ಹಾನಗಲ್ಲ: ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ತಾಪಂ ಸಹಯೋಗದಲ್ಲಿ ಗ್ರಾಪಂ ಮತ್ತು ಪುರಸಭೆ ಚುನಾಯಿತ ಮಹಿಳಾ ಸದಸ್ಯರಿಗೆ ಹಾನಗಲ್ಲಿನಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ ಮಾತನಾಡಿ, ಚುನಾಯಿತ ಸದಸ್ಯರು ಸಮುದಾಯದ ಜನರೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೆ ಅನುದಾನಗಳ ಜತೆ ಅನುದಾನ ಇಲ್ಲದೆಯು ಕೆಲವು ಸಾಮಾಜಿಕ ಕೆಲಸಗಳನ್ನು ಮಾಡಬಹುದಾಗಿದೆ ಮತ್ತು ಅವುಗಳ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತವಾಗಿದೆ ಎಂದು ಹೇಳಿದ ಅವರು, ಸದಸ್ಯರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮನೆ ಮನೆಗೆ ಹೋಗದೆ ಇತರೆ ದಿನಗಳಲ್ಲೂ ವಿಶೇಷವಾಗಿ ಭೇಟಿ ನೀಡಿ ಜನರ ಆರೋಗ್ಯ, ಹಿರಿಯ ನಾಗರಿಕರ, ಗರ್ಭಿಣಿ ಬಾಣಂತಿ ಮತ್ತು ಮಕ್ಕಳ ಆರೋಗ್ಯ ವಿಚಾರಿಸಿ ಸೂಕ್ತ ಸಲಹೆ ನೀಡುವುದು, ಅಂಗನವಾಡಿ, ಶಾಲೆ ಭೇಟಿಯ ಮೂಲಕ ಅವಶ್ಯಕ ಮೂಲಭೂತ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಪೂರೈಸಲು ಮುಂದಾಗುವುದು, ಆರೋಗ್ಯ ಶಿಬಿರ, ನೀರು ನೈರ್ಮಲ್ಯ ಜಾಗೃತಿ ಅಭಿಯಾನಗಳಂತಹ ಅರಿವು ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಹಮ್ಮಿಕೊಳ್ಳುವುದರಿಂದ ಗ್ರಾಮದ ಮಕ್ಕಳಿಗೆ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದು ಹೇಳಿ ಗ್ರಾಮ ಸಭೆ, ವಿಶೇಷ ಗ್ರಾಮ ಸಭೆ, ಮಹಿಳಾ ವಿಶೇಷ ಗ್ರಾಮ ಸಭೆ, ಸಾಮಾನ್ಯ ಸಭೆಯ ಮಹತ್ವ ಮತ್ತು ಸದಸ್ಯರ ಪಾತ್ರ, ಚುನಾಯಿತ ಸದಸ್ಯರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿವರವಾಗಿ ತರಬೇತಿ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ತಾಪಂ ಮ್ಯಾನೇಜರ ಶ್ವೇತಾ, ಜನವೇದಿಕೆ ಮುಖಂಡ ಕಲೀಮ್ ಮಾಸನಕಟ್ಟಿ, ಮಹಿಳಾ ಸಬಲೀಕರಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಸಿಬ್ಬಂದಿ ಶೀಲಾ ಮ್ಯಾಗಳಮನಿ, ರೂಪಾ ರಜಪೂತ, ಎಸ್.ವಿ. ಪಾಟೀಲ್ ಹಾಗೂ ಗ್ರಾಪಂ ಮತ್ತು ಪುರಸಭೆ ೪೦ ಸದಸ್ಯರು ಭಾಗವಹಿಸಿದ್ದರು.