ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಮೀನಗಡ ಪಟ್ಟಣದಲ್ಲಿ ಶ್ರೀ ಶಾಖಾಂಬರಿ ತರುಣ ಸಂಘ ಹಾಗೂ ಇ-ಸ್ವರ ಮೆಲೋಡಿಸ್ ತಂಡದ ಸಹಯೋಗದಲ್ಲಿ ಹೋಳಿ ಉತ್ಸವ-2024 ಅಂಗವಾಗಿ ಭಾನುವಾರ ಹಲಗೆ ಮೇಳ, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಬ್ಬದ ಆಚರಣೆ ಜೊತೆಗೆ ಮತದಾನ ಜಾಗೃತಿ ಕಾರ್ಯ ಹಮ್ಮಿಕೊಳ್ಳುವ ಮೂಲಕ ಚುನಾವಣಾ ಆಯೋಗದ ಸ್ವೀಪ್ ಚಟುವಟಿಕೆಗಳಿಗೆ ಕೈಜೋಡಿಸುವ ಕಾರ್ಯ ಮಾಡಿದೆ.
ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಯುವಕರು ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ, ಮತದಾನ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಮತದಾನ ಮಾಡಿದವನೇ ಮಹಾಶೂರ, ನಿಮ್ಮ ಮತ ಅಮೂಲ್ಯವಾದುದು. ಬನ್ನಿ ಮತದಾನ ಕೇಂದ್ರಕ್ಕೆ, ಹಕ್ಕು ಚಲಾಯಿಸಲು ಮತದಾನವೇ ಸೂಕ್ತ ಆಯ್ಕೆ, ವರುಷ ನೂರು ಸಂಭ್ರಮ ಜೋರು ಹೀಗೆ ಅನೇಕ ಘೋಷವಾಕ್ಯಗಳನ್ನು ಒಳಗೊಂಡ ಫಲಕಗಳನ್ನು ವೇದಿಕೆ ಮೇಲೆ ಪ್ರದರ್ಶಿಸುವ ಮೂಲಕ ಜನ ಸಾಮಾನ್ಯರಲ್ಲಿ ಮತದಾನದ ಜಾಗೃತಿ ಮೂಡಿಸಿದರು.ಹೋಳಿ ಉತ್ಸವ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಹಾಡುಗಳನ್ನು ಸಹ ಹಾಡಲಾಯಿತು. ಇ-ಸ್ವರ ಮೆಲೋಡಿಸ್ ತಂಡದ ಗಾಯಕ ಸಿದ್ದು ಹೊನರೊಟ್ಟಿ ಮತದಾನ ಬಂದೈತಲ್ಲ, ಮತವಹಾಕಿ ತಪ್ಪದೇ ಎಲ್ಲ, ಆಗಬೇಡ ತಮ್ಮ ದುಡ್ಡಿಗೆ ಮರುಳ .... ಒಳ್ಳೇಯವರಿಗೆ ಮತವ ನೀಡಿ ಮೊದಲ ಎಂಬ ಹಾಡನ್ನು ಹಾಡಿದರು. ಗಾಯಕ ಈರಣ್ಣ ನಿಡಗುಂದಿ ಸ್ವತಃ ತಾವೇ ಸಾಹಿತ್ಯ ರಚಿಸಿದ ಭಾರತ ದೇಶದ ಭವಿಷ್ಯ ಬರೆಯೋ ಓ ಮತದಾರಣ್ಣ, ಮೇ. 7 ರಂದು ನಡೆವ ಚುನಾವಣೆಯಲ್ಲಿ ಮತವ ಹಾಕನ್ನ ಎಂಬ ಹಾಡಿನ ಮೂಲಕ ನೆರೆದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಕೋಟ್...
ಈ ವರ್ಷ ಹೋಳಿ ಆಚರಣೆ ವಿಶೇಷತೆಯಿಂದ ಕೂಡಿದೆ. ಈ ಬಾರಿ ಹೋಳಿ ಹಬ್ಬದ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಬಂದಿದೆ. ಆದ್ದರಿಂದ ಹಬ್ಬದ ಆಚರಣೆಯಲ್ಲೂ ಮತದಾನ ಜಾಗೃತಿ ಮೂಡಿಸುವ ಕೈಗೊಳ್ಳಲಾಗಿದೆ. ಜನರಲ್ಲಿ ಮತದಾನ ಮಹತ್ವದ ತಿಳಿಸುವುದು ನಮ್ಮ ಉದ್ದೇಶವಾಗಿದೆ.ಚಂದ್ರು ಹುಬ್ಬಳ್ಳಿ. ಸ್ಥಳೀಯ ಮುಖಂಡ