ಯಲ್ಲಾಪುರ: ಪ್ರಕೃತಿ ಒಂದು ಸುಂದರ ಪಾಠಶಾಲೆ. ನಾವು ನಿಸರ್ಗದಿಂದ ಬದುಕುವುದನ್ನು ಕಲಿಯಬೇಕು ಎಂದು ವನ್ಯಜೀವಿ ಛಾಯಾಗ್ರಾಹಕ ಪುಟ್ಟರಾಜು ಕೈಗಾ ಹೇಳಿದರು.
ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ ಜೀವವೈವಿಧ್ಯ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು. ಹಿಂದಿನ ಆಯುರ್ವೇದ ಪದ್ಧತಿಯಲ್ಲಿ ನಿಸರ್ಗವೇ ಔಷಧಿ ಅಂಗಡಿ ಆಗಿತ್ತು. ಕೃಷಿ ಜಮೀನು ಸುತ್ತಮುತ್ತಲಿನ ಪರಿಸರದಲ್ಲಿ ವನ್ಯಜೀವಿಗಳ ಸಂಪತ್ತು ಹೇರಳವಾಗಿದೆ. ಪಕ್ಷಿ, ಪ್ರಾಣಿ ಪ್ರಪಂಚವು ನಿಸರ್ಗದ ಒಡನಾಟದ ಸಂಬಂಧವನ್ನು ಅನುಭವಿಸುತ್ತವೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಅಪರೂಪದ ಜೀವ ವೈವಿಧ್ಯಗಳಿವೆ. ಔಷಧ ಗುಣಗಳಿರುವ ಜೀವವೈವಿಧ್ಯ ಸಸ್ಯ ಸಂಕುಲ ಇಲ್ಲಿಯ ನೆಲದ ವಾತಾವರಣ ಆಧರಿಸಿ ಬೆಳೆದು ನಿಂತಿದೆ.ಕೆಲವು ಔಷಧೀಯ ಸಸ್ಯಗಳು ವಿನಾಶದಂಚಿಗೆ ತಲುಪಿದೆ. ಪ್ರಕೃತಿ ಒಂದು ಸುಂದರ ಪಾಠಶಾಲೆ ಎಂದರು.
ಹಾವುಗಳ ವೈವಿಧ್ಯತೆಯ ಕುರಿತು ಸಂಸ್ಥೆಯ ಸಂಚಾಲಕ ಎಂ. ದತ್ತಾತ್ರೇಯ ಮಾತನಾಡಿ, ಹಾವುಗಳ ಬಗೆಗೆ ಸಾಮಾನ್ಯ ತಿಳಿವಳಿಕೆ ಅಗತ್ಯ. ವಿಷಪೂರಿತ ಹಾವು, ವಿಷವಿಲ್ಲದ ಹಾವು ಹೀಗೆ ಪ್ರಕೃತಿಯಲ್ಲಿ ವಿವಿಧ ಪ್ರಭೇದದ ಹಾವುಗಳಿವೆ. ಹಾವುಗಳು ತಮಗೆ ಅಪಾಯದ ಸೂಚನೆ ಬಂದಾಗ ಮಾತ್ರ ದಾಳಿ ಮಾಡುತ್ತವೆ. ಇಲ್ಲದಿದ್ದರೆ ಅವು ನಿಸರ್ಗದಲ್ಲಿ ತಮ್ಮ ಪಾಡಿಗೆ ತಾವು ಜೀವಿಸಿಕೊಂಡು ಇರುತ್ತವೆ. ಹಾವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಆಗಬೇಕು. ಅರಣ್ಯ ಬೆಂಕಿಗೆ ಆಹುತಿ ಆಗದಂತೆ ನೋಡಿಕೊಳ್ಳಬೇಕು. ಹಾವಿನ ವಿಷದಲ್ಲಿ ನಾಲ್ಕು ಅಪಾಯಕಾರಿ ವಿಷಗಳಿವೆ. ಹಾವು ಕಚ್ಚಿದ ತಕ್ಷಣ ಹೆದರದೇ ಪ್ರಾಥಮಿಕ ಚಿಕಿತ್ಸೆ ಪಡೆಯಬೇಕು ಎಂದರು.ಶಿಕ್ಷಕ ಎಸ್.ಟಿ. ಬೇವಿನಕಟ್ಟಿ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ, ಶಿಕ್ಷಕರಾದ ಗಿರೀಶ ಹೆಬ್ಬಾರ, ಸೀಮಾ ಗೌಡ, ಮಂದಾರ ಗೌಡ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆದಿಲ್, ಪ್ರೇಮ್ ಉಪಸ್ಥಿತರಿದ್ದರು.