ಮಸೀದಿ ಒಡೆಯುತ್ತೇವೆಂದು ಅನಂತಕುಮಾರ್‌ ಹೇಳಿದ್ದರಲ್ಲಿ ತಪ್ಪೇನಿದೆ?: ಕೆಎಸ್‌ ಈಶ್ವರಪ್ಪ

KannadaprabhaNewsNetwork | Updated : Jan 15 2024, 04:47 PM IST

ಸಾರಾಂಶ

ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ದೇವಸ್ಥಾನಗಳಾಗಿದ್ದವು. ಈ ಮಸೀದಿಗಳನ್ನು ಒಡೆಯುತ್ತೇವೆ ಎಂದು ಅನಂತ್‌ಕುಮಾರ್‌ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಸಮರ್ಥಿಸಿಕೊಂಡರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ದೇವಸ್ಥಾನಗಳಾಗಿದ್ದವು. ಈ ಮಸೀದಿಗಳನ್ನು ಒಡೆಯುತ್ತೇವೆ ಎಂದು ಅನಂತ್‌ಕುಮಾರ್‌ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸಮರ್ಥಿಸಿಕೊಂಡರು. 

ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳ ದೇವಸ್ಥಾನ ಒಡೆದು ಒಡೆದು ಮಸೀದಿ ಕಟ್ಡಿದ್ದಾರೆ. ಈಗ ಮಸೀದಿ ಒಡೆದು ದೇವಸ್ಥಾನ ಕಟ್ಟುತ್ತೇವೆ ಎಂದಿದ್ದಾರೆ. 

ಇದನ್ನು ಎಲ್ಲ ಭಾರತೀಯರು ಸ್ವಾಗತ ಮಾಡಬೇಕು. ಸಿದ್ದರಾಮಯ್ಯ ಅವರು ತಿದ್ದಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಕುಟುಕಿದರು.

ಪಾಪ ಕಳೆದುಕೊಂಡು ಬನ್ನಿ: ಸಿದ್ದರಾಮಯ್ಯ ಮೊದಲು ನಾನು ಅಯೋಧ್ಯ ರಾಮ ಮಂದಿರಕ್ಕೆ ಹೋಗಲ್ಲ ಅಂದಿದ್ದರು. ಆಮೇಲೆ ಜ.22ರ ನಂತರ ಹೋಗ್ತೇನೆ ಅಂದಿದ್ದರು.

ಸಿದ್ದರಾಮಯ್ಯ, ಖರ್ಗೆ ಅವರಿಗೆ ನಾನು ಸ್ವಾಗತ ಕೋರಿದ್ದೆ. ಆದರೆ, ಈಗ ಮತ್ತೆ ನಾನು ರಾಮಮಂದಿರಕ್ಕೆ ಹೋಗಲ್ಲ, ಹೋಗ್ತೀನಿ ಅಂತಾ ಹೇಳಿಲ್ಲ ಎನ್ನುತ್ತಿದ್ದಾರೆ. 

ಸಿದ್ದರಾಮಯ್ಯ ಅವರು ನಿಮಿಷಕ್ಕೊಂದು ಮಾತನಾಡ್ತಾರೆ. ನಿಮ್ಮ ಹೆಸರಿನಲ್ಲಿ ಸಿದ್ದ, ರಾಮ ಎರಡು ಇದೆ. ರಾಮ ಮಂದಿರಕ್ಕೆ ಹೋಗಿ ನಿಮ್ಮ ‌ಪಾಪ ಕಳೆದುಕೊಂಡು ಬನ್ನಿ ಎಂದು ಸಲಹೆ ನೀಡಿದರು.

ರಾಮಮಂದಿರ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿಲ್ಲ. ಆದರೆ, ಕಾಂಗ್ರೆಸ್‌ನವರು ಇದು ಬಿಜೆಪಿ ರಾಮ ಮಂದಿರ ಎಂದು ಬಿಂಬಿಸುತ್ತಿದ್ದಾರೆ. ಇಡೀ ಪ್ರಪಂಚದ ಹಿಂದುಗಳನ್ನು ಒಂದು ಮಾಡಲು ಶ್ರೀರಾಮ ಇರೋದು. ಇದರಲ್ಲಿ ಯಾವ ರೀತಿ ರಾಜಕಾರಣ ಮಾಡ್ತಿದ್ದೇವೆ ಅಂತಾ ನೀವು ಹೇಳಿದ್ರೆ ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡ್ತೇವೆ ಎಂದರು.

ಕಠಿಣ ಕಾನೂನು ಕ್ರಮ ಜರುಗಿಸಿ: ಹಾವೇರಿ ಮತ್ತು ಬೆಳಗಾವಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಬೆಳಗಾವಿಯಲ್ಲಿ ಪಾರ್ಕ್‌ನಲ್ಲಿ ಅಕ್ಕ-ತಮ್ಮ ಮಾತನಾಡುತ್ತಿದ್ದರು. 

ಹಿಂದು ಮಹಿಳೆ ಮುಸ್ಲಿಂಗೆ ಕನ್ವರ್ಟ್ ಆಗಿದ್ದಳು. ಅಕ್ಕ, ತಮ್ಮ ಮಾತನಾಡುವಾಗ ಗೂಂಡಾ ಮುಸ್ಲಿಂರು ಹಲ್ಲೆ ಮಾಡಿದ್ದಾರೆ. ಅಕ್ಕ ತಮ್ಮ ಮಾತನಾಡಿದ್ರು ತಪ್ಪೇ ಎಂದು ಪ್ರಶ್ನಿಸಿದ ಅವರು, ಹಾವೇರಿಯಲ್ಲಿ ಲಾಡ್ಜ್ ಒಂದರಲ್ಲಿ ಇದ್ದ ಮಹಿಳೆಯ ಮೇಲೆ ಏಳು ಜನ ಅತ್ಯಾಚಾರ ಮಾಡಿದ್ದಾರೆ. ಇವರನ್ನು ಮನುಷ್ಯರೆಂದು ಕರೆಯಬೇಕಾ? 

ಯಾವುದೇ ಧರ್ಮದ ಹೆಣ್ಣುಮಗಳಾಗಲಿ ಇಂತಹ ನೀಚ ಕೃತ್ಯ ನಡೆಯಬಾರದು. ಗೃಹ ಸಚಿವರು ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹರಿಹಾಯ್ದರು.

ನಾನು ದೆಹಲಿಗೆ ಹೋಗಿದ್ದೆ. ಅಮಿತ್ ಶಾ, ಅರುಣ್ ಸಿಂಗ್ ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೇನೆ. ಯತ್ನಾಳ್, ಸೋಮಣ್ಣ ಅವರನ್ನು ಕರೆದು ಮಾತನಾಡಿ ಅಂತಾ ಹೇಳಿದ್ದೇನೆ. 

ನನಗೆ ನೀವು ಚುನಾವಣೆಗೆ ನಿಲ್ಲಬೇಡಿ ಅಂದಿದ್ದರು. ಚುನಾವಣೆಗೆ ಸ್ಪರ್ಧೆ ಮಾಡಲಿಲ್ಲ, ಆಗ ಪಕ್ಷ ಸಂಘಟನೆ ಮಾಡ್ತೀನಿ‌ ಜವಾಬ್ದಾರಿ ಕೊಡಿ ಅಂದಿದ್ದೆ. ಆದರೆ, ನನಗೆ ಇದುವರೆಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ.

ನನ್ನ ಮಗನಿಗೆ ಹಾವೇರಿ‌ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಕೊಡಿ ಅಂತಾ ಕೇಳಿದ್ದೇನೆ. ಟಿಕೆಟ್‌ ಸಿಗುವ ವಿಶ್ವಾಸ ಇದೆ. ಜೊತೆಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲ್ಲಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಸಿಎಂ ಸಿದ್ದರಾಮಯ್ಯ ಅವರು ಅಲ್ಲಮ ಪ್ರಭು ಹೆಸರು ನಾಮಕರಣ ಮಾಡಿದ್ದಾರೆ. ಇದನ್ನು ಸ್ವಾಗತ ಮಾಡ್ತೇನೆ ಎಂದರು.

Share this article