ಕನ್ನಡಪ್ರಭ ವಾರ್ತೆ ತುರುವೇಕೆರೆ
ಒಂದಲ್ಲಾ ನೂರು ಕೇಸ್ ನನ್ನ ಮೇಲೆ ಹಾಕಿದರೂ ಐ ಡೋಂಟ್ ಕೇರ್. ಆದರೆ ತಮ್ಮ ಉಳುವಿಗಾಗಿ ಹೋರಾಟ ಮಾಡಿದ ಅಮಾಯಕ ರೈತರ ಮೇಲೆ ಕೇಸ್ ಹಾಕಿದರೆ ನಾನು ಸಹಿಸಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕುಣಿಗಲ್, ರಾಮನಗರ, ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಎಕ್ಸ್ ಪ್ರೆಸ್ ಲೈನ್ ಮಾಡಿ ಇದ್ದ ಬದ್ದ ನೀರನ್ನೆಲ್ಲಾ ತೆಗೆದುಕೊಂಡು ಹೋದರೆ ಈ ಜಿಲ್ಲೆಯ ರೈತರು ಕೈಕಟ್ಟಿಕೊಂಡು ಕುಳಿತುಕೊಳ್ಳಬೇಕಾ?. ಜಿಲ್ಲೆಯ ರೈತರಿಗೆ ತೊಂದರೆಯಾಗುತ್ತೆ, ಈ ಯೋಜನೆ ಕೈ ಬಿಡಿ ಎಂದು ಸಾಕಷ್ಟು ಸಾರಿ ಹೇಳಿದ್ದೇವೆ. ಪ್ರತಿಭಟನೆ ಮಾಡಿದ್ದೇವೆ. ಆದರೂ ಸಹ ಈ ದರಿದ್ರ ಸರ್ಕಾರ ಜಿಲ್ಲೆಯ ರೈತರ ಹಿತವನ್ನು ಕಡೆಗಣಿಸಿ ಕೆನಾಲ್ ಕಾಮಗಾರಿ ಮುಂದುವರೆಸಿದೆ. ಇಂದು ಜಿಲ್ಲೆಯ ರೈತರು ಸುಮ್ಮನೆ ಕುಳಿತರೆ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಂಡಂತೆ, ಆತ್ಮಹತ್ಯೆ ಮಾಡಿಕೊಂಡಂತೆ ಆಗುತ್ತದೆ. ನಾವು ಕುಣಿಗಲ್, ರಾಮನಗರ. ಮಾಗಡಿಗೆ ನೀರು ತೆಗೆದುಕೊಂಡು ಹೋಗಬೇಡಿ ಎಂದು ಯಾವತ್ತೂ ಹೇಳಿಲ್ಲ. ಅವರೂ ನಮ್ಮವರೇ, ಅವರೂ ರೈತರೇ. ಆದರೆ ನಮ್ಮ ಹೋರಾಟ ನಮಗೆ ಮೀಸಲಿಟ್ಟಿರುವ ನೀರನ್ನು ನಮಗೇ ಇರಬೇಕು. ಸಾಮಾನ್ಯ ಕಾಲುವೆ ಮೂಲಕ ನೀರನ್ನು ತೆಗೆದುಕೊಂಡು ಹೋಗಿ. ಕಾಲುವೆಯನ್ನು ಅಗಲೀಕರಣ ಮಾಡಿ. ಬೇಡ ಅಂದವರ್ಯಾರು. ಆದರೆ ಪೈಪ್ ಲೈನ್ ಮೂಲಕ ನೀರನ್ನು ತೆಗೆದುಕೊಂಡು ಹೋದರೆ ನೀರು ಬಹು ಬೇಗ ಹರಿದು ಹೋಗಲಿದೆ. ನಮ್ಮ ಜಿಲ್ಲೆಗೆಂದು ಮೀಸಲಿಟ್ಟಿದ್ದ ನೀರಿಗೂ ತೊಂದರೆಯಾಗಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿವರಿಸಿದರು.
ನಮ್ಮ ಜಿಲ್ಲೆಯ ರೈತರ ಹಿತದೃಷ್ಠಿಯಿಂದ ಹೋರಾಟ ಮಾಡಿರುವ ಹಿನ್ನೆಲೆಯಲ್ಲಿ ನನ್ನನ್ನೂ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಮತ್ತು ಅಮಾಯಕ ರೈತರ ಮೇಲೆ ಪ್ರಕರಣ ದಾಖಲಿಸಿರುವುದು ದುರದೃಷ್ಠಕರ. ಈ ಎಲ್ಲಾ ಕೇಸುಗಳನ್ನು ಇನ್ನೊಂದು ವಾರದಲ್ಲಿ ಹಿಂತೆಗೆದುಕೊಳ್ಳಬೇಕು. ತಪ್ಪಿದಲ್ಲಿ ಎಸ್ಪಿ ಕಚೇರಿ ಮುಂದೆ ಸಾವಿರಾರು ರೈತಾಪಿಗಳೊಂದಿಗೆ ಅಹೋ ರಾತ್ರಿ ಧರಣಿ ನಡೆಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ.ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕಂಡೂ ಕಾಣದಂತಿರುವ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ನಡೆ ಖಂಡನೀಯ. ಅಧಿಕಾರಕ್ಕಾಗಿ ತಮ್ಮ ಜಿಲ್ಲೆಯ ರೈತರ ಹಿತವನ್ನು ಕಡೆಗಣಿಸಿರುವುದು ಹೇಯಕೃತ್ಯವಾಗಿದೆ. ಇದನ್ನು ನಾನು ಸಚಿವರಿಂದ ನಿರೀಕ್ಷಿಸಿರಲಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಶಾಲ್ ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೂವನಹಳ್ಳಿ ದೇವರಾಜ್, ಪಟ್ಟಣ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ವಿಜಯೇಂದ್ರ, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ಹರಿದಾಸನಹಳ್ಳಿ ಶಶಿಕುಮಾರ್ ಮುಖಂಡರಾದ ಮಾದಿಹಳ್ಳಿ ಕಾಂತರಾಜು, ಸಿ ಎಸ್ ಪುರ ರಾಮು, ಗುತ್ತಿಗೆದಾರ ಹುಲಿಕಲ್ ಶಂಕರೇಗೌಡ, ತೊರೆಮಾವಿನಹಳ್ಳಿ ದೇವರಾಜು, ಬೂವನಹಳ್ಳಿ ಬೋರೇಗೌಡ, ಇಂದ್ರಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.