- ದೀಕ್ಷಿತ್ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವ । ಸಂಸ್ಥಾನ ಪೂಜೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ರಾಘವೇಂದ್ರ ಸ್ವಾಮಿಗಳು ಭಕ್ತರನ್ನು ಸಂಸಾರ ಸಾಗರದಿಂದ ಉದ್ಧಾರ ಮಾಡುತ್ತಾರೆ. ಸಂಸಾರವೆಂಬ ಸಮುದ್ರದಲ್ಲಿ ಭಯ, ದುಃಖ, ಚಿಂತೆ ಎಂಬ ಅಲೆಗಳು ಅಪ್ಪಳಿಸುತ್ತಿರುತ್ತವೆ. ನಾವು ಗುರುಗಳ ಮೊರೆ ಹೋದಾಗ ಅದೆಲ್ಲವುಗಳಿಂದ ಮುಕ್ತರಾಗಬಹುದು ಎಂದು ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ನುಡಿದರು.

ನಗರದ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಅಂಗವಾಗಿ ಶ್ರೀ ಗುರು ಸಾರ್ವಭೌಮರ 405ನೇ ಪಟ್ಟಾಭಿಷೇಕ ದಿನವಾದ ಗುರುವಾರ ಸಂಸ್ಥಾನ ಪೂಜೆ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು.


ರಾಯರು ಮಹಿಮಾಶಾಲಿಗಳಾಗಿದ್ದಾರೆ. ಅವರ ಪಾಂಡಿತ್ಯ ಅಗಾಧವಾದುದು. ಶ್ರೀ ರಾಘವೇಂದ್ರ ಸ್ವಾಮಿಗಳದ್ದು ನಿತ್ಯ ವೈಭವ. ಗುರುಸಾರ್ವಭೌಮರ ಮಠದ ಸುವರ್ಣ ಮಹೋತ್ಸವ ಯಶಸ್ವಿಯಾಗಲಿ. ಇದು ನಿರಂತರ ಉತ್ಸವವಾಗಲಿ ಎಂದು ಅವರು ಹಾರೈಸಿದರು.

ವೇದಗಳು ಅನಂತ:

ವೇದಗಳು ಅನಂತವಾಗಿದ್ದು, ಭಗವಂತನ ಗುಣಗಳನ್ನು ಹೇಳುತ್ತವೆ. ಭಗವಂತ ಅನಂತ ಗುಣ ಪರಿಪೂರ್ಣನಾಗಿದ್ದಾನೆ. ಸಕಲ ವೇದಗಳಿಂದ ಪ್ರತಿಪಾದ್ಯನಾಗಿದ್ದಾನೆ. ವೇದಗಳ ಒಂದೊಂದು ಅಕ್ಷರ, ಶಬ್ದ, ವಾಕ್ಯಗಳೂ ದೇವರ ಬಗ್ಗೆ ಹೇಳುತ್ತವೆ. ಪ್ರಳಯ ಕಾಲದಲ್ಲಿ ಎಲ್ಲ ಜೀವರಾಶಿಗಳೂ ನಾಶವಾಗುತ್ತವೆ. ಆದರೆ, ವೇದಗಳು ನಾಶವಾಗುವುದಿಲ್ಲ. ಪಶು, ಪಕ್ಷಿಗಳ ಧ್ವನಿಯಲ್ಲಿ, ಮೇಘಗಳು, ನೀರಿನಲ್ಲೂ ಭಗವಂತನ ಗುಣಗಳಿವೆ. ಪ್ರಾತಃಸಂಕಲ್ಪ ಗದ್ಯದಲ್ಲಿ ರಾಘವೇಂದ್ರ ಸ್ವಾಮಿಗಳು ಈ ಎಲ್ಲ ಅಂಶಗಳನ್ನು ದಾಖಲಿಸಿದ್ದಾರೆ ಎಂದರು.

ಇದಕ್ಕೂ ಮೊದಲು ‘ಶ್ರೀ ರಾಘವೇಂದ್ರ ಸ್ತೋತ್ರ’ದ ಬಗ್ಗೆ ಪಂಡಿತ ವೆಂಕಟಗಿರೀಶಾಚಾರ್ಯ ಎ. ಪ್ರವಚನ ನೀಡಿದರು. ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನ ಕುಮಾರ, ಗುರುರಾಜಾಚಾರ್ಯ ಕಂಪ್ಲಿ, ಕಡೂರು ಪ್ರಾಣೇಶಾಚಾರ್, ವಾಚಸ್ಪತಿ ಆಚಾರ್ಯ ಕಡೂರು, ಡಾ. ಸಿ.ಕೆ.ಆನಂದ ತೀರ್ಥಾಚಾರ್ ಇತರರು ಭಾಗವಹಿಸಿದ್ದರು. ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಜೆ ‘ಶ್ರೀ ರಾಘವೇಂದ್ರ ಮಂಗಳಾಷ್ಟಕ’ ವಿಷಯದ ಕುರಿತು ಬೆಂಗಳೂರಿನ ಪಂಡಿತ ಪುರಂದರಾಚಾರ್ಯ ಹಯಗ್ರೀವ ಅವರು ಪ್ರವಚನ ನಡೆಸಿಕೊಟ್ಟರು. ಅನಂತರ ನಮನ ಅಕಾಡೆಮಿಯ ನೃತ್ಯಗುರು, ವಿದುಷಿ ಮಾಧವಿ ಗೋಪಾಲಕೃಷ್ಣ ಮತ್ತು ತಂಡದವರು ನೃತ್ಯ ಪ್ರದರ್ಶನ ನೀಡಿದರು.

- - -

(ಬಾಕ್ಸ್‌) * ರಾಯರ ಪಟ್ಟಾಭಿಷೇಕ ಮಹೋತ್ಸವ: ಪಿ.ಜೆ. ಬಡಾವಣೆ ಮಠಕ್ಕೆ ಭಕ್ತರ ದಂಡು ದಾವಣಗೆರೆ: ನಗರದ ಪಿ.ಜೆ. ಬಡಾವಣೆಯ ರಾಯರ ಮಠದಲ್ಲಿ ಗುರುವಾರ ಶ್ರೀ ರಾಘ‍ವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಗುರುವಾರ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ರಾಯರ ವೃಂದಾವನಕ್ಕೆ ಪುಷ್ಪಾಲಂಕಾರ, ಪಂಚಾಮೃತ ಸೇವೆಯ ಕೈಂಕರ್ಯ ನೆರವೇರಿದವು. ನಂತರ ಶ್ರೀ ಮಠದ ಸದ್ಭಕ್ತದಿಂದ ಅಷ್ಟೋತ್ತರ, ವಿಜಯದಾಸರ ವಿಜಯ ಕವಚನಪಾರಾಯಣ ಶ್ರದ್ಧಾಭಕ್ತಿಯಿಂದ ನಡೆಯಿತು. ಶ್ರೀ ಮಠದ ವ್ಯವಸ್ಥಾಪಕ ಸುತೀರ್ಥ ಕಟ್ಟಿ ಹಾಗೂ ಪುತ್ರ ರಾಮಗೋಪಾಲ ಕಟ್ಟಿ ರಾಯರ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಒಂದೂವರೆ ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿ, ಶ್ರೀರಾಯರ ಅನುಗ್ರಹಕ್ಕೆ ಪಾತ್ರರಾದರು. ರಾತ್ರಿ ಶ್ರೀ ರಾಯರ ಪಲ್ಲಕ್ಕಿ ಉತ್ಸವ, ಅಷ್ಟಾವದಾನ ಸೇವೆ, ಮಹಾಮಂಗಳಾರತಿಯೊಂದಿಗೆ ರಾಯರ ಪಟ್ಟಾಭಿಷೇಕ ಮಹೋತ್ಸವ ಸಂಪನ್ನಗೊಂಡಿತು. ಶ್ರೀಮಠದ ಶ್ರೀಧರ್ ಘಟಿಕರ್, ಪ್ರಕಾಶ ನಾಡಿಗೇರ್, ಎಂ.ಬಿ. ಬದರೀನಾಥ, ನಾಗರಾಜ, ಸುಶಮೀಂದ್ರ, ಶ್ರೀಶ, ರಾಮಚಂದ್ರ ರಾವ್, ಅಪಾರ ಭಕ್ತರು ಪಾಲ್ಗೊಂಡಿದ್ದರು. - - - -19ಕೆಡಿವಿಜಿ20:

- - -

-19ಕೆಡಿವಿಜಿ8: ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಸಂಸ್ಥಾನ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.-19ಕೆಡಿವಿಜಿ9: ದಾವಣಗೆರೆ ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ರಾಯರ ಸನ್ನಿಧಾನ.