ಧಾರವಾಡ:
ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗದೆ ಬೆಳೆಗಳು ನಿರೀಕ್ಷಿತ ಬೆಳವಣಿಗೆ ಕಂಡಿಲ್ಲ. ಆದ್ದರಿಂದ ಈ ಬಗ್ಗೆ ಸರ್ವೇ ನಂಬರ್ ಪ್ರಕಾರ ಸಮೀಕ್ಷೆ ನಡೆಸಿದ ನಂತರ ಬೆಳೆಹಾನಿ ಪರಿಹಾರ ಮೊತ್ತವನ್ನು ನಿರ್ಧರಿಸಲಾಗುವುದು ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಬೆಳೆ ಎಷ್ಟು ಹಾನಿಯಾಗಿದೆ? ಎಷ್ಟು ರೈತರಿಗೆ ಪರಿಹಾರ ಒದಗಿಸಬೇಕೆಂಬ ಮಾನದಂಡ ಅವಲೋಕಿಸಿ ಪರಿಹಾರ ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ 2.80 ಲಕ್ಷ ಹೆಕ್ಟೇರ್ (ಶೇ.96) ಪ್ರದೇಶದಲ್ಲಿ ಬಿತ್ತನೆ ಆಗಿದೆ. ಹೆಸರು, ಉದ್ದು, ಮೆಕ್ಕೆಜೋಳ, ಹತ್ತಿ, ಕಬ್ಬು ಬೆಳೆಯಲಾಗಿದೆ ಎಂದರು.
ರೈತರು ಸಾಲಮನ್ನಾಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ₹ 72 ಸಾವಿರ ಕೋಟಿ ಸಾಲಮನ್ನಾ ಮಾಡಿತ್ತು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ₹ 8,500 ಕೋಟಿ ಸಾಲಮನ್ನಾ ಮಾಡಿದೆ. ಹೀಗಾಗಿ ನಾವು ಕೇಂದ್ರ ಸರ್ಕಾರವನ್ನು ಸಾಲಮನ್ನಾಕ್ಕೆ ಕೋರುತ್ತೇವೆ. ಕೆಲ ದಿನಗಳ ಹಿಂದಷ್ಟೇ ₹ 16.50 ಲಕ್ಷ ಕೋಟಿ ಉದ್ಯಮಿಗಳ ಸಾಲಮನ್ನಾ ಮಾಡಿದಂತೆಯೇ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.ಹು-ಧಾ ಮಧ್ಯೆ ಬಿಆರ್ಟಿಎಸ್ ಬದಲು ಇಆರ್ಟಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಡಿಪಿಆರ್ ಸಿದ್ಧಗೊಂಡಿದೆ. ಅಧಿಕಾರಿಗಳು ಈ ಬಗ್ಗೆ ಪ್ರಾಥಮಿಕ ವರದಿ ನೀಡಿದ್ದಾರೆ. ಈ ಬಗ್ಗೆ ಅಂತಿಮ ವರದಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಪ್ರತ್ಯೇಕ ಪಾಲಿಕೆ-ಜನರ ಹಿತವೇ ಸರ್ಕಾರದ ಹಿತ..
ಧಾರವಾಡ ಪ್ರತ್ಯೇಕ ಪಾಲಿಕೆ ಕುರಿತಂತೆ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದೆ. ಆದರೆ, ಮುಖ್ಯಮಂತ್ರಿಗಳ ಬದಲಾವಣೆ ಹಿನ್ನೆಲೆಯಲ್ಲಿ ಇದರ ಜಾರಿ ಸ್ವಲ್ಪ ವಿಳಂಬ ಆಗಿದೆ. ಈ ಬಗ್ಗೆ ಹೋರಾಟಗಾರರೊಂದಿಗೆ ನಾನು ಹೋಗಿ ಸಿಎಂ ಅವರನ್ನು ಭೇಟಿಯಾಗುತ್ತೇನೆ. ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಕೆಲವರು ಪ್ರತ್ಯೇಕ ಪಾಲಿಕೆ ವಿರೋಧಿಸುತ್ತಿದ್ದಾರೆ. ಆದರೆ ಇದು ಅವರ ಅಭಿಪ್ರಾಯ. ಆದರೆ, ಇದರಿಂದ ಎಲ್ಲರಿಗೂ ಅನುಕೂಲ ಆಗಲಿದೆ. ಹೀಗಾಗಿ ಜನರ ಹಿತವನ್ನು ಸರ್ಕಾರ ಕಾಪಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಲಾಡ್ ಉತ್ತರಿಸಿದರು.
