿನಕೊಪ್ಪ ಪಟ್ಟಣಕ್ಕೆ ಬರುತ್ತಾರೆ. ಭದ್ರಾ ಕಾಲೋನಿಯಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಅಲ್ಲಿಗೆ ಜನರು ಬರಬೇಕಾದರೂ ಅದೇ ರಸ್ತೆಯಲ್ಲೇ ಬರುತ್ತಿದ್ದಾರೆ. ಹಲವಾರು ವರ್ಷಗಳ ಹಿಂದೆಯೇ ಈ ರಸ್ತೆಗೆ ಜಿಲ್ಲಾ ಪಂಚಾಯಿತಿಯಿಂದ ಟಾರು ರಸ್ತೆ ಮಾಡಲಾಗಿತ್ತು. ತಾಪಂನಿಂದ ಬಾಕ್ಸ್ ಚರಂಡಿಯಾಗಿತ್ತು ಎಂದರು.ಈಗ ಮುತ್ತಿನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಎರಡೂ ಶಾಲೆಗಳ ಮಧ್ಯೆ ರಸ್ತೆ ಮುಚ್ಚಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮುಖ್ಯ ರಸ್ತೆಯಿಂದ ಭದ್ರಾ ಕಾಲೋನಿಗೆ ಬರಲು ಒಟ್ಟು 3 ರಸ್ತೆಗಳು ಇದ್ದು ಇದರಲ್ಲಿ 2 ರಸ್ತೆಗಳ ರಿಪೇರಿ ಮುಗಿದಿದೆ. ಭದ್ರಾ ಕಾಲೋನಿಗೆ ಬರುವ ಇತರ 3 ಅಡ್ಡ ರಸ್ತೆಗಳ ಕಾಮಗಾರಿ ಸಹ ಮುಗಿದಿದೆ.ಆದರೆ, ಎರಡು ಶಾಲೆಗಳ ಮಧ್ಯೆಯ ರಸ್ತೆಯ ಕಾಮಗಾರಿ ಮಾತ್ರ ನಿಲ್ಲಿಸಲಾಗಿದೆ.ಇದರಿಂದ ಅದೇ ರಸ್ತೆ ಮುಚ್ಚಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.ಇದುವರೆಗೆ ಆ ರಸ್ತೆ ಉಪಯೋಗಿಸುತ್ತಿರುವ ಭದ್ರಾ ಕಾಲೋನಿ, ಜನತಾ ಕಾಲೋನಿ,ಹೊಸ ಪೇಟೆ, ಶಾಂತಿ ಕಾಲೋನಿ ಜನರ ಅಭಿಪ್ರಾಯ ಕೇಳಿಲ್ಲ. ಆ ರಸ್ತೆ ಮುಚ್ಚುವುದಕ್ಕೆ ನಮ್ಮ ವಿರೋಧವಿದೆ ಎಂದರು.