ಕನ್ನಡಪ್ರಭ ವಾರ್ತೆ ಸೇಡಂ
ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮವಾಗಿ ಸೇಡಂ ತಾಲೂಕಿನ ಮಳಖೇಡ ಕಾಗಿಣಾ ನದಿ ಪ್ರವಾಹ ಉಂಟಾಗಿದ್ದು, ಮಳಖೇಡದ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳಖೇಡ ಕಾಗಿಣಾ ನದಿ ತೀರದ ಸಮಖೇಡ ತಾಂಡಾದ ಪ್ರತಿ ಮನೆಗಳಿಗೆ ಭೇಟಿ ನೀಡಿದ ಸಚಿವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.ಮಳಖೇಡದ ಕೋಲಿವಾಡ, ದರ್ಗಾ ಕಾಲೋನಿ ಹಾಗೂ ಮಳಖೇಡ ಕಾಲೋನಿ ರಸ್ತೆ, ಹಳ್ಳ ಹಾಗೂ ಕಾಗಿಣಾ ನದಿ ತೀರದ ಪ್ರದೇಶಗಳಲ್ಲಿನ ಮನೆಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ವಹಿಸುವಂತೆ ತಾಲೂಕಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ವಿವಿಧ ಗ್ರಾಮಗಳಿಗೆ ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಾಲೂಕಾಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ತಾಕೀತು ಮಾಡಿ, ಸಾರ್ವಜನಿಕರಿಗೆ ಮಳೆಯಿಂದ ಆದ ಹಾನಿಯ ಬಗ್ಗೆ ನಿಗಾಯಿಟ್ಟು ವರದಿ ಬರೆದುಕೊಳ್ಳಿ ಎಂದು ಖಡಕ್ ಸೂಚನೆ ನೀಡಿದರು.
ಸೇಡಂ ತಾಲೂಕಿನ ಬೀರನಳ್ಳಿ, ಮೀನಹಾಬಳ, ಯಡಗಾ, ಕುಕ್ಕುಂದಾ, ಕಾಚೂರು ಗ್ರಾಮ ಸೇರಿದಂತೆ ಇನ್ನು ಅನೇಕ ಅತಿವೃಷ್ಟಿಯಿಂದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಮಾತುಗಳನ್ನು ಆಲಿಸಿದೆ. ಪ್ರವಾಹ ಹಾನಿ ಪರಿಶೀಲನೆ ನಡೆಸಿ, ಯಾವ ಯಾವ ಗ್ರಾಮಗಳಲ್ಲಿ ಇರುವುದಕ್ಕೂ ಮನೆಯಿರುವುದಿಲ್ಲ ಅಂಥಹ ಗ್ರಾಮಸ್ಥರಿಗೆ ಮನೆ ಕಲ್ಪಿಸಿ, ಪಂಚಾಯತ್ ಕಡೆಯಿಂದ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಅಭಯ ನೀಡಿದರು.ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸೂಕ್ತ ಆಹಾರ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸಹಾಯಕ ಆಯುಕ್ತರು, ತಹಸೀಲ್ದಾರರಿಗೆ ತಿಳಿಸಿದರು.