ಶಿವಣ್ಣನವರತ್ತ ಮತ್ತೆ ಚಿತ್ತ, ಒಲಿಯಲಿದೆಯೇ ಸಚಿವ ಸ್ಥಾನ?

KannadaprabhaNewsNetwork |  
Published : Aug 08, 2026, 02:15 AM IST
ಬಸವರಾಜ ಶಿವಣ್ಣನವರ | Kannada Prabha

ಸಾರಾಂಶ

ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನ ಭರ್ತಿ ವಿಚಾರದ ಚರ್ಚೆ ಗರಿಗೆದರಿರುವ ಬೆನ್ನಲ್ಲೇ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಹೆಸರು ಮತ್ತೊಮ್ಮೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಗೆ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಪಟ್ಟು ಹಿಡಿದಿರುವುದು ಶಿವಣ್ಣನವರ ಅವರ ಮಂತ್ರಿಗಿರಿ ಕನಸು ಗರಿಗೆದರುವಂತೆ ಮಾಡಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನ ಭರ್ತಿ ವಿಚಾರದ ಚರ್ಚೆ ಗರಿಗೆದರಿರುವ ಬೆನ್ನಲ್ಲೇ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಹೆಸರು ಮತ್ತೊಮ್ಮೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಗೆ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಪಟ್ಟು ಹಿಡಿದಿರುವುದು ಶಿವಣ್ಣನವರ ಅವರ ಮಂತ್ರಿಗಿರಿ ಕನಸು ಗರಿಗೆದರುವಂತೆ ಮಾಡಿದೆ.

ಸಚಿವ ಸ್ಥಾನದ ರೇಸ್‌ನಲ್ಲಿ ಹಲವು ಶಾಸಕರ ಹೆಸರುಗಳು ಕೇಳಿಬಂದಿದ್ದರೂ, ಶಿವಣ್ಣನವರ ವಿಚಾರದಲ್ಲಿ ಅವರ ಹಿರಿತನ ಮತ್ತು ಆಡಳಿತದ ಅನುಭವ ವಿಶೇಷವಾಗಿ ಚರ್ಚೆಗೆ ಬಂದಿದೆ. ಅಲ್ಲದೇ ಹಿಂದುಳಿದ ಕುರುಬ ಸಮಾಜದಿಂದ ಉತ್ತರ ಕರ್ನಾಟಕ ಭಾಗದಿಂದ ಆಡಳಿತ ಪಕ್ಷದಲ್ಲಿ ಗೆದ್ದಿರುವ ಹಿರಿಯ ಶಾಸಕರು ಇವರಾಗಿದ್ದಾರೆ.

1994ರಲ್ಲಿ ಮೊದಲ ಬಾರಿಗೆ ಹಾವೇರಿ ಕ್ಷೇತ್ರದಿಂದ ಜನತಾದಳದ ಶಾಸಕರಾಗಿ ಆಯ್ಕೆಯಾದ ಅವರು, ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ಹಲವು ರಾಜಕೀಯ ಏರಿಳಿತಗಳ ನಡುವೆಯೂ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಪ್ರಭಾವ ಉಳಿಸಿಕೊಂಡಿದ್ದಾರೆ. ದೀರ್ಘ ರಾಜಕೀಯ ಅನುಭವ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ಶಿವಣ್ಣನವರ ಪರ ಬಲವಾದ ಅಂಶಗಳಾಗಿವೆ.

ಮತ್ತೆ ಸಕ್ರಿಯವಾದ ಲಾಬಿ?: ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ ಶಿವಣ್ಣನವರ ಹೆಸರು ಮತ್ತೆ ಮುನ್ನೆಲೆಗೆ ಬಂದಿರುವುದು ಅವರ ಬೆಂಬಲಿಗರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸಂಪುಟ ವಿಸ್ತರಣೆ ಬಳಿಕದ ಹಲವು ಬೆಳವಣಿಗೆಗಳು ಸಚಿವ ಸ್ಥಾನದ ಚರ್ಚೆಗೆ ಮತ್ತಷ್ಟು ಬಲ ನೀಡಿವೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ಆದರೆ ಸಚಿವ ಸ್ಥಾನ ನೀಡುವುದು ಕೇವಲ ವೈಯಕ್ತಿಕ ಅರ್ಹತೆ ಅಥವಾ ಹಿರಿತನದ ಆಧಾರದಲ್ಲಿ ನಡೆಯುವುದಿಲ್ಲ. ಪ್ರಾದೇಶಿಕ, ಸಾಮಾಜಿಕ ಹಾಗೂ ರಾಜಕೀಯ ಸಮೀಕರಣವೂ ಪ್ರಮುಖ ಪಾತ್ರ ವಹಿಸಲಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣನವರ ವಿಚಾರದಲ್ಲಿಯೂ ಅಂತಿಮ ನಿರ್ಧಾರ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿದೆ.

ಹಾವೇರಿಗೆ ಮತ್ತೊಂದು ಸಚಿವ ಸ್ಥಾನ?: ಈಗಾಗಲೇ ಹಾವೇರಿ ಜಿಲ್ಲೆಗೆ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡುವ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಒಂದೇ ಜಿಲ್ಲೆಯಿಂದ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕೇ ಎಂಬುದು ನಾಯಕತ್ವದ ಮುಂದಿರುವ ಮತ್ತೊಂದು ಲೆಕ್ಕಾಚಾರ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಜಿಲ್ಲೆಯ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಅವರನ್ನು ಪರಿಷತ್‌ ಸ್ಪೀಕರ್‌ ಹುದ್ದೆಯಲ್ಲಿ ಕೂರಿಸಲು ಈಗಾಗಲೇ ಸಿದ್ಧತೆ ನಡೆದಿದೆ. ಶಿವಣ್ಣನವರಗೂ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆಯ ಮೂವರಿಗೆ ಸ್ಥಾನಮಾನ ಸಿಕ್ಕಂತಾಗಲಿದೆ.

ಮೂರು ದಶಕಗಳಿಗೂ ಅಧಿಕ ಕಾಲದ ರಾಜಕೀಯ ಅನುಭವ ಹೊಂದಿರುವ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಿದರೆ, ಅದು ಹಿರಿಯ ಶಾಸಕರಿಗೆ ನೀಡುವ ಗೌರವವಾಗಲಿದೆ ಎಂಬ ಅಭಿಪ್ರಾಯ ಅವರ ಬೆಂಬಲಿಗರಲ್ಲಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತಲು ಸಚಿವ ಸ್ಥಾನ ನೆರವಾಗಲಿದೆ ಎಂಬ ನಿರೀಕ್ಷೆಯೂ ಇದೆ. ಅಲ್ಲದೇ ಪಕ್ಷಾತೀತವಾಗಿ ಶಿವಣ್ಣನವರಗೆ ಸಚಿವ ಸ್ಥಾನ ಸಿಗಬೇಕು ಎಂಬುವವರ ಸಂಖ್ಯೆ ಹೆಚ್ಚಿದೆ. ಆದರೆ ಸಚಿವ ಸ್ಥಾನಕ್ಕಾಗಿ ಪಕ್ಷದೊಳಗೇ ಹಲವು ಶಾಸಕರು ಪೈಪೋಟಿ ನಡೆಸುತ್ತಿರುವುದರಿಂದ ಇರುವ ಒಂದು ಖಾಲಿ ಸ್ಥಾನ ಸಿಗುವುದು ಅಷ್ಟು ಸುಲಭವೂ ಇಲ್ಲ ಎನ್ನಲಾಗುತ್ತಿದೆ. ಕೊನೆಯ ಹಂತದಲ್ಲಿ ಯಾರಿಗೆ ಅವಕಾಶ, ಯಾರಿಗೆ ನಿರಾಸೆ ಎಂಬುದು ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರವನ್ನೇ ಅವಲಂಬಿಸಲಿದೆ.

ಖಾಲಿ ಇರುವ ಒಂದು ಸ್ಥಾನ ಯಾರಿಗೆ ನೀಡಬೇಕು ಎಂಬ ಬಗ್ಗೆ ಪಕ್ಷದ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹಿಂದಿನಿಂದಲೂ ನನ್ನ ಪರವಾಗಿದ್ದಾರೆ. ನನ್ನ ಹೆಸರನ್ನೇ ಅವರು ಸಚಿವ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಪಟ್ಟಿಯಲ್ಲಿ ಹೆಸರು ಬಂದಿರಲಿಲ್ಲ. ಈಗ ಖಾಲಿಯಿರುವ ಸ್ಥಾನಕ್ಕೆ ನನಗೆ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುತ್ತಿಗೆ ಉದ್ಯೋಗಕ್ಕಾಗಿ ಹರಿದು ಬಂದ ಉದ್ಯೋಗಾಕಾಂಕ್ಷಿಗಳು
ಮೊಬೈಲ್ ದುರ್ಬಳಕೆಯಿಂದ ಹಾಳಾಗಬೇಡಿ