ಹಾನಗಲ್ಲ: ಉದ್ಯೋಗ ಸೃಷ್ಟಿಗೆ ಸಹಕಾರಿಯಾಗುವ ವೃತ್ತಿ ತರಬೇತಿಗಳು ಇಂದಿನ ಅಗತ್ಯವಾಗಿದ್ದು, ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸುವ ಮೂಲಕ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕಾಗಿದೆ ಎಂದು ಲೋಯಲಾ ವಿಕಾಸ ಕೇಂದ್ರದ ಸಹಾಯಕ ನಿರ್ದೇಶಕ ಜೇಸನ್ ಪಾಯ್ಸ ತಿಳಿಸಿದರು.
ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಅಧ್ಯಕ್ಷತೆವಹಿಸಿ ಮಾತನಾಡಿ, ಕಳೆದ ೩ ವರ್ಷಗಳಿಂದ ಪರಿವರ್ತನ ಕಲಿಕಾ ಕೇಂದ್ರ ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಉದ್ಯೋಗಾಧಾರಿತ ಹಾಗೂ ಶೈಕ್ಷಣಿಕ ಅಭಿವೃದ್ಧಿ ಹಾಗೂ ತರಬೇತಿಗೆ ಒತ್ತು ನೀಡಿ ಕೆಲಸ ಮಾಡುತ್ತಿದೆ. ಸಿಇಟಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ತರಗತಿ ಪೂರ್ವ ಶಿಕ್ಷಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
ಬ್ಯೂಟಿಷಿಯನ್ ತರಬೇತಿ ಶಿಕ್ಷಕಿ ಜೈಸಿಕಾ ಆಲದಕಟ್ಟಿ ಮಾತನಾಡಿ, ಈ ತರಬೇತಿಯಿಂದ ನಮ್ಮ ಬಿಡುವಿನ ಸಮಯವನ್ನು ಬಳಸಿಕೊಂಡು ಉತ್ತಮ ಆದಾಯ ಸಂಪಾದಿಸಲು ಸಾಧ್ಯ. ಈ ತರಬೇತಿ ಪಡೆದವರು ಪೂರ್ಣ ಪ್ರಮಾಣದ ಉದ್ಯೋಗವಾಗಿಯೂ ಇದನ್ನು ಲಾಭದ ಉದ್ಯೋಗವಾಗಿ ಬೆಳೆಸಿಕೊಳ್ಳಬಹುದು. ಬದಲಾದ ಕಾಲದಲ್ಲಿ ಬ್ಯೂಟಿಷಿಯನ್ ಕಲೆಗೆ ಹೆಚ್ಚು ಬೆಲೆ ಇದೆ. ಇದರ ಸದುಯೋಗ ಮಾಡಿಕೊಂಡು ಮಹಿಳೆಯರು, ಅದರಲ್ಲೂ ಯುವ ಪ್ರತಿಭಾವಂತರು ಈ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದು ಎಂದರು.ವೀಣಾ ಮುಚ್ಚಂಡಿ, ಲಾವಣ್ಯ ಕಲಾಲ, ಎಸ್.ಬಿ. ಜಯಮ್ಮ, ಗಿರೀಶ ಅಂಬಿಗೇರ ಇದ್ದರು.