ಸಿಎಂ ಸಿದ್ದರಾಮಯ್ಯ 14 ಸೈಟ್ ಯಾಕೆ ವಾಪಸ್ ಕೊಟ್ಟರು?: ಶಾಸಕ ಟಿ.ಎಸ್‌.ಶ್ರೀವತ್ಸ

KannadaprabhaNewsNetwork | Published : Feb 21, 2025 12:48 AM

ಸಾರಾಂಶ

ಲೋಕಾಯುಕ್ತ ಇದೇ ರೀತಿ ವರದಿ ಕೊಡುತ್ತದೆ ಎಂದು ನನಗೆ ಗೊತ್ತಿತ್ತು. ಲೋಕಾಯುಕ್ತಕ್ಕೆ ಎಲ್ಲ ದಾಖಲೆ ಕೊಟ್ಟಿದ್ದೇವೆ. ಆದರೂ ಈ ರೀತಿ ವರದಿ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಮುಗ್ದರು, ಏನೂ ತಪ್ಪು ಮಾಡಿಲ್ಲ ಎಂಬುದಾದರೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಿಎಂ ಸಿದ್ದರಾಮಯ್ಯ ಪರವಾಗಿ ಲೋಕಾಯುಕ್ತ ವರದಿ ನೀಡಿರುವುದನ್ನು ಬಿಜೆಪಿ ಶಾಸಕ ಟಿ.ಎಸ್‌.ಶ್ರೀವತ್ಸ ಖಂಡಿಸಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಇದೇ ರೀತಿ ವರದಿ ಕೊಡುತ್ತದೆ ಎಂದು ನನಗೆ ಗೊತ್ತಿತ್ತು. ಲೋಕಾಯುಕ್ತಕ್ಕೆ ಎಲ್ಲ ದಾಖಲೆ ಕೊಟ್ಟಿದ್ದೇವೆ. ಆದರೂ ಈ ರೀತಿ ವರದಿ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಮುಗ್ದರು, ಏನೂ ತಪ್ಪು ಮಾಡಿಲ್ಲ ಎಂಬುದಾದರೆ. ಆಗಾದರೆ 14 ಸೈಟ್ ಯಾಕೆ ವಾಪಾಸ್ ಕೊಟ್ಟರು ಎಂದು ಪ್ರಶ್ನಿಸಿದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ 141 ಫೈಲ್ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲೆ ಸಿಎಂ ಕುಟುಂಬದ ಸಾಕ್ಷಿ ಇರಬಹುದು. ಸಿಎಂ ಒತ್ತಡದಿಂದ ಲೋಕಾಯುಕ್ತ ವರದಿ ಸಿದ್ಧವಾಗಿದೆ. ಲೋಕಾಯುಕ್ತಕ್ಕೆ ಇದ್ದ ಮರ್ಯಾದೆಯನ್ನು ಜಿಲ್ಲಾ ಮಟ್ಟದ ಲೋಕಾಯುಕ್ತ ಅಧಿಕಾರಿ ಕಳೆದಿದ್ದಾರೆ ಎಂದು ಅವರು ಟೀಕಿಸಿದರು.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪ ಸಾಬೀತಾಗಿಲ್ಲ: ಪರಮಾನಂದ

ಕನ್ನಡಪ್ರಭ ವಾರ್ತೆ ಮೈಸೂರು

ಸಾಕ್ಷ್ಯಾಧಾರಗಳ ತನಿಖೆಯಿಂದ ನಿರಪರಾಧಿ ಎಂದು ಸಾಬೀತಾಗಿಲ್ಲ. ಬದಲಿಗೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪ ಸಾಬೀತಾಗಿಲ್ಲ ಎಂಬುದಷ್ಟೇ ವ್ಯತ್ಯಾಸ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಎಂ.ಎಸ್. ಪರಮಾನಂದ ಹೇಳಿದ್ದಾರೆ.

ಇದೇನು ‘ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ’... ಅಂತೇನೂ ಇಲ್ಲಾ... ‘ಸಾಕ್ಷ್ಯಾಧಾರಗಳ ಸರ್ವನಾಶದಿಂದಾಗಿ’ ಅಂತಷ್ಟೇ. ಒಬ್ಬ ಆಡಳಿತದಲ್ಲಿರುವ ಮುಖ್ಯಮಂತ್ರಿಯ ಹಗರಣದ ತನಿಖೆಯು ಎಂದೂ ಪಾರದರ್ಶಕವಾಗಿ ನಡೆಯಲಾರದು. ಸಾಕ್ಷಿಗಳು ಹೆದರುತ್ತಾರೆ ಅಥವಾ ಆಮಿಷಕ್ಕೊಳಗಾಗುತ್ತಾರೆ. ದಾಖಲೆಗಳು ದ್ವಂಸವಾಗುತ್ತವೆ.

ಹಾಗಾಗಿ...ಸಾಕ್ಷ್ಯಾಧಾರಗಳ ಕೊರತೆ ಎಂಬುದು ಮತ್ತೊಮ್ಮೆ ಅವರ ಭ್ರಷ್ಟತೆಯನ್ನು ಸಾಬೀತು ಪಡಿಸಿದೆಯೇ ಹೊರತು ಮಾನ್ಯ ಮುಖ್ಯಮಂತ್ರಿಗಳು ಸಾಚಾ ಸಿದ್ದರಾಮಯ್ಯ ಅಂತೇನೂ ಅಲ್ಲ ಎಂದಿದ್ದಾರೆ.

ಎಲ್ಲಾ ರಾಜಕಾರಣಿಗಳದ್ದೂ ಇದೇ ಕಥೆ. ಹಗರಣಗಳು ಬೇರೆ ಬೇರೆ ಅಷ್ಟೇ ಇಂತಹ ಹಗರಣಗಳು ನಿರ್ನಾಮವಾಗಬೇಕಿದ್ದರೆ ತನಿಖಾ ಸಂಸ್ಥೆಗಳು ಮತ್ತು ತನಿಖಾಧಿಕಾರಿಗಳು ನಿರ್ದಾಕ್ಷಿಣ್ಯವಾಗಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತಹ ವ್ಯವಸ್ಥೆಯನ್ನು ನಾವು ಆಡಳಿತದಲ್ಲಿ ರೂಪಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

Share this article