ಕನ್ನಡಪ್ರಭ ವಾರ್ತೆ ವಿಜಯಪುರ
ವೃಕ್ಷ ಅಭಿಯಾನ ಮನೆ ಮನಗಳನ್ನು ತಲುಪಿದ್ದು, ಸಾರ್ವಜನಿಕರ ಸಹಭಾಗಿತ್ವದಿಂದ ಯಶಸ್ವಿಯಾಗಿ ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ಯಶಸ್ಸಿಗೆ ಕಾರಣರಾದವರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಆಕಸ್ಮಿಕವಾಗಿ ಮತ್ತು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ವೃಕ್ಷ ಅಭಿಯಾನಕ್ಕೆ ನಾನಾ ರೂಪುರೇಷೆ ನೀಡಿ ಜಿಲ್ಲಾದ್ಯಂತ ವಿಸ್ತರಿಸಲಾಗಿದೆ. ಪ್ರಾರಂಭದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರೂ ನಂತರ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಇಡೀ ಬಸವನಾಡಿನಲ್ಲಿ ಹೆಚ್ಚಿನ ವೇಗ ಸಿಕ್ಕಿತು. ಈ ಮುಂಚೆ ಜಿಲ್ಲೆಯಲ್ಲಿ ಕೇವಲ ಶೇ.0.17 ರಷ್ಟಿದ್ದ ಅರಣ್ಯ ಪ್ರದೇಶ ಸರ್ವಜನರ ಸಹಭಾಗಿತ್ವದಿಂದಾಗಿ ಇಂದು ಸುಮಾರು ಶೇ.2 ರಿಂದ ಶೇ.2.50 ರಷ್ಟಾಗಿದೆ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸರಾಸರಿ ತಲುಪಲು ಇನ್ನೂ ಹಲವಾರು ವರ್ಷಗಳು ಬೇಕು. ಹೀಗಾಗಿ ಈಗ ಬಾಕಿ ಉಳಿದಿರುವ ಖಾಲಿ ಸ್ಥಳಗಳನ್ನು ಗುರುತಿಸಿ ಸಸಿಗಳನ್ನು ನೆಡುವುದು ಅಗತ್ಯವಾಗಿದೆ. ಈ ಕಾರ್ಯ ನಿರಂತರವಾಗಿರಬೇಕು. ಮುಂದಿನ 15 ದಿನಗಳಲ್ಲಿ ಹೊರ್ತಿ ಭಾಗದ 16 ಕೆರೆಗಳನ್ನು ಭರ್ತಿ ಮಾಡುವ ಕಾರ್ಯ ಪ್ರಾರಂಭವಾಗಲಿದ್ದು, ಇದರಿಂದ ಆ ಭಾಗದಲ್ಲಿಯೂ ಅರಣ್ಯ ಬೆಳೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಈ ಬಾರಿಯ ಹೆರಿಟೇಜ್ ರನ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಮತ್ತು ವೃಕ್ಷಥಾನ್ ಹೆರಿಟೆಜ್ ರನ್ ಸಮಿತಿ ಸತತ ಸಭೆಗಳು ಮತ್ತು ಶಿಸ್ತುಬದ್ಧ ಯೋಜನೆ, ಮಾಧ್ಯಮಗಳ ಪ್ರಚಾರ, ಪ್ರಾಯೋಜಕರು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಯಶಸ್ವಿಯಾಗಿದೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಪಂ ಸಿಇಒ ರಿಷಿ ಆನಂದ ಮಾತನಾಡಿದರು.
ಡಾ.ಮಹಾಂತೇಶ ಬಿರಾದಾರ ಮಾತನಾಡಿ, ವೃಕ್ಷಥಾನ್ ನಡೆದು ಬಂದ ಹಾದಿಯನ್ನು ವಿವರಿಸಿದರು. ಒಂದು ಸಮಯದಲ್ಲಿ ಸಸಿಗಳ ಮಾರಾಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಲ್ಲಿ ಡಂಗುರ ಹೊಡೆಸುತ್ತಿದ್ದರು. ಆದರೆ, ಈಗ ಜನರಲ್ಲಿ ಜಾಗೃತಿ ಉಂಟಾಗಿರುವುದರಿಂದ ಸಸಿ ಖರೀದಿಗೆ ನರ್ಸರಿಗಳಿಗೆ ಆಗಮಿಸುವ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹರಸಾಹಸ ಪಡುವಂತಾಗಿದೆ. ಈ ಬಾರಿಯೂ ಹೆರಿಟೇಜ್ ರನ್ಗೆ ಪ್ರಾಯೋಜಕರು, ಸಾರ್ವಜನಿಕರಿಂದ ಸಂಪೂರ್ಣ ಸಹಕಾರ ಸಿಕ್ಕಿದೆ. ಇಲ್ಲಿಯ ಓಟಗಾರರು ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮ್ಯಾರಾಥಾನ್ಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವೃಕ್ಷಥಾನ್ ಹೆರಿಟೇಜ್ ರನ್-2024 ಯಶಸ್ಸಿಗೆ ಕಾರಣರಾದ ಮುಖ್ಯ ಪ್ರಾಯೋಜಕರು, ಪ್ರಾಯೋಜಕರು, ಹೈಡ್ರೇಷನ್ ಪಾಯಿಂಟ್ಸ್ ಪ್ರಾಯೋಜಕರು, ನಾನಾ ಇಲಾಖೆಗಳ ಅಧಿಕಾರಿಗಳು, ಹೆರಿಟೇಜ್ ರನ್ ಸಮಿತಿಯ ಪದಾಧಿಕಾರಿಗಳಿಗೆ ಸಚಿವರು ನೆನಪಿನ ಕಾಣಿಕೆ ಮತ್ತು ಸಸಿ ನೀಡುವ ಮೂಲಕ ಅಭಿನಂದಿಸಿದರು. ಸಚಿವ ಎಂ.ಬಿ.ಪಾಟೀಲರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ವೃಕ್ಷಥಾನ್ ಸಮಿತಿ ಪದಾಧಿಕಾರಿಗಳು ಸಚಿವರನ್ನು ಅಭಿನಂದಿಸಿದರು. ವೃಕ್ಷಥಾನ ಹೆರಿಟೇಜ್ ರನ್ ಸಮಿತಿ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕೋಟ್ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸಣ್ಣದಾಗಿ ಪ್ರಾರಂಭವಾದ ವೃಕ್ಷ ಅಭಿಯಾನಕ್ಕೆ ನಾನಾ ರೂಪುರೇಷೆ ನೀಡಿ ಜಿಲ್ಲಾದ್ಯಂತ ವಿಸ್ತರಿಸಲಾಗಿದೆ. ಅಭಿಯಾನಕ್ಕೆ ಪ್ರಾರಂಭದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರೂ ನಂತರ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಇಡೀ ಹೆಚ್ಚಿನ ವೇಗ ಸಿಕ್ಕಿತು. ಮುಂಚೆ ಜಿಲ್ಲೆಯಲ್ಲಿ ಕೇವಲ ಶೇ.0.17 ರಷ್ಟಿದ್ದ ಅರಣ್ಯ ಪ್ರದೇಶ ಸರ್ವಜನರ ಸಹಭಾಗಿತ್ವದಿಂದಾಗಿ ಇಂದು ಸುಮಾರು ಶೇ.2 ರಿಂದ ಶೇ.2.50 ರಷ್ಟಾಗಿದೆ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸರಾಸರಿ ತಲುಪಲು ಇನ್ನೂ ಹಲವಾರು ವರ್ಷಗಳು ಬೇಕು.
ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ