ಮಣಿಪಾಲ: ಸಿನಿಮಾಗಳ ಗುಣಮಟ್ಟ ಸುಧಾರಿಸಬೇಕಾದರೆ ಪ್ರೇಕ್ಷಕರ ಅಭಿರುಚಿಯನ್ನು ತಿದ್ದುವ ಅಗತ್ಯವಿದೆ. ಇಂದಿನ ಹೆಚ್ಚಿನ ಸಿನಿಮಾ ಮತ್ತು ಧಾರಾವಾಹಿಗಳು ಅವಾಸ್ತವ ಘಟನೆಗಳನ್ನು ಚಿತ್ರಿಸುತ್ತವೆ . ಇವು ಪ್ರೇಕ್ಷಕರ ಬೌದ್ಧಿಕ ಚಿಂತನೆಯಲ್ಲಿ ಬದಲಾವಣೆ ಮಾಡುವುದಿಲ್ಲ. ಶಿವರಾಮ ಕಾರಂತರ ಕೃತಿಗಳಂತೆ ವಾಸ್ತವವಾದಿ ಚಿಂತನೆಯನ್ನು ಬೆಳೆಸುವ ಸಿನಿಮಾಗಳನ್ನು ನೋಡುವ ಅಭಿರುಚಿ ಪ್ರೇಕ್ಷಕರಲ್ಲಿ ಬೆಳೆಸುವ ಅಗತ್ಯವಿದೆ ಎಂದು ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.ಸೋಮವಾರ ಮಣಿಪಾಲದ ಮಾಹೆಯ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಮಣಿಪಾಲ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಹ್ಯುಮಾನಿಟೀಸ್ ಆಂಡ್ ಆರ್ಟ್ಸ್ ವಿಭಾಗದ ಸಹಯೋಗದಲ್ಲಿ ನಡೆದ ಕಾರಂತರ ಚಲನಚಿತ್ರ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಮಾತನಾಡಿದರು. ಖ್ಯಾತ ನಿರ್ದೇಶಕ, ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ ಮಾತನಾಡಿ, ಕಾಲೇಜುಗಳಲ್ಲಿ ಸಿನೆಮಾ ಕ್ಲಬ್ಗಳನ್ನು ಸ್ಥಾಪಿಸಿ ವಿರಾಮ ಸಂದರ್ಭದಲ್ಲಿ ಕಲಾತ್ಮಕ ಸಿನೆಮಾಗಳನ್ನು ನೋಡುವ ಅವಕಾಶ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟರು.ಡಾ. ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಉಪಸ್ಥಿತರಿದ್ದರು.