ಕುಂದಾಪುರ: ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಯಷ್ಟೇ ಅಥವಾ ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚೇ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭರವಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಪಕ್ಷದ ನಾಯಕರು, ಮುಖ್ಯಮಂತ್ರಿಗಳು ಭ್ರಮೆಯಲ್ಲಿದ್ದಾರೆ. ಸರ್ಕಾರದ ಗ್ಯಾರಂಟಿಗಳಲ್ಲ ವಿಫಲ ಆಗಿವೆ, ಅವು ಕೈ ಹಿಡಿಯಲ್ಲ ಎಂದರು. ನಾನು ಭವಿಷ್ಯ ನುಡಿಯುತ್ತಿದ್ದೇನೆ ಎಂದು ಭಾವಿಸಬೇಡಿ. ರಾಜ್ಯದ ಪ್ರಜ್ಞಾವಂತ ಮತದಾರರು ಪ್ರಧಾನಿ ಮೋದಿ ಕೈ ಹಿಡಿದು ಮತ್ತೆ ಪ್ರಧಾನಿಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಫಲಿತಾಂಶದ ದಿನ ಕಾಂಗ್ರೆಸ್ನವರಿಗೆ ದೊಡ್ಡ ನಿರಾಸೆ ಕಾದಿದೆ. ಅತಿ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಇತಿಹಾಸ ಸೃಷ್ಟಿ ಮಾಡಲಿದೆ ಎಂದು ಹೇಳಿದರು.
ರಾಜ್ಯ ವಿಧಾನ ಪರಿಷತ್ಗೆ ಸುಮಲತಾ, ರವಿಕುಮಾರ್ ಹೆಸರು ಮಾಧ್ಯಮಗಳಿಂದಲೇ ನನ್ನ ಗಮನಕ್ಕೆ ಬಂದಿದೆ. ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ, ನಾನು ಪಟ್ಟಿಯ ನಿರೀಕ್ಷೆಯಲ್ಲಿದ್ದೇನೆ ಎಂದರು.
ರಾಜ್ಯದ 6 ವಿಧಾನ ಪರಿಷತ್ ಕ್ಷೇತ್ರಗಳು ಬಂಡಾಯದ ಕಾರಣಕ್ಕೆ ಚರ್ಚೆಯಾಗುತ್ತಿದೆ. ಆದರೆ ಯಾವುದೇ ಗೊಂದಲ ಇಲ್ಲದೆ ನಮ್ಮ ಶಾಸಕರು, ನಾಯಕರು ಕೆಲಸ ಮಾಡುತ್ತಿದ್ದಾರೆ. ನೈರುತ್ಯ ಕ್ಷೇತ್ರದಲ್ಲಿ ಡಾ.ಧನಂಜಯ ಸರ್ಜಿ, ಭೋಜೇಗೌಡ ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲ್ಲುತ್ತಾರೆ ಎಂದರು.
ಈಶ್ವರಪ್ಪ ಮರೆತಿದ್ದಾರೆ: ಈಶ್ವರಪ್ಪ ಅವರು ಈಗ ಧನಂಜಯ ಸರ್ಜಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ, ಚರ್ಚೆ ಮಾಡಿದ್ದಾರೆ. ನಾನು ದೇವಸ್ಥಾನದ ಮುಂದೆ ನಿಂತು ಹೇಳುತ್ತಿದ್ದೇನೆ. ಹಿಂದೆ ಅಭ್ಯರ್ಥಿ ಯಾರು ಎಂದು ಚರ್ಚೆ ಆದಾಗ ಈಶ್ವರಪ್ಪನವರೇ ಡಾ. ಸರ್ಜಿ ಅವರು ಸಜ್ಜನರಿದ್ದಾರೆ, ಅವರಿಗೆ ಅವಕಾಶ ಕೊಡಬೇಕು ಎಂದು ಸೂಚಿಸಿದ್ದರು. ಈಗವರು ತಾನು ಹೇಳಿದ್ದನ್ನು ಮರೆತಿದ್ದಾರೆ ಎಂದರು.
ಸಹಸ್ರ ನಾರಿಕೇಳ ಗಣ ಯಾಗದಲ್ಲಿ ಭಾಗಿ
ಇಲ್ಲಿನ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಉದ್ಯಮಿ ಜಿ.ರಾಘವೇಂದ್ರ ಉಪಾಧ್ಯಾಯ ಕುಟುಂಬಸ್ಥರು ನಡೆಸಿದ ಸಹಸ್ರ ನಾರಿಕೇಳ ಗಣ ಯಾಗದಲ್ಲಿ ಬಿ.ವೈ.ವಿಜಯೇಂದ್ರ ಕುಟುಂಬ ಸಮೇತ ಭಾಗಿಯಾದರು. ಸುಮಾರು ಒಂದೂವರೆ ಗಂಟೆ ನಡೆದ ಈ ಯಾಗದ ಕೊನೆವರೆಗೂ ಪತ್ನಿ ಪ್ರೇಮ ಜೊತೆ ವಿಜಯೇಂದ್ರ ಉಪಸ್ಥಿತರಿದ್ದರು.