ಚಾಮರಾಜನಗರ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಪರಿಸರ ಕಾರ್ಯಕರ್ತರ ಸಂಘಟನೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಕೇರಳ ರಾಜ್ಯದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲೆಯ ಪರಿಸರ ಕಾರ್ಯಕರ್ತರ ಸಂಘಟನೆಯ ಮುಖಂಡರು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನಿವಿ ಸಲ್ಲಿಸಿದರು.ಪರಿಸರವಾದಿ ಪುಣಜನೂರು ದೊರೆಸ್ವಾಮಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಅತಿಹೆಚ್ಚು ಬೆಟ್ಟಗುಡ್ಡಗಳು ಮತ್ತು ಕಾಡು ಪ್ರದೇಶದಿಂದ ಕೂಡಿದೆ. ಯಾವ ಸಂದರ್ಭದಲ್ಲಾದರೂ ಅನಾಹುತ ನಡೆಯಬಹುದು. ಅದನ್ನು ತಡೆಯಲು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮುಂದೆ ಬರಬೇಕಿದೆ. ಅರಣ್ಯ ಪ್ರದೇಶಗಳು ಒತ್ತುವರಿ, ಅಕ್ರಮ ಗಣಿಗಾರಿಕೆ, ಅಕ್ರಮ ರೆಸಾರ್ಟ್ಗಳು ಹೋಮ್ ಸ್ಟೇ, ಹೋಟೆಲ್ಗಳು, ರಸ್ತೆ ಅಗಲೀಕರಣ, ಮರಗಳ ಕಡಿತ ಹಾಗೂ ಇನ್ನು ಅನೇಕ ಅಕ್ರಮ ಯೋಜನೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ, ಇದರಿಂದ ಪರಿಸರಕ್ಕೆ ಹಾನಿಯಾಗುವುದು ಖಂಡಿತ ಎಂದು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟ ಪ್ರಾಧಿಕಾರ ರಚಿಸಬೇಕು, ಸೂಕ್ಷ ಪರಿಸರ ವಲಯಗಳನ್ನು ಘೋಷಿಸಬೇಕು, ಸೂಕ್ಷ ಪರಿಸರ ವಲಯಗಳಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ನಿಷೇಧಿಸಬೇಕು, ಸೂಕ್ಷ ಪರಿಸರ ವಲಯಗಳಲ್ಲಿ ಕಟ್ಟಡ ನಿರ್ಮಾಣ, ಮೂಲಸೌಕರ್ಯ ನಿರ್ಮಾಣವನ್ನು ನಿರ್ಬಂಧಿಸಬೇಕು. ಪರಿಸರ ಪರಿಣಾಮ ಅಧ್ಯಯನವನ್ನು (ಇ,ಐ.ಎ) ಬಲಪಡಿಸಬೇಕು, ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.ಪವಿತ್ರ ವನಗಳನ್ನು ಮತ್ತು ಪಾರಂಪರಿಕ ಜ್ಞಾನವನ್ನು ರಕ್ಷಿಸಬೇಕು, ಪರಿಸರ ಸ್ನೇಹಿ ಪ್ರವಾಸೋದ್ಯಮವಕ್ಕೆ ಮಾರ್ಗಸೂಚಿ ತಯಾರಿಸಬೇಕು, ಪ್ರಕೃತಿ ಸಂರಕ್ಷಣೆಗಾಗಿ ನಿಧಿ ಕಾಯ್ದಿರಿಸಬೇಕು, ಉಸ್ತುವಾರು ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರಿಸರ ಸಂಘಟನೆಯ ಸದಸ್ಯರಾದ ರಂಗಕರ್ಮಿ ಕೆ.ವೆಂಕಟರಾಜು, ಗಿರಿಜನ ಸಂಘದ ಅಧ್ಯಕ್ಷ ಮುತ್ತಯ್ಯ, ಡಾ.ವೀರಭದ್ರನಾಯ್ಕ್, ರಂಗಸ್ವಾಮಿ ನಾಯ್ಕ್, ಸಿ.ಎಂ.ವೆಂಕಟೇಶ್, ಅಬ್ರಾಹಮ್ ಡಿ.ಸಿಲ್ವ, ರೈತ ಸಂಘದ ಕಾಡಳ್ಳಿ ಚಿನ್ನಸ್ವಾಮಿ, ಗ್ರಾಪಂ ಸದಸ್ಯ ಚಂದ್ರು ಮತ್ತಿತರರಿದ್ದರು.21ಸಿಎಚ್ಎನ್18ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲೆಯ ಪರಿಸರ ಕಾರ್ಯಕರ್ತರ ಸಂಘಟನೆಯ ಮುಖಂಡರು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನಿವಿ ಸಲ್ಲಿಸಿದರು.