ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪ್ರತಿಸಲ ನೋಂದಣಿ ಏಕೆ?

KannadaprabhaNewsNetwork |  
Published : Nov 07, 2025, 02:45 AM IST
46456 | Kannada Prabha

ಸಾರಾಂಶ

ಪಶ್ಚಿಮ ಪದವೀಧರ ಮತದಾರರ ಕ್ಷೇತ್ರ ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳನ್ನೊಳಗೊಂಡಿದೆ. ಪ್ರತಿ 6 ವರ್ಷಕ್ಕೊಮ್ಮೆ ಚುನಾವಣೆ ಬಂದಾಗ ಮತದಾರರ ಪಟ್ಟಿಯನ್ನು ಹೊಸದಾಗಿ ತಯಾರಿಸಲಾಗುತ್ತದೆ. ಈ ಹಿಂದೆ ಮತದಾರರಾಗಿರುವವರು ಸಹ ಮತ್ತೊಮ್ಮೆ ನೋಂದಣಿ ಮಾಡಿಸಬೇಕು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ 2026ರಲ್ಲಿ ಚುನಾವಣೆ ನಡೆಯಲಿದ್ದು ನ. 6ಕ್ಕೆ ನೋಂದಣಿ ಮುಗಿದಿದೆ. ಆದರೆ, ಪ್ರತಿ ಬಾರಿಯೂ ಪದವೀಧರ ಕ್ಷೇತ್ರದ ಚುನಾವಣೆಗೆ ನೋಂದಣಿ ಮಾಡಿಸುವುದು ಏಕೆ? ತಂತ್ರಜ್ಞಾನ ಮುಂದುವರಿದಿದ್ದರೂ ಹಳೆಯ ಪದ್ಧತಿ ಅನುಸರಿಸುವುದು ಏಕೆ?.

ಇಂಥ ಹತ್ತಾರು ಪ್ರಶ್ನೆಗಳು ಪದವೀಧರ ಮತದಾರರಷ್ಟೇ ಅಲ್ಲದೆ, ವಿವಿಧ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳಲ್ಲಿ ಉದ್ಭವಾಗಿದೆ.

ಏನಿದು ನೋಂದಣಿ?

ಪಶ್ಚಿಮ ಪದವೀಧರ ಮತದಾರರ ಕ್ಷೇತ್ರ ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳನ್ನೊಳಗೊಂಡಿದೆ. ಪ್ರತಿ 6 ವರ್ಷಕ್ಕೊಮ್ಮೆ ಚುನಾವಣೆ ಬಂದಾಗ ಮತದಾರರ ಪಟ್ಟಿಯನ್ನು ಹೊಸದಾಗಿ ತಯಾರಿಸಲಾಗುತ್ತದೆ. ಈ ಹಿಂದೆ ಮತದಾರರಾಗಿರುವವರು ಸಹ ಮತ್ತೊಮ್ಮೆ ನೋಂದಣಿ ಮಾಡಿಸಬೇಕು. ಮಾರ್ಕ್ಸ್‌ ಕಾರ್ಡ್‌, ಪ್ರಮಾಣ ಪತ್ರ, ವೋಟರ್‌ ಐಡಿ, ಫೋಟೋ ನೀಡಿ ಮತ್ತೊಮ್ಮೆ ನೋಂದಣಿ ಮಾಡಿಸಲೇಬೇಕು. ಜತೆಗೆ ಅದಕ್ಕೆ ಗೆಜೆಟೆಡ್‌ ಅಧಿಕಾರಿಗಳಿಂದ ಸಹಿ ಕೂಡ ಮಾಡಿಸಿರಬೇಕು. ಹೀಗಾಗಿ ಪ್ರತಿ ಬಾರಿಯೂ ಯಾರು ನೋಂದಣಿ ಮಾಡಿಸುತ್ತಾರೆಂದು ಪದವೀಧರರು ಮತದಾರರಾಗಲು ನಿರಾಸಕ್ತಿ ತೋರಿಸುತ್ತಾರೆ. ಲಕ್ಷಗಟ್ಟಲೇ ಪದವೀಧರರಿದ್ದರೂ ಸಾವಿರ ಲೆಕ್ಕದಲ್ಲಿ ನೋಂದಣಿಯಾಗುತ್ತಿದೆ.

ಹೊಸ ಪದವೀಧರರ ನೋಂದಣಿ ಮಾಡಿಸಿದರೆ ಸರಿ. ಹಳೆಯ ಮತದಾರರನ್ನು ಮಾಡಿಸಬೇಕೆಂದರೆ ಹೇಗೆ? ಒಮ್ಮೆ ಪದವಿ ಪಡೆದರೆ ಜೀವನ ಪರ್ಯಂತ ಇರುತ್ತದೆ. ಇದನ್ನು ಚುನಾವಣಾ ಆಯೋಗ ಯೋಚಿಸುವುದಿಲ್ಲವೇ ಎಂಬ ಪ್ರಶ್ನೆ ಪದವೀಧರರದ್ದು. ಮೃತಪಟ್ಟಿದ್ದರೆ ಅವರ ಹೆಸರು ತೆಗೆದು ಹಾಕಬೇಕು ಎಂಬುದು ಪ್ರಜ್ಞಾವಂತರ ಅಭಿಮತ.

ಆನ್‌ಲೈನ್‌ ಬಳಸಿ:

ಮತದಾರರ ನೋಂದಣಿಗೆ ಹಳೆಯ ಪದ್ಧತಿಯಂತೆ ಮಾರ್ಕ್ಸ್‌ ಕಾರ್ಡ್‌, ಆಧಾರ್‌ ಕಾರ್ಡ್‌, ವೋಟರ್‌ ಐಡಿ ಝೇರಾಕ್ಸ್‌ ಪ್ರತಿಗೆ ಸ್ವಯಂ ದೃಢೀಕರಣ ಮಾಡಿ ಸಲ್ಲಿಸಬೇಕು. ಹೀಗಾಗಿ ಪದವೀಧರರು ತಾವಾಗಿಯೇ ನೋಂದಣಿ ಮಾಡಿಸುತ್ತಿಲ್ಲ. ಟೆಕೆಟ್‌ ಆಕಾಂಕ್ಷಿಗಳು, ಅವರ ಬೆಂಬಲಿಗರೇ ಪದವೀಧರರನ್ನು ಹುಡುಕಾಡಿ ನೋಂದಣಿ ಮಾಡಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಯಾರು ಎಷ್ಟು ನೋಂದಣಿ ಮಾಡಿಸುತ್ತಾರೆ ಅವರಿಗೆ ಟಿಕೆಟ್‌ ಎಂಬಂತಹ ಅಘೋಷಿತ ನಿಯಮವನ್ನೂ ಪಕ್ಷಗಳು ಆಕಾಂಕ್ಷಿಗಳ ಮೇಲೆ ಹೇರಿರುವುದುಂಟು. ಆಧುನಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಅದೇಕೆ ಹಳೆ ಪದ್ಧತಿಗೆ ಚುನಾವಣೆ ಆಯೋಗ ಜೋತು ಬಿದ್ದಿರುವುದು. ಆನ್‌ಲೈನ್‌ನಲ್ಲೇ ಎಲ್ಲ ದಾಖಲೆ ಸಲ್ಲಿಸಿ ನೋಂದಣಿ ಮಾಡಿಸುವ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಆಗ್ರಹವೂ ಕೇಳಿ ಬಂದಿದೆ.

ಇಲ್ಲವೇ ಯಾವ್ಯಾವ ವರ್ಷ ಎಷ್ಟು ಜನ ಪದವೀಧರರಾಗಿ ಹೊರಬಂದಿದ್ದಾರೆ ಎಂಬುದೆಲ್ಲವೂ ವಿವಿಗಳಲ್ಲಿ ಸಿಕ್ಕೇ ಸಿಗುತ್ತದೆ. ಪದವಿ ಪಡೆದವರನ್ನೆಲ್ಲ ಮತದಾರರನ್ನಾಗಿ ಮಾಡಿದರೆ ಈ ಸಮಸ್ಯೆಯೇ ಇರುವುದಿಲ್ಲ ಎಂಬುದು ರಾಜಕೀಯ ಪಕ್ಷಗಳ ಅಂಬೋಣ.

ಒಟ್ಟಿನಲ್ಲಿ ಪಶ್ಚಿಮ ಪದವೀಧರರ ಚುನಾವಣೆಗೆ ತಯಾರಿ ನಡೆದಿರುವ ಜತೆ ಜತೆಗೆ ಮತದಾರರ ನೋಂದಣಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವುದಂತೂ ಸತ್ಯ.ಆಧುನಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವ ಅಥವಾ ಯಾವ ವರ್ಷ ಎಷ್ಟು ಜನ ಪದವಿ ಪಡೆದಿದ್ದಾರೆ ಎಂಬ ಮಾಹಿತಿ ವಿಶ್ವ ವಿದ್ಯಾಲಯಗಳಲ್ಲಿ ಲಭ್ಯವಿರುತ್ತದೆ. ಅದರಂತೆ ಪದವೀಧರರನ್ನು ಮತದಾರರನ್ನಾಗಿಸಬೇಕು.

ಮೋಹನ ಲಿಂಬಿಕಾಯಿ, ಮಾಜಿ ಸದಸ್ಯ, ವಿಧಾನ ಪರಿಷತ್‌ಈ ಕ್ಷೇತ್ರದಿಂದ ಆಯ್ಕೆಯಾದವರು ಈ ಬಗ್ಗೆ ಪರಿಷತ್‌ನಲ್ಲಿ ಧ್ವನಿ ಎತ್ತಬೇಕು. ಕಾನೂನು ರಚನೆಯಾಗಬೇಕು. ಒಮ್ಮೆ ಪದವಿ ಪಡೆದವರು ಜೀವನ ಪರ್ಯಂತ ಪದವಿ ಹೊಂದಿರುತ್ತಾರೆ. ಆದರೂ ಪ್ರತಿಸಲ ಹೊಸದಾಗಿಯೇ ನೋಂದಣಿ ಮಾಡಿಸುವುದೆಂದರೆ ಅತ್ಯಂತ ಅವೈಜ್ಞಾನಿಕ. ಈ ಪದ್ಧತಿ ಹೋಗಬೇಕು.

ಲಿಂಗರಾಜ ಪಾಟೀಲ, ಬಿಜೆಪಿ ಮುಖಂಡಹೊಸದಾಗಿ ಪದವಿ ಪಡೆದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು. ಮತದಾರರು ಇಲ್ಲವಾಗಿದ್ದರೆ ಅವರ ಹೆಸರನ್ನು ತೆಗೆದು ಹಾಕಬೇಕು. ಪ್ರತಿಸಲ ಎಲ್ಲರದು ಹೊಸದಾಗಿ ಮಾಡಿಸುವುದು ಸರಿಯಲ್ಲ. ಹಳೆ ಪದ್ಧತಿಯಿಂದ ಹೊರಬರಬೇಕು. ಆನ್‌ಲೈನ್‌ ವ್ಯವಸ್ಥೆಯೂ ಅಳವಡಿಸಬೇಕು.

ಎಂ. ಕುಬೇರಪ್ಪ, ಕಾಂಗ್ರೆಸ್‌ ಮುಖಂಡ

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ