ವಿವೇಕರ 163ನೇ ಜಯಂತಿ । ಯುವಜನ ಉತ್ಸವ ಜಾಥಾದಲ್ಲಿ 1500 ವಿದ್ಯಾರ್ಥಿಗಳು ಭಾಗಿ
ಸ್ವಾಮಿ ವಿವೇಕಾನಂದರ ತತ್ವಾದರ್ಶ ಯುವಪೀಳಿಗೆಗೆ ಸ್ಪೂರ್ತಿ. ವಿವೇಕಾನಂದರ ಗುರಿ ಮುಟ್ಟುವವರೆಗೂ ನಿಲ್ಲಬೇಡಿ ಸಂದೇಶ ಸಾರ್ವಕಾಲಿಕ ಅನುಕರಣೀಯವಾದದ್ದು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಗಣಪತಿ ದೇವಸ್ಥಾನ ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ ೧೬೩ನೇ ಜಯಂತಿ ಅಂಗವಾಗಿ ರಾಮಕೃಷ್ಣ ವಿದ್ಯಾಲಯದ ವತಿಯಿಂದ ಏರ್ಪಡಿಸಿದ್ದ ಯುವಜನ ಜಯಂತ್ಯುತ್ಸವ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಅವರ ಹೆಸರೇ ಪ್ರೇರಣಾದಾಯಕವಾದದ್ದು ಎಂದರು.ಇವತ್ತಿನ ಮಕ್ಕಳೆ ಮುಂದಿನ ನಾಯಕರಾಗುವ ಸಾಮರ್ಥ್ಯವಿರುವುದರಿಂದ ವಿವೇಕಾನಂದರ ಆದರ್ಶವನ್ನು ಪಾಲಿಸಬೇಕು. ಭಾರತೀಯರು ದೇವರ ನಂತರ ಸಂತರನ್ನು ಗೌರವಿಸಿಕೊಂಡು ಬಂದವರು. ಸಂತರು ಹಾಕಿಕೊಟ್ಟ ಮಾರ್ಗದರ್ಶನ ನಾವು ಪಾಲಿಸಿಕೊಂಡು ಹೋಗೋಣ ಎಂದು ಸಲಹೆ ನೀಡಿದರು.
ಸುಮಾರು ೧೫೦೦ ವಿದ್ಯಾರ್ಥಿಗಳು ವಿವೇಕಾನಂದರ ವೇಷಭೂಷಣ ತೊಟ್ಟ ಯುವಜನೋತ್ಸವ ಜಾಥಾವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸಾಗರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಜ್ಞಾನಾನಂದ ಮಹಾರಾಜ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ರವಿಕುಮಾರ್, ಲಲಿತಮ್ಮ, ಎಲ್.ಚಂದ್ರಪ್ಪ, ಕಲಸೆ ಚಂದ್ರಪ್ಪ, ದೇವರಾಜ್, ಜಯರಾಮ್, ಸರಿತಾ ದೇವರಾಜ್, ಗಿರೀಶ್ ಕೋವಿ ಹಾಜರಿದ್ದರು.