ವಿವೇಕರ 163ನೇ ಜಯಂತಿ । ಯುವಜನ ಉತ್ಸವ ಜಾಥಾದಲ್ಲಿ 1500 ವಿದ್ಯಾರ್ಥಿಗಳು ಭಾಗಿ
ಕನ್ನಡಪ್ರಭ ವಾರ್ತೆ ಸಾಗರಸ್ವಾಮಿ ವಿವೇಕಾನಂದರ ತತ್ವಾದರ್ಶ ಯುವಪೀಳಿಗೆಗೆ ಸ್ಪೂರ್ತಿ. ವಿವೇಕಾನಂದರ ಗುರಿ ಮುಟ್ಟುವವರೆಗೂ ನಿಲ್ಲಬೇಡಿ ಸಂದೇಶ ಸಾರ್ವಕಾಲಿಕ ಅನುಕರಣೀಯವಾದದ್ದು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಗಣಪತಿ ದೇವಸ್ಥಾನ ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ ೧೬೩ನೇ ಜಯಂತಿ ಅಂಗವಾಗಿ ರಾಮಕೃಷ್ಣ ವಿದ್ಯಾಲಯದ ವತಿಯಿಂದ ಏರ್ಪಡಿಸಿದ್ದ ಯುವಜನ ಜಯಂತ್ಯುತ್ಸವ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಅವರ ಹೆಸರೇ ಪ್ರೇರಣಾದಾಯಕವಾದದ್ದು ಎಂದರು.ಇವತ್ತಿನ ಮಕ್ಕಳೆ ಮುಂದಿನ ನಾಯಕರಾಗುವ ಸಾಮರ್ಥ್ಯವಿರುವುದರಿಂದ ವಿವೇಕಾನಂದರ ಆದರ್ಶವನ್ನು ಪಾಲಿಸಬೇಕು. ಭಾರತೀಯರು ದೇವರ ನಂತರ ಸಂತರನ್ನು ಗೌರವಿಸಿಕೊಂಡು ಬಂದವರು. ಸಂತರು ಹಾಕಿಕೊಟ್ಟ ಮಾರ್ಗದರ್ಶನ ನಾವು ಪಾಲಿಸಿಕೊಂಡು ಹೋಗೋಣ ಎಂದು ಸಲಹೆ ನೀಡಿದರು.
ರಾಣೆಬೆನ್ನೂರು ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶನಂದೀ ಮಹಾರಾಜ್ ಮಾತನಾಡಿ, ವಿವೇಕಾನಂದರ ನೆನಪು ಸದಾ ಹಸಿರಾಗಿದೆ. ಅವರ ಸಂದೇಶ ರೋಮಾಂಚನವಾಗುತ್ತದೆ. ಪ್ರತಿಯೊಂದು ಮಗುವೂ ಸ್ವಾಮಿ ವಿವೇಕಾನಂದರ ಕೃತಿಗಳ ಅಧ್ಯಯನ ಮಾಡಬೇಕು. ನನ್ನ ಭರವಸೆ ಯುವಜನಾಂಗದ ಮೇಲೆ ಎನ್ನುವ ಸಂದೇಶ ವಿವೇಕಾನಂದ ಅವರದ್ದಾಗಿತ್ತು. ವಿವೇಕಾನಂದರು ನೀಡಿದ ಸಂದೇಶ ಪರಿಪಾಲನೆ ಅತ್ಯಗತ್ಯ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸುಭಾಶ್ಚಂದ್ರ ಬೋಸ್, ಚಕ್ರವರ್ತಿ ರಾಜಗೋಪಾಲಾಚಾರ್ಯರು ಸ್ವಾಮಿ ವಿವೇಕಾನಂದರ ಕುರಿತು ಹೇಳಿರುವ ಮಾತುಗಳು ಸದಾಕಾಲ ಸ್ಮರಣೀಯವಾದದ್ದು ಎಂದರು.ಸುಮಾರು ೧೫೦೦ ವಿದ್ಯಾರ್ಥಿಗಳು ವಿವೇಕಾನಂದರ ವೇಷಭೂಷಣ ತೊಟ್ಟ ಯುವಜನೋತ್ಸವ ಜಾಥಾವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸಾಗರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಜ್ಞಾನಾನಂದ ಮಹಾರಾಜ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ರವಿಕುಮಾರ್, ಲಲಿತಮ್ಮ, ಎಲ್.ಚಂದ್ರಪ್ಪ, ಕಲಸೆ ಚಂದ್ರಪ್ಪ, ದೇವರಾಜ್, ಜಯರಾಮ್, ಸರಿತಾ ದೇವರಾಜ್, ಗಿರೀಶ್ ಕೋವಿ ಹಾಜರಿದ್ದರು.