ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪ್ರತೀ ವರ್ಷವೂ ಜೂನ್ ೫ರಂದು ವಿಶ್ವ ಪರಿಸರ ದಿನ ಕೇವಲ ಆಚರಣೆಗೆ ಸೀಮಿತವಾಗಿದೆ. ಅರಿವಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದರೂ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಯಿಂದ ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಗೂ ಹಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣ ಉಂಟಾಗುವ ಮುನ್ನ ಪ್ರತಿಯೊಬ್ಬರೂ ಜಾಗೃತರಾಗಲೇಬೇಕಿದೆ. ಮನುಷ್ಯನ ಜೀವನಕ್ಕೆ ಪ್ರಕೃತಿ ನೀಡಿರುವ ಅಮೂಲ್ಯವಾದ ಕೊಡುಗೆಗಳ ಮೇಲೆ, ತನ್ನ ಸ್ವಾರ್ಥಕ್ಕಾಗಿ ನಿರಂತರವಾಗಿ ಮನುಷ್ಯ ಪ್ರಕೃತಿಯ ಮೇಲೆ ದಾಳಿ ನಡೆಸಿದ್ದಾನೆ. ಇಂತಹ ಪರಿಸ್ಥಿತಿಯಿಂದಾಗಿ ಮುಂದಿನ ದಿನಗಳಲ್ಲಿ ಸರ್ವನಾಶವು ನಮ್ಮ ಕಣ್ಣೆದುರೇ ನಡೆಯಲಿದೆ. ಈಗಾಗಲೇ ಎಚ್ಚರಿಕೆಯ ಸಂದೇಶಗಳನ್ನು ಪ್ರಕೃತಿ ನೀಡುತ್ತಿದ್ದು, ನಮ್ಮ ದೇಶ ಸೇರಿದಂತೆ ವಿಶ್ವವ್ಯಾಪ್ತಿ ಅಹಿತಕರ ಘಟನೆಗಳು ಘಟಿಸುತ್ತಿದ್ದು, ಇವುಗಳನ್ನು ಕಂಡಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಪರಿಸರ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗಿಡಬೇಕಿಲ್ಲ. ಇಂದಿನಿಂದಲೇ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಅವಿಷ್ಕಾರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಸಂಕೀರ್ಣವಾಗಿದೆ. ಇದರಿಂದ ಹೆಚ್ಚಿನ ಜನರು ಪ್ರಕೃತಿಯಿಂದ ದೂರವಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯನ ಉದಾಸೀನತೆ, ಸ್ವಾರ್ಥ ಹಾಗೂ ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಗಳು ಎಂಬುದು ಕಟ್ಟು ಸತ್ಯವಾಗಿದೆ. ಆದ್ದರಿಂದ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ.
ಪ್ರಕೃತಿ ಹಾಗೂ ಪರಿಸರದ ಬಗ್ಗೆ ಕಾಳಜಿ ಜತೆಗೆ ಚಿಂತೆ ಇರುವವರು ಪರಿಸರ ಸಂರಕ್ಷಣೆ ಬಗ್ಗೆ ಗಮನಿಸಬೇಕಾದ ಅಂಶಗಳಲ್ಲಿ ಪರಿಸರ ಸಂರಕ್ಷಣೆಯಲ್ಲಿ ನಾವು ಮಾಡಲೇಬೇಕಾದ ವಿಷಯಗಳಲ್ಲಿ ಬಳಸಿ ಬಿಸಾಡುವ ಬದಲು ಪರಿಸರ ಸ್ನೇಹಿ ಪುನರ್ ಬಳಕೆಯಂತಹ ವಸ್ತುಗಳ ಬಳಕೆ ಮಾಡಬಹುದು. ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಅಥವಾ ಕಾಗದ ಚೀಲಗಳ ಬಳಕೆ, ಅಡುಗೆ ಮನೆಯ ಆಹಾರ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ, ಬಳಕೆ ಮಾಡಿಸುವುದು ಹಾಗೂ ಪ್ರಾಣಿ ಪಕ್ಷಿಗಳಿಗೆ ಕಂಟಕವಾಗಿರುವ ಪ್ಲಾಸ್ಟಿಕ್ ಚೀಲದ ಬಳಕೆ ಜತೆಗೆ ಅವುಗಳಲ್ಲಿ ಆಹಾರ ಪದಾರ್ಥಗಳನ್ನು ಸುತ್ತಿ ಬಿಸಾಡುವುದನ್ನು ಬಿಟ್ಟು ಜವಾಬ್ದಾರಿಯಿಂದ ವರ್ತಿಸುವುದು ಓರ್ವ ಸಾಮಾನ್ಯ ಪ್ರಜೆಯ ಪರಿಸರ ಕಾಳಜಿಯ ಅಂಶಗಳಾಗಿದ್ದು, ಪಾಲನೆಯೂ ಸುಲಭವಾಗಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯ ವರ್ತನೆ ಅತ್ಯಗತ್ಯವಾಗಿದೆ. ತ್ಯಾಜ್ಯದ ಉತ್ಪಾದನೆ, ಸಂಸ್ಕರಣೆ ಹಾಗೂ ವಿಲೇವಾರಿ, ನೀರಿನ ಮಿತ ಬಳಕೆ, ವಿನಾಕಾರಣ ಇಂಧನ ಶಕ್ತಿಯ ಬಳಕೆ ಮಾಡದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಕೆಯಿಂದ ಇಂದನ ಉಳಿತಾಯವಾಗಲಿದೆ. ಕಾಡನ್ನು ಕೃಷಿ ಭೂಮಿ ಮಾಡುವುದು, ಕೃಷಿ ಭೂಮಿಯನ್ನು ನಿವೇಶನ ಮಾಡುವ ವಿಷಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಕೆ ಮಾಡಬೇಕಿದೆ. ಸಾಧ್ಯವಾದಷ್ಟು ಸೋಲಾರ್ ಬಳಸುವ ಮನಸ್ಥಿತಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಹೆಚ್ಚುವಂತೆ ಮಾಡುವ ನಿಟ್ಟಿನಲ್ಲಿ ವಿಶೇಷ ದಿನಗಳಲ್ಲಿ ಗಿಡ ನೆಡುವ ಕಾರ್ಯ ಕೈಗೊಳ್ಳುವ ಜತೆಗೆ ಪೋಷಿಸುವ ಹೊಣೆಗಾರಿಯೂ ಅಗತ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪರಿಸರ ದಿನಾಚರಣೆಯಲ್ಲಿ ಗಿಡ ನೆಡುವ ಕಾರ್ಯಕ್ರಮಗಳು ಒಂದು ಟ್ರೆಂಡಾಗಿದ್ದು ಕಳೆದ ಹತ್ತಾರು ವರ್ಷಗಳಿಂದ ನಡೆದಿರುವ ಕಾರ್ಯಕ್ರಮಗಳಲ್ಲಿ ನೆಟ್ಟ ಗಿಡಗಳನ್ನು ಜವಾಬ್ದಾರಿಯಿಂದ ಪೋಷಿಸಿ, ಬೆಳೆಸುವ ಮನಸ್ಥಿತಿ ಇದ್ದಿದ್ದರೆ ಉತ್ತಮ ಪರಿಸರದಲ್ಲಿ ಸ್ವಚ್ಛಂತವಾಗಿ ಪ್ರಾಣಿ ಪಕ್ಷಿಗಳ ಕಲರವ ಜತೆಗೆ ಉತ್ತಮ ಸಮಾಜ ನಿರ್ಮಾಣವಾಗಿರುತ್ತಿತ್ತು. ಕಠಿಣ ಕಾನೂನು ಅತ್ಯಗತ್ಯ :ಅಗತ್ಯತೆ ಅಥವಾ ಇತರೆ ಸನ್ನಿವೇಶಗಳ ಸಂದರ್ಭಗಳಲ್ಲಿ ನಡೆಸುವ ಪ್ರತಿಭಟನೆಗಳಲ್ಲಿ ವಾಹನಗಳ ಟೈರುಗಳಿಗೆ ಬೆಂಕಿ ಹಚ್ಚುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದ್ದು, ಮನುಷ್ಯನ ಈ ವರ್ತನೆ ಅತ್ಯಂತ ಖಂಡನೀಯ ಇದರ ವಿರುದ್ಧ ಕಠಿಣ ಕಾನೂನು ಅತ್ಯಗತ್ಯವಾಗಿದೆ.