ಕಾರಟಗಿ: ಕಣ್ಮುಚ್ಚಿ ಕುಳಿತುಕೊಳುವುದು ಧ್ಯಾನವಲ್ಲ. ಧ್ಯಾನದಿಂದ ಮಾನಸಿಕ ಮತ್ತು ಆರೋಗ್ಯ ಸುಧಾರಣೆಯಾಗುತ್ತದೆ ಎನ್ನುವದೊಂದೆ ಅಲ್ಲ, ಧ್ಯಾನದಿಂದ ಭರತ ಭೂಮಿಯಲ್ಲಿ ಇಡೀ ಜಗತ್ತನ್ನು ಗೆದ್ದಿದ್ದಾರೆ. ಹೀಗಾಗಿ ನಾವೆಲ್ಲ ನಮ್ಮ ಒತ್ತಡದ ಜೀವನದಲ್ಲಿ ನಿತ್ಯ ಧ್ಯಾನಾಸ್ತಕರಾಗಬೇಕು ಅಂದಾಗ ನಾವು ನಮ್ಮನ್ನು ಗೆಲ್ಲಲು ಸಾಧ್ಯ ಎಂದು ಬಳ್ಳಾರಿಯ ಸಿನೀಯರ್ ಪಿರಾಮಿಡ್ ಮಾಸ್ಟರ್ ಹನುಮಂತರಾವ್ ಹೇಳಿದರು.
ನಾವು ಮುಂದಿನ ಪೀಳಿಗೆಗೆ ಧ್ಯಾನ ಮಾಡುವುದನ್ನು ಕಲಿಸಬೇಕಾಗಿದೆ. ಮಕ್ಕಳು, ಕಲಿಕೆ, ಯುವಕರು ನೌಕರಿ ಒತ್ತಡ, ಜೀವನ, ಜೀವನ ನಿರ್ವಹಣೆ, ಮನೆ, ಕಚೇರಿ ಭಾರಗಳಿಂದ ಜೀವನ ಕುಗ್ಗುತ್ತದೆ. ಆದರೆ ಇವುಗಳ ನಡುವೆಯೂ ನಾವು ನಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಯ ಶಾಂತಿ ಸುವ್ಯವಸ್ಥೆ ಮತ್ತು ನೆಮ್ಮದಿಗೆ ಧ್ಯಾನ ಕಲಿಸಿದರೆ ಎಂತಹ ಒತ್ತಡ ಇದ್ದರೂ ನಿಭಾಯಿಸುವ ಶಕ್ತಿ ಕಲಿಸಿದಂತಾಗುತ್ತದೆ ಎಂದರು.
ಧ್ಯಾನದಿಂದ ಬುದ್ಧ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಇಡೀ ಜಗತ್ತನ್ನು ಗೆದ್ದಿದ್ದಾರೆ. ನಮಗೆ ಧ್ಯಾನ ಕಲಿಯುವವರಿಗೆ ಪಿರಮಿಡ್ಗಳು ಅತ್ಯಂತ ಪರಿಣಾಮಕಾರಿ ಎತ್ತರದ ಸ್ಥಳಗಳಾಗಿವೆ. ಅವು ದೈಹಿಕ ಒತ್ತಡ ಮತ್ತು ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಪಿರಮಿಡ್ ನಿರ್ದಿಷ್ಟ ಕೋನಗಳು ನಮ್ಮ ದೈಹಿಕ ಮಾನಸಿಕ, ಭಾವನಾತ್ಮಕ ಮತ್ತು ಬೌದ್ಧಿಕ ದೇಹಗಳ ಜೋಡಣೆ ಮತ್ತು ಸಮತೋಲದಲ್ಲಿ ಸಹಾಯ ಮಾಡುತ್ತವೆ. ಪಿರಮಿಡ್ಗಳು ಕಾಸ್ಮಿಕ್ ಶಕ್ತಿಯ ಶಕ್ತಿ ಕೇಂದ್ರಗಳಾಗಿವೆ. ಯುವ ಸಮೂಹಕ್ಕೆ ಸ್ಮರಣಶಕ್ತಿ ಮತ್ತು ಅರಿವಿನ ಕಾರ್ಯ ಹೆಚ್ಚಿಸಲು ಸಹಾಯ ಮಾಡುತ್ತವೆ. ಹೀಗಾಗಿ ನಾವು ಧ್ಯಾನ ಕಲಿತರೆ ಜಗತ್ತು ಗೆಲುವ ಮೊದಲು ನಮ್ಮನ್ನು ನಾವು ಗೆಲ್ಲುತ್ತೇವೆ. ನಮ್ಮ ಸುತ್ತಲಿನ ಜಗತ್ತು ಗೆಲ್ಲಲು ಧ್ಯಾನ ಅವಶ್ಯಕ. ದೈಹಿಕ, ಮಾನಸಿಕ, ಸಾಮಾಜಿಕವಾಗಿಯೂ ಧ್ಯಾನ ಮನುಷ್ಯನಲ್ಲಿ ಬದಲಾವಣೆ ತರುತ್ತದೆ ಎಂದು ಹನುಮಂತ್ರಾವ್ ಹೇಳಿದರು.ಧ್ಯಾನ ಕೇಂದ್ರದ ಮುಖ್ಯಸ್ಥ, ಗ್ರಾಪಂ ಸದಸ್ಯ ಶ್ರೀಧರ್ ಗೋನಾಳ ಮಾತನಾಡಿ, ನಿತ್ಯ ಕೃಷಿ, ಮಾರುಕಟ್ಟೆ, ಮಕ್ಕಳು ಹೀಗೆ ಜಂಜಾಟದ ಜೀವನದ ನಡುವೆ ಧ್ಯಾನ ಅಳವಡಿಸಿಕೊಂಡರೆ ಎಲ್ಲ ಒತ್ತಡ, ತಿಕ್ಕಾಟ, ಒದ್ದಾಟಗಳನ್ನು ದೂರ ಮಾಡಲು ಸಹಾಯವಾಗುತ್ತದೆ ಎಂದು ತಮ್ಮ ಅನುಭವ ವಿವರಿಸಿದರು.
ಧ್ಯಾನ ಸಾಧಕಿ ಹಾಗೂ ಪುರಸಭೆ ಸದಸ್ಯ ಜಿ.ಅರುಣಾದೇವಿ ಇದ್ದರು.