ಗ್ಯಾರಂಟಿಯಿಂದ ಅನುಕೂಲವಾಗಿದ್ರೆ ಕಾಂಗ್ರೆಸ್‌ಗೆ ವೋಟು ಹಾಕಿ: ಶಾಸಕ ಮಂಜುನಾಥ್‌

KannadaprabhaNewsNetwork | Published : Apr 19, 2024 1:05 AM

ರಾಜ್ಯದಲ್ಲಿ ಯಾರು ಮಾಡದೇ ಇರುವ ಅಭಿವೃದ್ಧಿ ಕೆಲಸಗಳನ್ನು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮುಳಬಾಗಿಲು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ, ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಯಾರು ಮಾಡದೇ ಇರುವ ಅಭಿವೃದ್ಧಿ ಕೆಲಸಗಳನ್ನು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮುಳಬಾಗಿಲು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ, ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.ಮುಳಬಾಗಿಲು ತಾಲೂಕಿನ ಆವಣಿ, ತಾಯಲೂರು, ಬೈರಕೂರು ಮತ್ತು ಕೂಲದೇವಿ ಹೋಬಳಿ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಪರವಾಗಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕಾರಣಗಳಿಂದ ವಿ.ಆದಿನಾರಾಯಣ ಸೋತಿದ್ದಾರೆ. ನಾನು ಎಲ್ಲೇ ಹೋದರೂ ಮುಳಬಾಗಿಲು ಜನತೆ ನನ್ನ ಕೈ ಬಿಡೋದಿಲ್ಲ ಅನ್ನೋ ನಂಬಿಕೆ ಇತ್ತು, ಆದರೆ ಕಳೆದ ಚುನಾವಣೆಯಲ್ಲಿ ನಮಗೆ ಸೋಲಾಗಿದೆ ಅದರಿಂದ ಸ್ವಲ್ಪ ಬೇಸರವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ ನಿಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.ರೈತರ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತಹಾಕಿ:

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ನಿರಂತರವಾಗಿ ನಾವು ನಿಮಗೆ ಸಿಗುತ್ತೇವೆ, ಕಳೆದ ೨೦ ವರ್ಷದಿಂದ ನಿಮಗಾಗಿ ಸುಡು ಬಿಸಿಲು ಎನ್ನದೇ ತಿರುಗಾಡುತ್ತಾ ಇದ್ದೇವೆ ನಾವು ನಿಮ್ಮ ಬಳಿ ಇರುವ ಏನನ್ನೂ ಕೊಂಡೊಯ್ಯಲು ಆಗಮಿಸಿಲ್ಲ, ದೇಶದ ಅಭಿವೃದ್ಧಿಗೆ, ರೈತರ ಕೈ ಬಲಪಡಿಸಲು ಬಂದಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡಿದರು.ಗೌತಮ್‌ ಹೊರಗಿನವರೆಂದು ಅಪಪ್ರಚಾರ:

ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ವಿ.ಗೌತಮ್ ಹೊರಗಿನವರು ಎಂದು ಅಪಪ್ರಚಾರ ಮಾಡಲು ಹೊರಟಿದ್ದಾರೆ ಇಂತಹ ಸಂಪ್ರದಾಯ ಹುಟ್ಟುಹಾಕಿದ್ದೇ ಜೆಡಿಎಸ್, ಬಿಜೆಪಿ ಎಂಬುದನ್ನು ಮರೆಯಬಾರದು. ಕುಮಾರಸ್ವಾಮಿ ಹಾಸನದಲ್ಲಿ ಹುಟ್ಟಿ ರಾಮನಗರ, ಚಿಕ್ಕಬಳ್ಳಾಪುರ ಆಯಿತು ಈಗ ಮಂಡ್ಯ ಜಿಲ್ಲೆಗೆ ಹೋಗಿದ್ದಾರೆ, ಮೋದಿ ಗುಜರಾತ್‌ನಿಂದ ಉತ್ತರಪ್ರದೇಶದ ವಾರಣಾಸಿಗೆ ಹೋಗಿದ್ದಾರೆ, ಜೆಡಿಎಸ್ ಬಿಜೆಪಿಯವರು ಎಲ್ಲಿ ಬೇಕಾದರು ಸ್ಪರ್ದಿಸಬಹುದು, ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು ಎಂದು ಅಪಪ್ರಚಾರ ಮಾಡಲು ಹೊರಟಿದ್ದಾರೆ ಇದು ಪ್ರಜಾಪ್ರಭುತ್ವ ದೇಶ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಹಕ್ಕು ಸಂವಿಧಾನ ನೀಡಿದೆ ಎಂದರು.

ಆಶ್ವಾಸನೆ ಈಡೇರಿಸುವ ಕಾಂಗ್ರೆಸ್‌ಗೆ ಮತಹಾಕಿ:

ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವಿ.ಆದಿನಾರಾಯಣ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ನೀಡಿರುವ ಆಶ್ವಾಸನೆಗಳಲ್ಲಿ ಒಂದನ್ನು ಸಹ ಈಡೇರಿಸಲಿಲ್ಲ, ಕಳೆದ 10 ವರ್ಷಗಳಲ್ಲಿ ಮಾಡದೇ ಇರುವ ಅಭಿವೃದ್ಧಿ ಮುಂದಿನ ೫ ವರ್ಷದಲ್ಲಿ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು, ರಾಜ್ಯ ಸರ್ಕಾರದ ೫ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿದೆ ಅದೇ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಬಲೀಕರಣ, ರೈತರ ಆದಾಯ ದ್ವಿಗುಣ, ನರೇಗಾ ಯೋಜನೆಯನ್ನು ನಗರದ ವ್ಯಾಪ್ತಿಗೆ ಜಾರಿ ಗೊಳಿಸುವುದು, ೨೫ ಲಕ್ಷ ಆರೋಗ್ಯ ವಿಮೆ ಸೇರಿದಂತೆ ಹತ್ತು ಹಲವು ಯೋಜನೆಗಳ ಆಶ್ವಾಸನೆ ನೀಡಿದೆ. ಆಶ್ವಾಸನೆ ಈಡೇರಿಸಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು. ಬಿಜೆಪಿಯಿಂದ ಯಾವುದೇ ಪ್ರಯೋಜನೆ ಇಲ್ಲ:

ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ, ಬಿಜೆಪಿಯವರು ಚುನಾವಣಾ ಪ್ರಚಾರದಲ್ಲಿ ಸುಳ್ಳು ಭರವಸೆಗಳನ್ನು ಹೇಳಿ ಅಧಿಕಾರಕ್ಕೆ ಬಂದು 10 ವರ್ಷದಿಂದ ಒಂದೇ ಒಂದು ಭರವಸೆ ಈಡೇರಿಸಲಿಲ್ಲ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಮಹಿಳೆಯರಿಗೆ ಯಾವುದೇ ಪ್ರಯೋಜನವಿಲ್ಲ, ಯುವಕರು ಉದ್ಯೋಗ ಕೊಡಿ ಎಂದರೆ ಪೋಲೀಸರನ್ನು ಚೂ ಬಿಟ್ಟು ಲಾಠಿ ಚಾರ್ಜ್ ಮಾಡಿಸ್ತಾರೆ ದೇಶದ ೨೨ ಬಂಡವಾಳಶಾಹಿಗಳ ಪರವಾಗಿ ಬಿಜೆಪಿ ಸರ್ಕಾರ ಇದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಮಹಾಲಕ್ಷ್ಮಿ ಯೋಜನೆಯಲ್ಲಿ ವರ್ಷಕ್ಕೆ ೧ ಲಕ್ಷ ರೂ. ಪ್ರತಿ ಮಹಿಳೆಯರ ಖಾತೆಗೆ ಜಮೆ ಮಾಡಲಾಗುತ್ತದೆ, ೩೦ ಲಕ್ಷ ನಿರುದ್ಯೋಗ ಯುವಕರಿಗೆ ಉದ್ಯೋಗವನ್ನು ನೀಡಲಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ನಿಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.ಜಿಪಂ ಮಾಜಿ ಸದಸ್ಯ ಅವಣಿ ಕೃಷ್ಣಪ್ಪ, ಉತ್ತನೂರು ಅರವಿಂದ್, ಕೋಚಿಮುಲ್ ಮಾಜಿ ನಿರ್ದೇಶಕ ರಾಜೇಂದ್ರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನೀಲಕಂಠೇಗೌಡ, ಅಮಾನ್ ಉಲ್ಲಾ ಖಾನ್, ಮುನಿಆಂಜಿನಪ್ಪ, ಮುಖಂಡರಾದ ಅಲಂಗೂರು ಶಿವಣ್ಣ, ಗೋಪಾಲ್, ಅವಣಿ ನವೀನ್, ಜಮ್ಮನಹಳ್ಳಿ ಕೃಷ್ಣ, ಲೀಲಾವತಿ, ಅಮರ್ ಇದ್ದರು.